ಅಣ್ಣಾಮಲೈ ಅಧಮ, ಮಹಿಳಾ ಪೀಡಕ, ಕಳಪೆ ವ್ಯಕ್ತಿತ್ವದವ: ಬಿಜೆಪಿ ತೊರೆದ ನಟಿ
ಕರ್ನಾಟಕದಲ್ಲಿ ಐಪಿಎಸ್ ಆಗಿ ಕೆಲಸ ಮಾಡಿ ಜನಪ್ರಿಯತೆ ಗಳಿಸಿದ ಅಣ್ಣಾಮಲೈ ಇದೀಗ ಅದೇ ಜನಪ್ರಿಯ ಆಧಾರದ ಮೇಲೆ ಬಿಜೆಪಿ ಸೇರಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿದ್ದಾರೆ.
ಆದರೆ ಅಣ್ಣಾಮಲೈ ಅವರಿಂದ ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚೇನು ಸಹಾಯವಾಗುತ್ತಿಲ್ಲ ಬದಲಿಗೆ ಸಮಸ್ಯೆ ಆಗುತ್ತಿರುವಂತಿದೆ. ಬಿಜೆಪಿಯಲ್ಲಿದ್ದ ಜನಪ್ರಿಯ ನಟಿಯೊಬ್ಬರು ಬಿಜೆಪಿಯಿಂದ ಹೊರಗೆ ಬಂದಿದ್ದು, ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದಲೂ ತಮಿಳುನಾಡು ಬಿಜೆಪಿಯಲ್ಲಿ ಸಕ್ರಿಯರಾಗಿರುವ ನಟಿ ಗಾಯತ್ರಿ ರಘುರಾಮ್ ಇದೀಗ ಬಿಜೆಪಿಯಿಂದ ಹೊರಬಂದಿದ್ದು, ಇದಕ್ಕೆ ಅಣ್ಣಾಮಲೈ ನೇರ ಕಾರಣ ಎಂದಿದ್ದಾರೆ. ಅಣ್ಣಾಮಲೈ ಒಬ್ಬ ಕಳಪೆ ವ್ಯಕ್ತಿತ್ವದ ಸುಳ್ಳುಗಾರ ಎಂದಿರುವ ನಟಿ, ಅಣ್ಣಾಮಲೈನ ಕೆಟ್ಟ ವ್ಯಕ್ತಿತ್ವ ಹೊರಗೆ ಹಾಕುವ ಆಡಿಯೋ, ವಿಡಿಯೋ ಕ್ಲಿಪ್ಗಳು ನನ್ನ ಬಳಿ ಇವೆ. ಅವನ್ನು ಪೊಲೀಸರಿಗೆ ನೀಡಲು ನಾನು ತಯಾರಿದ್ದೇನೆ'' ಎಂದಿದ್ದಾರೆ.

ಬಿಜೆಪಿಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಇಲ್ಲ: ಗಾಯತ್ರಿ
ಬಿಜೆಪಿಯಿಂದ ಹೊರಗುಳಿಯಲು ನಾನು ನಿರ್ಧರಿಸಿದ್ದೇನೆ. ಈ ಪಕ್ಷದಲ್ಲಿ ನ್ಯಾಯಯುತವಾದ ತನಿಖೆ, ಲಿಂಗ ಸಮಾನತೆ, ಮಹಿಳೆಯರಿಗೆ ಸಮಾನ ಅವಕಾಶ ಇಲ್ಲ ಎನಿಸಿದೆ. ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಒಳಗೆ ಇದ್ದು ಹಿಂಸೆ ಅನುಭವಿಸುವುದಕ್ಕಿಂತಲೂ ಹೊರಗಡೆ ಇದ್ದು ಟ್ರೋಲ್ಗೆ ಒಳಗಾಗುವುದು ಉತ್ತಮ ಎಂದು ನನಗೆ ಅನಿಸಿದೆ'' ಎಂದಿದ್ದಾರೆ ನಟಿ ಗಾಯತ್ರಿ ರಘುರಾಮ್.

ಅಣ್ಣಾಮಲೈ ಕಳಪೆ ವ್ಯಕ್ತಿತ್ವದ ಸುಳ್ಳುಗಾರ: ಗಾಯತ್ರಿ
''ಇಂದು ನಾನು ಈ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅಣ್ಣಾಮಲೈ ಕಾರಣ. ಆತನೊಬ್ಬ ಕಳಪೆ ವ್ಯಕ್ತಿತ್ವದ ಸುಳ್ಳುಕೋರ. ಅರ್ಧಮವೇ ತುಂಬಿರುವ ನಾಯಕ. ನಿಜವಾದ ಕಾರ್ಯಕರ್ತರ ಬಗ್ಗೆ ಯಾರೂ ಯೋಚಿಸುವುದಿಲ್ಲ. ನಿಜವಾದ ಕಾರ್ಯಕರ್ತರನ್ನು ಪಕ್ಷದಿಂದ ದೂರ ಮಾಡುವುದೇ ಅಣ್ಣಾಮಲೈ ಕೆಲಸವಾಗಿದೆ. ಇನ್ನು ಮುಂದೆಯೂ ನನಗೆ ನರೇಂದ್ರ ಮೋದಿ, ಅಮಿತ್ ಶಾ ಮಾದರಿಯಾಗಿರುತ್ತಾರೆ'' ಎಂದಿದ್ದಾರೆ ನಟಿ.

ಬಿಜೆಪಿಯ ಮಹಿಳೆಯರೇ ಸುರಕ್ಷಿತವಾಗಿರಿ: ಗಾಯತ್ರಿ ರಘುರಾಮ್
''ಇತರರನ್ನು ನೋಯಿಸುವುದು ಹಿಂದೂ ಧರ್ಮವಲ್ಲ. ಅಣ್ಣಾಮಲೈ ನಾಯಕತ್ವದಲ್ಲಿ ಮುಂದುವರಿಯಲು ನನಗೆ ಸಾಧ್ಯವಿಲ್ಲ, ಅವರ ನಾಯಕತ್ವದಲ್ಲಿ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯ ಮಹಿಳೆಯರೇ ನೀವು ಸುರಕ್ಷಿತವಾಗಿರಿ, ಯಾರಾದರೂ ನಿಮ್ಮನ್ನು ರಕ್ಷಿಸುತ್ತಾರೆ ಎಂದು ನಂಬಬೇಡಿ. ಯಾರೂ ಬರುವುದಿಲ್ಲ. ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಬೇಕು. ನಿಮ್ಮನ್ನು ನೀವು ನಂಬಿರಿ. ನಿಮ್ಮನ್ನು ಗೌರವಿಸದ ಸ್ಥಳದಲ್ಲಿ ಎಂದಿಗೂ ಉಳಿಯಬೇಡಿ'' ಎಂದಿದ್ದಾರೆ ನಟಿ ಗಾಯತ್ರಿ ರಘುರಾಮ್.

''ಅಣ್ಣಾಮಲೈ ವಿರುದ್ಧ ದೂರು ನೀಡಲು ತಯಾರಿದ್ದೇನೆ''
ಅಣ್ಣಾಮಲೈ ವಿರುದ್ಧ ನಾನು ಪೊಲೀಸ್ ದೂರು ನೀಡಲುಸಹ ತಯಾರಿದ್ದೇನೆ. ನನ್ನ ಬಳಿ ಇರುವ ಎಲ್ಲ ವಿಡಿಯೋ ಹಾಗೂ ಆಡಿಯೋ ದಾಖಲೆಗಳನ್ನು ಪೊಲೀಸರಿಗೆ ನೀಡುತ್ತೇನೆ. ಅಣ್ಣಾಮಲೈ ಮಾತ್ರವೇ ಅಲ್ಲದೆ, ನನಗೆ ತೊಂದರೆ ಕೊಡುತ್ತಿರುವ ಬಿಜೆಪಿಯ ವಾರ್ ರೂಂ ವಿರುದ್ಧವೂ ದೂರು ನೀಡುತ್ತೇನೆ. ಈ ಹಿಂದೆ ಟೈಗರ್ ರವಿ ಎಂಬಾತನ ವಿರುದ್ಧ ನಟಿ ನೀಡಿದ್ದ ದೂರಿನ ಪ್ರತಿಯನ್ನು ಸಹ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











