ಕೊವಿಡ್19: ಮದ್ಯ ಸಿಗದೆ ನಿದ್ರೆ ಮಾತ್ರೆ ಸೇವಿಸಿದ ಹಿರಿಯ ನಟಿ ಪುತ್ರ
ದೇಶದೆಲ್ಲೆಡೆ ಕೊರೊನಾವೈರಸ್ ಸೋಂಕಿನ ಭೀತಿ ಹೆಚ್ಚಾಗಿದ್ದು, 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ತಮಿಳು ಚಿತ್ರರಂಗ ಕೂಡಾ ಬಂದ್ ಆಗಿದೆ. ಈ ನಡುವೆ ಕೊರೊನಾ ಲಾಕ್ ಡೌನ್ ನಿಂದಾಗಿ ಮದ್ಯವ್ಯಸನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಸುದ್ದಿಗಳು ಬರುತ್ತಿವೆ.
ಹಿರಿಯ ನಟಿ ದಿವಂಗತ ಮನೋರಮಾ ಅವರ ಪುತ್ರ, ನಟ, ಗಾಯಕ ಭೂಪತಿ ಕೂಡಾ ಮದ್ಯ ಸಿಗದೆ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಇತರೆ ರಾಜ್ಯಗಳಂತೆ ತಮಿಳುನಾಡಿನಲ್ಲೂ ಮದ್ಯ ಮಾರಾಟವು ಸ್ಥಗಿತಗೊಂಡಿದೆ. ತಮಿಳು ಚಿತ್ರರಂಗ ಸೇರಿದಂತೆ ಹಲವು ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಮನೆ ಮಾತಾಗಿದ್ದ ನಟಿ ಮನೋರಮಾ ಅವರ ಪುತ್ರ ಭೂಪತಿ ಕೂಡ ಓರ್ವ ಮದ್ಯವ್ಯಸನಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮದ್ಯ ಸಿಗದೆ ಖಿನ್ನತೆಗೊಳಗಾಗಿದ್ದಾರೆ. ನಿದ್ರೆ ಮಾತ್ರೆ ಸೇವಿಸಿದ್ದಾರೆ. ಮಾತ್ರೆ ಓವರ್ ಡೋಸ್ ಆಗಿದೆ.
ಪ್ರಜ್ಞೆ ತಪ್ಪಿದ್ದ ಭೂಪತಿಯನ್ನು ಖಾಸಗಿ ಆಸ್ಪತ್ರೆ ಸೇರಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಭೂಪತಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಆತ್ಮಹತ್ಯೆ ಯತ್ನವೇ?
ಆತ್ಮಹತ್ಯೆ ಯತ್ನವೇ?: ಭೂಪತಿ ಆಪ್ತರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭೂಪತಿಗೆ ಆಲ್ಕೋಹಾಲ್ ಚಟ ಇದ್ದಿರಬಹುದು, ಆದರೆ, ಮದ್ಯ ಸಿಗದೆ ಖಿನ್ನತೆಗೊಳಗಾಗಿರಬಹುದು. ಆದರೆ, ನಿದ್ರೆ ಮಾತ್ರೆ ಸೇವನೆ ಮಾತ್ರ ವೈದ್ಯರ ಸಲಹೆಯಂತೆ ತೆಗೆದುಕೊಳ್ಳುತ್ತಿದ್ದರು. ಈ ಹಿಂದಿನ ಕೆಲವು ಅನಾರೋಗ್ಯ ಸಮಸ್ಯೆಯಿಂದಾಗಿ ನಿದ್ದೆ ಸರಿಯಾಗಿ ಮಾಡಲು ಆಗದ ಕಾರಣ, ವೈದ್ಯರ ಸಲಹೆ ಮೇರೆಗೆ ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಆದರೆ, ಮದ್ಯವ್ಯಸನದ ಕಾರಣಕ್ಕೋ ಏನೋ ಅಗತ್ಯಕ್ಕಿಂತ ಹೆಚ್ಚು ಮಾತ್ರೆ ಸೇವಿಸಿದ್ದಾರೆ.

ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಆಪ್ತರೊಬ್ಬರು ಕುಸಿದು ಬಿದ್ದಿದ್ದ ಭೂಪತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಭಾರತದಲ್ಲಿ ಸುಮಾರು 5274 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಸಮಯಕ್ಕೆ 149 ಮಂದಿ ಮೃತರಾಗಿದ್ದಾರೆ. ತಮಿಳುನಾಡಿನಲ್ಲಿ 690 ಪ್ರಕರಣ ದಾಖಲಾಗಿದ್ದು, 8 ಮಂದಿ ಮೃತರಾಗಿದ್ದಾರೆ.

2015ರಲ್ಲಿ ಮೃತರಾಗಿದ್ದ ನಟಿ ಮನೋರಮಾ
2015ರಲ್ಲಿ ಸಿನಿಮಾ ಕ್ಷೇತ್ರ ದಿಗ್ಗಜ ನಟಿ ಮನೋರಮಾ ಹೃದಯಾಘಾತದಿಂದ ಮೃತರಾದರು. ಮದುವೆಯಾಗಿ ಎರಡು ವರ್ಷದ ನಂತರ ಪತಿ ಜೊತೆ ವೈಮನಸ್ಯ ಮೂಡಿ, ವಿವಾಹ ವಿಚ್ಛೇದನ ಪಡೆದುಕೊಂಡ ಮನೋರಮಾ, ಒಬ್ಬನೇ ಮಗನನ್ನು ತುಂಬಾ ಜೋಪಾನವಾಗಿ ಬೆಳೆಸಿದ್ದರು. ಜೀವನದಲ್ಲಿ ನೋವುಂಡರೂ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಮಿಂಚಿದ ನಟಿ ಮನೋರಮಾ, ತಾವು ಚಿತ್ರರಂಗದಲ್ಲಿ ಕಷ್ಟು ಪಡುತ್ತಿರುವುದು ತಮ್ಮ ಪುತ್ರನಿಗಾಗಿ ಮಾತ್ರ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಮದ್ಯ ವ್ಯಸನಿಯಾಗಿದ್ದ ಭೂಪತಿ
ಶಿವಾಜಿ ಗಣೇಶನ್ ಅಭಿನಯದ ''ಕಲ್ತೂನ್" ಚಿತ್ರದಲ್ಲಿ ನಟಿಸಿದ ಭೂಪತಿ ನಂತರ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಗಾಯಕರು ಆಗಿದ್ದ ಭೂಪತಿ, ಚಿತ್ರರಂಗದಲ್ಲಿ ಅವಕಾಶಗಳು ಸಿಗದ ಕಾರಣ ಮದ್ಯ ವ್ಯಸನಿಯಾದರು ಎಂಬ ಸುದ್ದಿಯಿದೆ. ಆಲ್ಕೋಹಾಲ್ ಗೆ ಶರಣಾಗಿದ್ದರಿಂದ ಅನೇಕ ಬಾರಿ ಹಿರಿಯ ನಟಿ ಮನೋರಮಾಕ್ಕೆ ಮುಜುಗರವಾಗುವಂಥ ಪರಿಸ್ಥಿತಿಗಳು ಎದುರಾಗಿತ್ತು. ಭೂಪತಿ ಆರೋಗ್ಯ ಸುಧಾರಣೆಗಾಗಿ ಅವರ ಪತ್ನಿ ಧನಲಕ್ಷ್ಮಿ ಹಾಗೂ ಪುತ್ರಿ ಮೀನಾಕ್ಷಿ ದೇವರನ್ನು ಬೇಡುತ್ತಿದ್ದಾರೆ.


Click it and Unblock the Notifications











