ಭಾರತೀಯ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ನಟ ಧನುಷ್: ಹೇಗಿತ್ತು ಸಿನಿ ಜರ್ನಿ?
ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮ ಅದ್ಬುತ ನಟನೆಯ ಮೂಲಕವೇ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಧನುಷ್ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳು ಪೂರೈಸಿವೆ. ಈ ಇಪ್ಪತ್ತು ವರ್ಷದ ಸಂಭ್ರಮವನ್ನು ನಟ ಧನುಷ್ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಹೀರೊ ಆಗಬೇಕು ಎಂಬ ಬಯಕೆಯಿಂದ ಸಿನಿ ಲೋಕಕ್ಕೆ ಕಾಲಿಟ್ಟ ನಟ ಧನುಷ್, ತಮ್ಮ ಸಿನಿ ಜರ್ನಿಯ ಆರಂಭದಲ್ಲೇ ಸಾಕಷ್ಟು ನೋವು, ಅಪಹಾಸ್ಯಗಳನ್ನು ಎದುರಿಸಬೇಕಾಯಿತು. ಇಡೀ ತಮ್ಮ ಜೀವನವನ್ನೇ ಸಿನಿಮಾಗೋಸ್ಕರ ಮುಡಿಪಾಗಿಟ್ಟು, ಚಿತ್ರರಂಗಕ್ಕೆ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಬಂದಿದ್ದರು. ಅದೆಷ್ಟು ಅವಮಾನಗಳನ್ನು ಎದುರಿಸಿ ಈಗ ಧನುಷ್ ತಮಿಳು ಚಿತ್ರರಂಗದಲ್ಲಿ ಉತ್ತಮ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಯಶಸ್ಸಿನ ಉತ್ತುಂಗದಲ್ಲಿರುವ ಧನುಷ್ ಚಿತ್ರರಂಗಕ್ಕೆ ಪ್ರವೇಶಿಸಿ ನಿನ್ನೆಗೆ (ಮೇ 10) 20 ದಶಕಗಳೇ ಕಳೆದು ಹೋಗಿವೆ. 20 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಧನುಷ್ ತನ್ನ ಈ ಪ್ರಗತಿಗೆ ಬೆಂಬಲವಾಗಿ ನಿಂತ ಸ್ನೇಹಿತರು, ಅಭಿಮಾನಿಗಳು, ಕುಟುಂಬದವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

'ತುಳ್ಳುವದೋ ಇಲ್ಲಮೈ' ರಿಲೀಸ್ ಆಗಿ 20 ವರ್ಷ
ತಮ್ಮ ಸಿನಿ ಪಯಣ 20 ವರ್ಷ ಪೂರೈಸಿರುವ ಹಿನ್ನೆಲೆ ನಟ ಧನುಷ್ ಟ್ವಿಟರ್ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. "ನಾನು ಚಿತ್ರರಂಗದಲ್ಲಿ ಪಯಣವನ್ನು ಪ್ರಾರಂಭಿಸಿ ಎರಡು ದಶಕಗಳು ಕಳೆದಿವೆ. ನಿಜಕ್ಕೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಸಮಯ ಹೇಗೆ ಕಳೆಯಿತು ಎಂಬುದು ನನಗೆ ಗೊತ್ತಾಗಲಿಲ್ಲ. ನನ್ನ ಮೊದಲ ಸಿನಿಮಾ 'ತುಳ್ಳುವದೋ ಇಲ್ಲಮೈ' ಚಿತ್ರದಲ್ಲಿ ನಟಿಸಿದಾಗ ನಾನು ಚಿತ್ರರಂಗದಲ್ಲಿ ಇಷ್ಟು ವರ್ಷದವರೆಗೂ ನಟನಾಗಿ ಇರುತ್ತೇನೆ ಎಂದು ಊಹಿಸಿರಲಿಲ್ಲ. ಎಲ್ಲಾ ದೇವರ ದಯೆ. ನನ್ನ ಮೊದಲ ಚಿತ್ರ ರಿಲೀಸ್ ಆಗಿ 20 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ ಚಿತ್ರರಂಗದಲ್ಲಿ ದುಡಿದಿದ್ದೇನೆ. ಎಷ್ಟೋ ಅವಮಾನ, ಅಪಹಾಸ್ಯಗಳನ್ನು ಎದುರಿಸಿ, ಇಂದು ಗಟ್ಟಿಯಾಗಿ ಚಿತ್ರರಂಗದಲ್ಲಿ ಬೆಳೆದು ನಿಂತಿದ್ದೇನೆ." ಎಂದು ಧನುಷ್ ತಮ್ಮ ಮನದಾಳದ ಮಾತುಗಳನ್ನು ಅಕ್ಷರಗಳಲ್ಲಿ ಹೇಳಿಕೊಂಡಿದ್ದಾರೆ.
"ನಿಮ್ಮೆಲ್ಲರ ಸಹಕಾರವೇ ನನ್ನ ಈ ಸಾಧನೆಗೆ ಸ್ಪೂರ್ತಿ"
ನಟ ಧನುಷ್ ವಿಶೇಷವಾಗಿ ಅವರ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. "20 ವರ್ಷಗಳ ಕಾಲ ನಿರಂತರವಾಗಿ ನಿಮ್ಮ ಪ್ರೀತಿಯನ್ನು ನನಗೆ ಧಾರೆ ಎರೆದಿದ್ದೀರಿ. ನನ್ನ ಸೋಲು, ಗೆಲುವಲ್ಲೂ ಕೂಡ ನನ್ನ ಕೈ ಬಿಡದೇ ಬೆಂಬಲಿಸಿದ್ದೀರಿ. ನಿಮ್ಮ ಪ್ರೀತಿಯೇ ನನ್ನ ಶಕ್ತಿಗೆ ಆಧಾರ ಸ್ತಂಭ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ನನ್ನ ಪ್ರೀತಿಸಿ, ಹರಸುತ್ತಿರುವ ಜಗತ್ತಿನಾದ್ಯಂತ ಇರುವ ಎಲ್ಲಾ ಸಿನಿ ಪ್ರೇಮಿಗಳಿಗೆ ನಾನು ಹೃದಯ ತುಂಬಿ ಧನ್ಯವಾದ ಹೇಳುತ್ತೇನೆ. ಇದರ ಜೊತೆ ನನ್ನ ಬೆಂಬಲಕ್ಕೆ ನಿಂತ ಮಾಧ್ಯಮ ವರ್ಗಕ್ಕೂ ಕೂಡ ಧನ್ಯವಾದಗಳು. ಇಷ್ಟು ವರ್ಷ ನನ್ನ ಜೊತೆ ಕೆಲಸ ಮಾಡಿದ ನಿರ್ದೇಶಕರು, ನಿರ್ಮಾಪಕರು, ನನ್ನ ಸಹ ಕಲಾವಿದರು ಹಾಗೂ ತಂತ್ರಜ್ಞರಿಗೂ ಧನ್ಯವಾದ ಹೇಳುತ್ತೇನೆ. ಇದಿಷ್ಟೇ ಅಲ್ಲದೆ ಪ್ರಮುಖವಾಗಿ ನನ್ನ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸಹೋದರ, ನನ್ನ ತಂದೆ ಕಸ್ತೂರಿ ರಾಜಾ ನನ್ನಲ್ಲಿರುವ ಒಬ್ಬ ನಟನನ್ನು ಹೊರ ತಂದರು. ಇನ್ನು ನನ್ನ ತಾಯಿ ನನ್ನ ಗೆಲುವಿಗಾಗಿ ಪ್ರತಿನಿತ್ಯ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಅವಳ ಪ್ರಾರ್ಥನೆಯೇ ನನ್ನನ್ನು ಇಲ್ಲಿಯವರೆಗೂ ತಂದಿದೆ ಅವಳಿಲ್ಲದೆ ನಾನು ಏನು ಇಲ್ಲ." ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಹಾಲಿವುಡ್ನಲ್ಲೂ ನಟ ಧನುಷ್ ನಟನೆ
ಧನುಷ್ 2013 ರಲ್ಲಿ ಆನಂದ್ ಎಲ್. ರೈ ಅವರ 'ರಾಂಜನಾ' ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ನಟಿ ಸೋನಮ್ ಕಪೂರ್ ಜೊತೆ ಧನುಷ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಬಳಿಕ 2015ರಲ್ಲಿ ಅಮಿತಾಭ್ ಬಚ್ಚನ್ ಜೊತೆ 'ಶಮಿತಾಭ್' ಸಿನಿಮಾದಲ್ಲಿ ನಟಿಸಿ ಅಲ್ಲೂ ಕೂಡ ಸೈ ಎನಿಸಿಕೊಂಡರು. ನಂತರ ಮತ್ತೆ ಆನಂದ್ ಎಲ್ ರೈ ಅವರ ಜೊತೆ 2021ರಲ್ಲಿ 'ಅತ್ರಂಗಿರೇ' ಸಿನಿಮಾದಲ್ಲಿ ಸಾರಾ ಆಲಿ ಆನ್ ಮತ್ತು ಅಕ್ಷಯ್ ಕುಮಾರ್ ಜೊತೆ ನಟಿಸಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡರು. ಈಗ 'ದಿ ಗ್ರೇ ಮ್ಯಾನ್' ಸಿನಿಮಾ ಮೂಲಕ ಹಾಲಿವುಡ್ಗೂ ಧನುಷ್ ಪಾದಾರ್ಪಣೆ ಮಾಡುತ್ತಿದ್ದಾರೆ. ನೆಟ್ ಫ್ಲಿಕ್ಸ್ ನಿರ್ಮಿಸಿರುವ ಅತ್ಯಂತ ದುಬಾರಿ ಚಿತ್ರ ಇದಾಗಿದ್ದು, ಚಿತ್ರದಲ್ಲಿ ರಯಾನ್ ಗೊಸ್ಲಿಂಗ್ ಮತ್ತು ಕ್ರಿಸ್ ಇವಾನ್ಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕರಾದ ಆಂಥೋನಿ ಮತ್ತು ಜೋ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಟ ಧನುಷ್ ಹಾಲಿವುಡ್ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಧನುಷ್ ಮುಂಬರುವ ಚಿತ್ರಗಳಾವುವು?
ಧನುಷ್ ತಮ್ಮ 20 ವರ್ಷದ ಸಿನಿ ಹಾದಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಈ ಕಷ್ಟದ ಹಾದಿಯನ್ನೇ ಅವರು ಜಯಿಸಿ, ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 'ಅಸುರನ್' ಹಾಗೂ 'ಆಡುಕಾಲಂ' ಸಿನಿಮಾದಲ್ಲಿ ಅದ್ಬುತವಾಗಿ ನಟಿಸಿದ್ದಾಗಿ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. 'ಕಾಕಾ ಮುತ್ತೈ' ಅತ್ಯುತ್ತಮ ಮಕ್ಕಳ ಚಿತ್ರ ಹಾಗೂ 'ವಿಸಾರಣೈ' ತಮಿಳಿನ ಮತ್ತೊಂದು ಚಿತ್ರವನ್ನು ನಿರ್ಮಿಸಿದ್ದಕ್ಕೆ ಧನುಷ್ಗೆ ಎರಡು ರಾಷ್ಟ್ರ ಪ್ರಶಸ್ತಿ ದೊರೆತಿದೆ. ಸದ್ಯ ಈಗ ಹಾಲಿವುಡ್ 'ದಿ ಗ್ರೇ ಮ್ಯಾನ್' ಹೊರತು ಪಡಿಸಿದಂತೆ ತಮಿಳಿನಲ್ಲಿ 'ಮಾರನ್' ಮತ್ತು 'ವಾತಿ' ಹಾಗೂ ತೆಲುಗಿನಲ್ಲಿ 'ಸರ್' ಎಂಬ ದ್ವಿಭಾಷಾ ಸಿನಿಮಾದಲ್ಲಿ ನಟ ಧನುಷ್ ಅಭಿನಯಿಸುತ್ತಿದ್ದಾರೆ.


Click it and Unblock the Notifications











