ದಿಗ್ಗಜ ನಟ ಶಿವಾಜಿ ಗಣೇಶನ್ಗೆ ಗೂಗಲ್ ನಮನ
ತಮಿಳು ಚಿತ್ರರಂಗದ ಲೆಜೆಂಡ್ ಕಲಾವಿದ ಶಿವಾಜಿ ಗಣೇಶನ್ ಅವರ 93ನೇ ಹುಟ್ಟುಹಬ್ಬವನ್ನು ಗೂಗಲ್ ಸಂಭ್ರಮಿಸಿದೆ. ತಮಿಳರ ನೆಚ್ಚಿನ ಕಲಾವಿದರ ಜನುಮದಿನಕ್ಕೆ ವಿಶೇಷವಾದ ಡೂಡ್ಲ್ ಪ್ರಕಟಿಸಿ ನಮನ ಸಲ್ಲಿಸಿದೆ.
ನೆಟ್ಟಿಗರ ಗಮನ ಸೆಳೆಯುತ್ತಿರುವ ಈ ಡೂಡ್ಲ್ ರಚಿಸಿರುವುದು ಭಾರತೀಯ ಮೂಲದ ಕಲಾವಿದ ನೂಪುರ ರಾಜೇಶ್ ಚೋಕ್ಸಿ.
1928ರಲ್ಲಿ ಶಿವಾಜಿ ಗಣೇಶನ್ ತಮಿಳುನಾಡಿನ ವಿಲ್ಲುಪುರಂನಲ್ಲಿ ಜನಿಸಿದರು. ಇವರ ಮೊದಲ ಹೆಸರು ಗಣೇಶಮೂರ್ತಿ. 7ನೇ ವಯಸ್ಸಿನಲ್ಲಿ ಕುಟುಂಬ ಹಾಗೂ ಮನೆಯವರನ್ನು ಬಿಟ್ಟು ಬಂದರು. ಬಾಲ್ಯದಲ್ಲಿಯೇ ನಾಟಕ ತಂಡ ಸೇರಿ ಜೀವನ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾದರು. ಆರಂಭದಲ್ಲಿ ಮಕ್ಕಳ ಮತ್ತು ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು. ತದನಂತರ ನಿಧಾನವಾಗಿ ಮುಖ್ಯ ಪಾತ್ರಗಳಲ್ಲಿ ನಟಿಸಿದರು.

1945ರ ಡಿಸೆಂಬರ್ನಲ್ಲಿ ಗಣೇಶನ್ 17ನೇ ಶತಮಾನದ ರಾಜ ಶಿವಾಜಿ ಕುರಿತಾದ ನಾಟಕ ಪ್ರದರ್ಶಿಸಿದರು. ಈ ಪಾತ್ರ ಅವರಿಗೆ ವೈಯಕ್ತಿಕವಾಗಿ ಹೆಚ್ಚು ಮನ್ನಣೆ ತಂದುಕೊಡ್ತು. ಅದರ ಪರಿಣಾಮ ಗಣೇಶನ್ ತನ್ನ ಹೆಸರಿನೊಂದಿಗೆ ಶಿವಾಜಿ ಸೇರಿಸಿಕೊಂಡರು. ಅಲ್ಲಿಂದ ಶಿವಾಜಿ ಗಣೇಶನ್ ಎಂದು ಖ್ಯಾತರಾದರು.
1952ರಲ್ಲಿ 'ಪರಾಶಕ್ತಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇದು ಶಿವಾಜಿ ಗಣೇಶನ್ ಅವರ ಚೊಚ್ಚಲ ಸಿನಿಮಾ. ಇಲ್ಲಿಂದ ಆರಂಭವಾದ ಸಿನಿ ಜರ್ನಿ ಸುಮಾರು ಐದು ದಶಕಗಳಿಗೆ ಹೆಚ್ಚು ಕಾಲ ಮುಂದುವರಿಯಿತು. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದರು. ತಮಿಳು ಭಾಷೆ ಮೇಲೆ ಅವರ ಹೊಂದಿದ್ದ ಹಿಡಿತ ಹಾಗೂ ಸಿನಿಮಾಗಳಲ್ಲಿನ ಅವರ ಅಭಿವ್ಯಕ್ತಿಶೀಲ ಧ್ವನಿ, ಜೊತೆಗೆ ವೈವಿಧ್ಯಮಯ ಪಾತ್ರಗಳ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರು.
ಈ ಸಂದರ್ಭದಲ್ಲಿ ಶಿವಾಜಿ ಗಣೇಶನ್ ನಟನೆಯಲ್ಲಿ ಬಂದಿದ್ದ 'ಪಾಸಮಲಾರ್' ಚಿತ್ರ ಸ್ಮರಿಸಿಬಹುದು. 1961ರಲ್ಲಿ ಬಂದಿದ್ದ ಈ ಚಿತ್ರ ಆಗಿನ ಸಮಯಕ್ಕೆ ಟ್ರೆಂಡ್ಸೆಟ್ ಮಾಡಿತ್ತು. ಕೌಟುಂಬಿಕ ಭಾವನಾತ್ಮಕ ಕಥಾಹಂದರ ಹೊಂದಿದ್ದ ಈ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಅದರ ಜೊತೆಗೆ 1964ರಲ್ಲಿ ಬಂದ 'ನವರಾತ್ರಿ' ಚಿತ್ರವೂ ಮರೆಯಲು ಸಾಧ್ಯವಿಲ್ಲ. ಇದು ಶಿವಾಜಿಯ 100ನೇ ಚಿತ್ರ ಆಗಿತ್ತು. ಈ ಸಿನಿಮಾದಲ್ಲಿ ಒಂಬತ್ತು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದರು.

1960ರಲ್ಲಿ 'ವೀರಪಾಂಡಿಯ ಕಟ್ಟಬೊಮ್ಮನ್' ಚಿತ್ರಕ್ಕಾಗಿ ಶಿವಾಜಿ ಗಣೇಶನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಆಗಿನ ಸಮಯದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗೆಳಿಕೆ ಗಳಿಸಿಕೊಂಡಿದ್ದರು.
ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ಅವರು ಸಲ್ಲಿಸಿರುವ ಕೊಡುಗೆ ಗೌರವಿಸಿ 1997ರಲ್ಲಿ ಭಾರತ ಸರ್ಕಾರವು ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ.
ಶಿವಾಜಿ ಗಣೇಶನ್ 1952ರಲ್ಲಿ ಕಮಲ ಎಂಬ ಯುವತಿಯನ್ನು ಮದುವೆಯಾದರು. ಈ ದಂಪತಿಗೆ ನಾಲ್ಕು ಜನ ಮಕ್ಕಳು. ಶಿವಾಜಿ ಪ್ರಭು ತಮಿಳು ಇಂಡಸ್ಟ್ರಿಯಲ್ಲಿ ಖ್ಯಾತ ನಟ. ರಾಮ್ ಕುಮಾರ್ ಸಹ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದರು. ಶಾಂತಿ ಮತ್ತು ತೇನ್ಮೊಳಿ ಇಬ್ಬರು ಹೆಣ್ಣು ಮಕ್ಕಳು. ಪ್ರಭು ಮಗ ವಿಕ್ರಂ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗೂ ರಾಮ್ ಕುಮಾರ್ಗೆ ಇಬ್ಬರು ಗಂಡು ಮಕ್ಕಳು. ದುಶ್ಯಂತ್ ಮತ್ತು ಶಿವಾಜಿ ದೇವ್. ಜುಲೈ 2001ರಲ್ಲಿ ಶಿವಾಜಿ ಗಣೇಶನ್ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಶಿವಾಜಿ ಗಣೇಶನ್ ಅವರು ಎರಡು ಕನ್ನಡ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. 1958ರಲ್ಲಿ ತೆರೆಕಂಡ 'ಸ್ಕೂಲ್ ಮಾಸ್ಟರ್' ಹಾಗೂ 1960ರಲ್ಲಿ ಬಂದ 'ಮಕ್ಕಳ ರಾಜ್ಯ' ಸಿನಿಮಾಗಳಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ.


Click it and Unblock the Notifications











