ಹೊಸ ಚಿತ್ರಕ್ಕಾಗಿ ಭಾರಿ ತೂಕ ಇಳಿಸಿಕೊಂಡು ಅಚ್ಚರಿ ನೀಡಿದ ಸಿಂಬು
ತಮಿಳು ನಟ ಸಿಂಬು ಅಭಿನಯಿಸುತ್ತಿರುವ ಹೊಸ ಸಿನಿಮಾ ಆರಂಭದಲ್ಲೇ ಹೆಚ್ಚು ಸುದ್ದಿ ಮಾಡಿದೆ. ಅದರಲ್ಲೂ ಸಿಲಂಬರಸನ್ ಅವರ ಬಾಡಿ ಟ್ರಾನ್ಸ್ಫರ್ಮೇಶನ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಗೌತಮ್ ಮೆನನ್ ನಿರ್ದೇಶನದಲ್ಲಿ ಹೊಸ ಸಿನಿಮಾ ಕೈಗೆತ್ತಿಕೊಂಡಿರುವ ಸಿಂಬು ಈ ಚಿತ್ರಕ್ಕಾಗಿ ದೇಹದ ತೂಕ ಇಳಿಸಿಕೊಂಡಿದ್ದಾರೆ.
ಈ ಸಿನಿಮಾದ ಪಾತ್ರಕ್ಕಾಗಿ ತನ್ನ ದೇಹದ 15 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸ್ವತಃ ಸಿಂಬು ಬಹಿರಂಗಪಡಿಸಿದ್ದಾರೆ. ಇದುವರೆಗಿನ ವೃತ್ತಿ ಜೀವನದಲ್ಲಿ ಸಿಂಬು ಮೊದಲ ಬಾರಿಗೆ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನುವುದು ವಿಶೇಷ.
ಶುಕ್ರವಾರ ಸಿಂಬು ಬಾಡಿ ಟ್ರಾನ್ಸ್ಫರ್ಮೇಶನ್ ಫೋಟೋ ಹೊರಬಿದ್ದಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಿಂಬು ಅವರ ಈ ಡೆಡಿಕೇಶನ್ಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದು, ಆಕ್ಷನ್ ದೃಶ್ಯಗಳಿಗಾಗಿ ಹೆಚ್ಚಿನ ತರಬೇತಿ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ 6 ರಿಂದ ಹೊಸ ಸಿನಿಮಾದ ಚಿತ್ರೀಕರಣ ತಿರುಚೆಂದೂರಿನಲ್ಲಿ ಆರಂಭವಾಗಿತ್ತು. ಆದರೆ, ತಮಿಳು ಚಲನಚಿತ್ರ ನಿರ್ಮಾಪಕ ಮತ್ತು ದಕ್ಷಿಣ ಭಾರತದ ಕಾರ್ಮಿಕ ಒಕ್ಕೂಟ ನಡುವಿನ ಭಿನ್ನಾಭಿಪ್ರಾಯದಿಂದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮುಂದೆ ಓದಿ...

ಗಮನ ಸೆಳೆದಿದ್ದ ಫಸ್ಟ್ ಲುಕ್
ಆಗಸ್ಟ್ 6 ರಂದು ಗೌತಮ್ ಮೆನನ್-ಸಿಂಬು ಕಾಂಬಿನೇಷನ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಗೆಟಪ್ನಲ್ಲಿ ಸಿಂಬು ಗಮನ ಸೆಳೆದಿದ್ದರು. ಆದರೆ, ಈ ಪಾತ್ರಕ್ಕಾಗಿ ಈ ಮಟ್ಟದ ಬಾಡಿ ಟ್ರಾನ್ಸ್ಫರ್ಮೇಶನ್ ಮಾಡಿರುವುದು ತಿಳಿದಿರಲಿಲ್ಲ. ಇದೀಗ, ಫೊಟೋ ಬಹಿರಂಗವಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ರಾಧಿಕಾ ಶರತ್ ಕುಮಾರ್ ನಟನೆ
ಸಿಂಬು ಜೊತೆ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಧಿಕಾ ಮತ್ತು ಸಿಲಂಬರಸನ್ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋ ಇತ್ತೀಚಿಗಷ್ಟೆ ವೈರಲ್ ಆಗಿತ್ತು. ತಾಯಿ ಮತ್ತು ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಈ ಬಗ್ಗೆ ಸ್ಪಷ್ಟನೆ ಇಲ್ಲ.

ಕಾವೇರಿ ವಿಚಾರದಲ್ಲಿ ಕನ್ನಡಿಗರ ಮನ ಗೆದ್ದಿದ್ದ ಸಿಂಬು
2018ರಲ್ಲಿ ನಡೆದ ಕಾವೇರಿ ನದಿ ನೀರು ಹಂಚಿಕೆ ವಿವಾದದ ವೇಳೆ ನಟ ಸಿಂಬು ಕರ್ನಾಟಕದ ಪರ ಮಾತನಾಡಿ ಗಮನ ಸೆಳೆದಿದ್ದರು. ಕರ್ನಾಟಕ ಮತ್ತು ತಮಿಳುನಾಡು ಜನರು ಅಣ್ಣ-ತಮ್ಮ, ಅಕ್ಕ-ತಂಗಿಯಂತೆ ಇದ್ದಾರೆ. ಆದರೆ ರಾಜಕೀಯ ವ್ಯಕ್ತಿಗಳ ವೈಯಕ್ತಿಕ ಲಾಭಕ್ಕಾಗಿ ಈ ವಿವಾದವನ್ನು ಬೆಳಸುತ್ತಿದ್ದಾರೆ. ಸಿಂಬು ಆಡಿದ ಮಾತುಗಳು ಕನ್ನಡಿಗರ ಗಮನ ಸೆಳೆದಿತ್ತು. ಸಿಂಬು ಅವರ ಅಭಿಪ್ರಾಯಕ್ಕೆ ಕನ್ನಡ ಹೋರಾಟಗಾರರು, ಕರ್ನಾಟಕದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕನ್ನಡದಲ್ಲಿ ಹಾಡು ಹಾಡಿದ್ದಾರೆ
ಈ ಬೆಳವಣಿಗೆ ಆದ್ಮೇಲೆ ನಟ ಸಿಂಬು ಕನ್ನಡ ಸಿನಿಮಾವೊಂದರಲ್ಲಿ ಹಾಡು ಹಾಡಿದರು. ಮೇಘನಾ ರಾಜ್, ತಿಲಕ್ ನಟಿಸಿದ್ದ 'ಇರುವುದೆಲ್ಲವಾ ಬಿಟ್ಟು' ಚಿತ್ರದ ಹಾಡೊಂದಕ್ಕೆ ಸಿಂಬು ಧ್ವನಿಯಾಗಿದ್ದರು. ಈ ಹಾಡು ಹಿಟ್ ಸಹ ಆಗಿತ್ತು.

ತ್ರಿಷಾ ಜೊತೆ ಮದುವೆ?
ಸಿಂಬು ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಾದರೆ ನಯನತಾರ ಜೊತೆ ಪ್ರೀತಿಯಲ್ಲಿದ್ದರು. ಇನ್ನೆನೂ ಮದುವೆ ಆಗ್ತಾರೆ ಎನ್ನುವಷ್ಟರಲ್ಲಿ ಬ್ರೇಕ್ ಅಪ್ ಆಯಿತು. ಆಮೇಲೆ ನಟಿ ತ್ರಿಷಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತು. ಒಂದು ಹಂತದಲ್ಲಿ ಇವರಿಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿಯೂ ಚರ್ಚೆ ಆಯಿತು. ಆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.


Click it and Unblock the Notifications











