ಕೊರೊನಾ ಬ್ರೇಕ್ ಬಳಿಕ ಅಖಾಡಕ್ಕಿಳಿದ ಸೂಪರ್ ಸ್ಟಾರ್ ರಜನಿಕಾಂತ್!
'ದರ್ಬಾರ್' ಚಿತ್ರದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಸಿನಿಮಾ 'ಅನ್ನಾಥೆ'. ಸಿರುತೈ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಭಾರಿ ಕುತೂಹಲ ಕೆರಳಿಸಿದೆ. ಏಕಂದ್ರೆ ರಜನಿಕಾಂತ್ ಗೆ ಮೊಟ್ಟ ಮೊದಲ ಸಲ ಶಿವ ನಿರ್ದೇಶನ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಮೂಲಗಳ ಪ್ರಕಾರ, ಅಕ್ಟೋಬರ್ 10 ರಿಂದ 'ಅನ್ನಾಥೆ' ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ಹೇಳಲಾಗಿದೆ. ಕೊರೊನಾ ವೈರಸ್ ಕಾರಣದಿಂದ ರಜನಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ, ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವ ಹಿನ್ನೆಲೆ ತಲೈವಾ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಮುಂದೆ ಓದಿ....

ಹೈದರಾಬಾದ್ನಲ್ಲಿ ಅನ್ನಾಥೆ
ಸದ್ಯದ ಮಾಹಿತಿ ಪ್ರಕಾರ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಅನ್ನಾಥೆ ಚಿತ್ರದ ಶೂಟಿಂಗ್ ನಡೆಯಲಿದೆ. ಅಕ್ಟೋಬರ್ 10 ರಂದು ರಜನಿಕಾಂತ್ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಇಡೀ ಚಿತ್ರತಂಡ ಪ್ಲಾನ್ ಮಾಡಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಸೂಪರ್ಸ್ಟಾರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಯನತಾರ-ಕೀರ್ತಿ ಸುರೇಶ್ ಸಹ ಭಾಗಿ
ಅಕ್ಟೋಬರ್ 10 ರಂದು ಪುನಾರರಂಭವಾಗಲಿರುವ ಅನ್ನಾಥೆ ಚಿತ್ರೀಕರಣದಲ್ಲಿ ನಯನತಾರಾ ಮತ್ತು ಕೀರ್ತಿ ಸುರೇಶ್ ಸಹ ಭಾಗಿಯಾಗಲಿದ್ದಾರೆ. ಈ ಹಿಂದೆ ನಿರ್ಧರಿಸಿದಂತೆ ನಯನತಾರ ಮತ್ತು ಕೀರ್ತಿ ಸುರೇಶ್ ಮಾತ್ರ ಪಾಲ್ಗೊಳ್ಳಬೇಕಿತ್ತು. ನಂತರ, ರಜನಿಕಾಂತ್ ಸಹ ಅದೇ ದಿನ ಶೂಟಿಂಗ್ ಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

ಬಹುದೊಡ್ಡ ತಾರಬಳಗ
ಸನ್ ಪಿಕ್ಚರ್ಸ್ ಸಂಸ್ಥೆಯ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ರಜನಿಕಾಂತ್, ಕೀರ್ತಿ ಸುರೇಶ್, ನಯನತಾರ ಜೊತೆಗೆ ಹಿರಿಯ ನಟಿಯರಾದ ಖುಷ್ಬೂ, ಮೀನಾ ಸಹ ಇರಲಿದ್ದಾರೆ. ಪ್ರಮುಖ ಖಳನಟ ಪಾತ್ರದಲ್ಲಿ ಜಾಕಿ ಶ್ರಾಫ್ ಇರಲಿದ್ದು, ಪ್ರಕಾಶ್ ರೈ ಮತ್ತು ಸೂರಿ ಸಹ ನಟಿಸಲಿದ್ದಾರೆ.
Recommended Video

2021ಕ್ಕೆ ಬಿಡುಗಡೆ!
ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಮುಗಿಯಬೇಕಿತ್ತು. ಕೊರೊನಾದಿಂದ ವಿಳಂಬವಾದರೂ ಸದ್ಯದ ಯೋಜನೆ ಪ್ರಕಾರ ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಆರಂಭಕ್ಕೆ ಸಿನಿಮಾ ಚಿತ್ರೀಕರಣ ಮುಗಿಯಲಿದೆ. ಮುಂದಿನ ವರ್ಷದ ಬೇಸಿಗೆ ರಜೆಯಷ್ಟರಲ್ಲಿ ಅನ್ನಾಥೆ ತೆರೆಮೇಲೆ ಬರಲಿದೆ.


Click it and Unblock the Notifications











