ಅಪಘಾತಕ್ಕೀಡಾದ ಖುಷ್ಬು ಇದ್ದ ಕಾರು: ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಟಿ
ನಟಿ, ರಾಜಕಾರಣಿ ಖುಷ್ಬು ಪ್ರಯಾಣಿಸುತ್ತಿದ್ದ ಕಾರು ಇಂದು (ನವೆಂಬರ್ 18) ಅಪಘಾತಕ್ಕೆ ಈಡಾಗಿದೆ. ನಟಿ ಖುಷ್ಬು ಪ್ರಯಾಣಿಸುತ್ತಿದ್ದ ಕಾರಿಗೆ ಟ್ಯಾಂಕರ್ ಒಂದು ಢಿಕ್ಕಿ ಹೊಡೆದಿದೆ.
ಖುಷ್ಬು ಅವರು ಕೂಡಲ್ಲೋರು ಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.
ಢಿಕ್ಕಿ ರಭಸಕ್ಕೆ ಖುಷ್ಬು ಪ್ರಯಾಣಿಸುತ್ತಿದ್ದ ಕಾರು ಜಖಂ ಆಗಿದೆ. ಕಾರಿನ ಚಿತ್ರಗಳನ್ನು ಖುಷ್ಬು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. 'ದೇವರು ಹಾಗೂ ನಿಮ್ಮಗಳ ಕೃಪೆಯಿಂದ ನಾನು ಪಾರಾಗಿದ್ದೇನೆ' ಎಂದಿದ್ದಾರೆ.

ದೇವರು ಹಾಗೂ ಜನರ ಪ್ರೀತಿ ಕಾಪಾಡಿತು: ಖುಷ್ಬು
'ಅಪಘಾತದ ನಂತರ ನಾನು ನನ್ನ ಪ್ರಯಾಣ ಮುಂದುವರೆಸುತ್ತಿದ್ದೇನೆ. ಕೋಡಲ್ಲೋರು ಕಡೆಗೆ ಹೋಗುತ್ತಿದ್ದೇನೆ, ಪೊಲೀಸರು ಘಟನೆಯ ತನಿಕೆ ನಡೆಸುತ್ತಿದ್ದಾರೆ. ದೇವರು ಮುರುಗನ್ ನಮ್ಮನ್ನು ಕಾಪಾಡಿದ, ಮುರುಗನ್ ಮೇಲೆ ನನ್ನ ಪತಿ ಏಕೆ ವಿಶ್ವಾಸ ಇಟ್ಟಿದ್ದರೆಂದು ಇಂದು ಗೊತ್ತಾಯಿತು' ಎಂದಿದ್ದಾರೆ ಖುಷ್ಬು.

ಎಲ್ಲಿಂದಲೋ ಬಂದ ಟ್ಯಾಂಕರ್ ಕಾರಿಗೆ ಗುದ್ದಿತು: ಖುಷ್ಬು
ಘಟನೆ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿರುವ ಖುಷ್ಬು, 'ನಾನು ರಸ್ತೆ ನಿಯಮದ ಪ್ರಕಾರ ಸರಿಯಾಗಿಯೇ ಹೋಗುತ್ತಿದ್ದೆ, ಆದರೆ ಅದೆಲ್ಲಿಂದಲೋ ಹಠಾತ್ತನೆ ಬಂದ ಟ್ಯಾಂಕರ್ ನನ್ನ ಕಾರಿಗೆ ಗುದ್ದಿತು, ಇದನ್ನು ಮಾಧ್ಯಮಗಳ ಗಮನಕ್ಕೆ ತರು ಇಚ್ಛೆಪಡುತ್ತಿದ್ದೇನೆ' ಎಂದಿದ್ದಾರೆ ಖುಷ್ಬು.

ಕಾರು ಚಾಲಕ ಪೊಲೀಸರ ವಶದಲ್ಲಿ
ಖುಷ್ಬು ಕಾರಿಗೆ ಡಿಕ್ಕಿ ಹೊಡೆದ ಟ್ಯಾಂಕರ್ನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 'ಘಟನೆಯಲ್ಲಿ ಏನಾದರೂ ಕುತಂತ್ರಗಳಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಟ್ಯಾಂಕರ್ ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ' ಎಂದಿದ್ದಾರೆ ಖುಷ್ಬು.
Recommended Video

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಖುಷ್ಬು
ನಟಿ ಖುಷ್ಬು ಕಾಂಗ್ರೆಸ್ ಪಕ್ಷ ತೊರೆದು ಇತ್ತೀಚೆಗಷ್ಟೆ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ಪ್ರಮುಖ ಬಿಜೆಪಿ ಮಹಿಳಾ ಮುಖಂಡರಾಗಿದ್ದಾರೆ ಖುಷ್ಬು. ಕೆಲವು ದಿನಗಳ ಹಿಂದಷ್ಟೆ ಪ್ರತಿಭಟನೆಗೆ ತೆರಳುತ್ತಿದ್ದ ಖುಷ್ಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.


Click it and Unblock the Notifications











