ಹಾಸ್ಯನಟನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ ನಟ ಧನುಶ್-ವಿಜಯ್ ಸೇತುಪತಿ
ಹಾಸ್ಯ ನಟರು, ಪೋಷಕರ ನಟರು ಸಿನಿಮಾ ಒಂದಕ್ಕೆ ಬಹಳ ಮುಖ್ಯ ಆಸ್ತಿ. ಆದರೆ ನಮ್ಮ ನಡುವೆ ಹಲವು ಹಿರಿಯ ಪೊಷಕ ನಟರು, ಹಾಸ್ಯ ನಟರಿದ್ದಾರೆ. ದಶಕಗಳಿಂದ ಸಿನಿಮಾಗಳಲ್ಲಿ ಕೆಲಸ ಮಾಡಿದಾಗ್ಯೂ ಕೊನೆಯ ದಿನಗಳಲ್ಲಿ ಬಹಳ ಕಷ್ಟಗಳನ್ನು ಕಾಣುತ್ತಾರೆ, ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸುತ್ತಾರೆ.
ಇದೇ ಸ್ಥಿತಿ ತಮಿಳಿನ ಜನಪ್ರಿಯ ಹಾಸ್ಯ ನಟ ಬೋಂಡಾ ಮಣಿಗೆ ಬಂದೊದಗಿದೆ. ಹಾಸ್ಯ ನಟ ಬೋಂಡಾ ಮಣಿ ದಶಕಗಳಿಂದಲೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಖ್ಯಾತ ಹಾಸ್ಯ ನಟ ವಡಿವೇಲು ನೆರಳಲ್ಲಿಯೂ ಸಾಕಷ್ಟು ಗಮನ ಸೆಳೆಯಲು ಸಫಲರೂ ಆಗಿದ್ದರು ಬೋಂಡಾ ಮಣಿ. ಆದರೀಗ ಅವರು ಸಂಕಷ್ಟದಲ್ಲಿದ್ದಾರೆ.
ಬೋಂಡಾ ಮಣಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ. ಅವರ ಎರಡೂ ಕಿಡ್ನಿಗಳು ನಿಷ್ಕ್ರಿಯಗೊಂಡಿದ್ದು, ಚೆನ್ನೈನ ಒಮಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು, ಎರಡೂ ಕಿಡ್ನಿ ವಿಫಲವಾಗಿರುವ ಕಾರಣ ಚಿಕಿತ್ಸೆಯ ಖರ್ಚುಗಳು ಸಹ ಹೆಚ್ಚಾಗಿವೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೋಂಡಾ ಮಣಿಗೆ ಚಿಕಿತ್ಸೆಗೆ ಹಣ ಹೊಂದಿಸುವುದು ತ್ರಾಸವಾಗಿದೆ.

ಇದೀಗ ತಮಿಳಿನ ಇಬ್ಬರು ಸ್ಟಾರ್ ನಟರು ಹಾಸ್ಯ ನಟ ಬೋಂಡಾ ಮಣಿಯ ಸಹಾಯಕ್ಕೆ ಧಾವಿಸಿದ್ದಾರೆ. ಖ್ಯಾತ ನಟ ಧನುಶ್ ಹಾಗೂ ನಟ ವಿಜಯ್ ಸೇತುಪತಿ ಇಬ್ಬರೂ ಸಹ ಬೋಂಡಾ ಮಣಿ ಚಿಕಿತ್ಸೆಗೆಂದು ತಲಾ ಒಂದು ಲಕ್ಷ ರುಪಾಯಿ ಹಣ ನೀಡಿದ್ದಾರೆ.
ವಿಜಯ್ ಸೇತುಪತಿ ಈ ಹಿಂದೆಯೇ ಹಾಸ್ಯನಟನ ಚಿಕಿತ್ಸೆಗೆ ಹಣ ನೀಡಿದ್ದರು. ಇದೀಗ ನಟ ಧನುಶ್ ಸಹ ನೀಡಿದ್ದಾರೆ. ಅಲ್ಲದೆ ತಮಿಳಿನ ಖ್ಯಾತ ಹಾಸ್ಯನಟ ವಡಿವೇಲು ಸಹ ಕಮಿಡಿಯನ್ ಬೋಂಡಾ ಮಣಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಆಸ್ಪತ್ರೆ ಬೆಡ್ ಮೇಲಿರುವ ಬೋಂಡಾ ಮಣಿ ತಮಗೆ ಸಹಾಯದ ಅಗತ್ಯವಿದೆಯೆಂದು ಹೇಳಿದ್ದು, ಈಗ ಸಹಾಯ ಮಾಡಿರುವ ನಟರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮಿಳಿನ ಇನ್ನೂ ಕೆಲವು ಹಾಸ್ಯನಟರು ಹಾಗೂ ಪೋಷಕ ನಟರು ಬೋಂಡಾ ಮಣಿಯ ಸಹಾಯಕ್ಕೆ ಧಾವಿಸಿದ್ದಾರೆ.


Click it and Unblock the Notifications











