ವಿಡಿಯೋ: ರಶ್ಮಿಕಾ ಹಿಂದೆ ಬಿದ್ದ ಅಭಿಮಾನಿಗಳು, ಬುದ್ಧಿವಾದ ಹೇಳಿದ ನಟಿ
'ಕಿರಿಕ್ ಪಾರ್ಟಿ'ಯ ಸಾನ್ವಿ ಜೋಸೆಫ್ ಪಾತ್ರದ ಮೂಲಕ ಕರ್ನಾಟಕದಲ್ಲಿ ಅಭಿಮಾನಿ ಬಳಗ ಸಂಪಾದಿಸಿದ್ದ ನಟಿ ರಶ್ಮಿಕಾಗೆ ಈಗ ಕರ್ನಾಟಕಕ್ಕಿಂತಲೂ ಇತರೆ ರಾಜ್ಯಗಳಲ್ಲಿಯೇ ಅಭಿಮಾನಿಗಳು ಹೆಚ್ಚು.
ತೆಲುಗು, ತಮಿಳು ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ ಕಾರಣ ರಶ್ಮಿಕಾ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಯಾವ ಮಟ್ಟಿಗೆಂದರೆ ಒಮ್ಮೆಯಂತೂ ತೆಲಂಗಾಣದ ಯುವಕನೊಬ್ಬ ರಶ್ಮಿಕಾರನ್ನು ಹುಡುಕಿಕೊಂಡು ಕೊಡಗಿಗೆ ಬಂದು ಬಿಟ್ಟಿದ್ದ.
ಈಗ ತಮಿಳುನಾಡಿನಲ್ಲಿಯೂ ಇಂಥಹುದೇ ಘಟನೆ ನಡೆದಿದೆ. ರಶ್ಮಿಕಾ ಮಂದಣ್ಣ ನಟಿಸಿರುವ ಹೊಸ ತಮಿಳು ಸಿನಿಮಾ 'ವಾರಿಸು'ನ ಆಡಿಯೋ ಲಾಂಚ್ ಇತ್ತೀಚೆಗೆ ಅದ್ಧೂರಿಯಾಗಿ ಚೆನ್ನೈನಲ್ಲಿ ನೆರವೇರಿತು. ಕಾರ್ಯಕ್ರಮ ಮುಗಿದ ಬಳಿಕ ರಶ್ಮಿಕಾ ತಮ್ಮ ಕಾರಿನಲ್ಲಿ ಹೋಗುವಾಗ ಕೆಲವು ಅಭಿಮಾನಿಗಳು ಅವರನ್ನು ಹಿಂಬಾಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮ ಮುಗಿಸಿಕೊಂಡು ನಟಿ ರಶ್ಮಿಕಾ ಮಂದಣ್ಣ ಇನ್ನೊವಾ ಕಾರೊಂದರಲ್ಲಿ ಹೋಗುತ್ತಿರುವಾಗ ಕೆಲವು ಅಭಿಮಾನಿಗಳು ರಶ್ಮಿಕಾರ ಹೆಸರು ಕೂಗುತ್ತಾ ಬೈಕ್ನಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ಆಗ ರಶ್ಮಿಕಾ, ಕಾರನ್ನು ನಿಲ್ಲಿಸುವಂತೆ ಸೂಚಿಸಿ, ಕಾರಿನ ವಿಂಡೋ ಗ್ಲಾಸ್ ಇಳಿಸಿ, ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸುವಂತೆ ಮನವಿ ಮಾಡಿದ್ದಾರೆ.

ರಶ್ಮಿಕಾ, ಅಭಿಮಾನಿಗಳಿಗೆ ಬುದ್ಧಿ ಹೇಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ರಶ್ಮಿಕಾರ ಕಾಳಜಿಗೆ ಅಭಿಮಾನಿಗಳು ಶಭಾಷ್ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಇದೀಗ ತೆಲುಗು, ತಮಿಳು ಹಾಗೂ ಬಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸ್ಟಾರ್ ನಟ ವಿಜಯ್ ಜೊತೆ ನಟಿಸಿರುವ 'ವಾರಿಸು' ಜನವರಿ 12 ಕ್ಕೆ ಬಿಡುಗಡೆ ಆಗಲಿದೆ. ಬಾಲಿವುಡ್ನಲ್ಲಿ ರಶ್ಮಿಕಾ ಈಗಾಗಲೇ ಒಂದು ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ. ರಶ್ಮಿಕಾ ನಟಿಸಿರುವ ಎರಡನೇ ಬಾಲಿವುಡ್ ಸಿನಿಮಾ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಅದರ ಜೊತೆಗೆ ಮತ್ತೊಂದು ಹಿಂದಿ ಸಿನಿಮಾದಲ್ಲಿ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ.


Click it and Unblock the Notifications











