ಕಲ್ಪನಾ ಮೂಲಕ ಲಕ್ಷ್ಮೀ ರೈ ಸೆಕೆಂಡ್ ಇನ್ನಿಂಗ್ಸ್ ಶುರು
ಅಪ್ಪಟ ಕನ್ನಡತಿ, ಬೆಳಗಾವಿ ಬೆಡಗಿ ಲಕ್ಷ್ಮೀ ರೈ ಮತ್ತೆ ಕನ್ನಡದ ಚಿತ್ರದ ಮೂಲಕ ತೆರೆಯ ಮೇಲೆ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಮುಂದಿನ ವಾರ (28 ಸೆಪ್ಟೆಂಬರ್ 2012) ಬಿಡುಗಡೆಯಾಗಲಿರುವ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಡೈಲಾಗ್ ಕಿಂಗ್ ಸಾಯಿಕುಮಾರ್ ಸಂಗಮದ 'ಕಲ್ಪನಾ' ಚಿತ್ರದಲ್ಲಿ ಲಕ್ಷ್ಮೀ ರೈ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲಿಗೆ, ಈ ಮೊದಲು ಕನ್ನಡದಲ್ಲಿ 'ಸ್ನೇಹಾನಾ ಪ್ರೀತಿನಾ' ಹಾಗೂ 'ಮಿಂಚಿನ ಓಟ' ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಕನ್ನಡತಿ ಮರಳಿ ಗೂಡಿಗೆ ಬಂದಂತಾಗಿದೆ.
ಸಾಕಷ್ಟು ಎತ್ತರವಾಗಿದ್ದು ಸಿನಿಮಾಗೆ ಹೇಳಿ ಮಾಡಿಸಿದಂತೆ ತೆಳ್ಳಗೆ ಬೆಳ್ಳಗೆ ಇದ್ದ ಲಕ್ಷ್ಮೀ ರೈ ಅದ್ಯಾಕೋ ಕನ್ನಡದಲ್ಲಿ ಕ್ಲಿಕ್ ಆಗಲೇ ಇಲ್ಲ. ನಟಿಸಿದ ಎರಡೂ ಚಿತ್ರಗಳು ತೋಪಾಗಿದ್ದಕ್ಕೋ ಏನೋ ಕನ್ನಡದ ನಿರ್ಮಾಪಕರು, ನಿರ್ದೇಶಕರು ಈ ನಟಿಯನ್ನು ಮತ್ತೊಂದು ಚಿತ್ರಕ್ಕೆ ಕರೆಯಲೇ ಇಲ್ಲ. ಅವರೂ ಅಷ್ಟೇ, ಇಲ್ಲೇ ಇದ್ದು ಏನಾದರೂ ಒಂದು ಮಾಡಿಕೊಂಡಿರಲು ಇಷ್ಟಪಡಲಿಲ್ಲ. ತಮಿಳು ಚಿತ್ರರಂಗದ ಕಡೆ ಮುಖ ಮಾಡಿ ಗೆದ್ದರು, ತೆಲುಗಿನಲ್ಲೂ ಬಹುಬೇಡಿಕೆ ನಟಿಯಾದರು.
ಬಿಡುಗಡೆಯಾಗಲಿರುವ ಕನ್ನಡದ 'ಕಲ್ಪನಾ' ತಮಿಳು ಚಿತ್ರ 'ಕಾಂಚನಾ'ದ ರೀಮೇಕ್. ಮೂಲ ತಮಿಳು ಚಿತ್ರ 'ಕಾಂಚನಾ'ದಲ್ಲಿ ಕೂಡ ಲಕ್ಷ್ಮೀ ರೈ ನಾಯಕಿ. ನಾಯಕಿಯನ್ನು ಬದಲಾಯಿಸಿದೇ 'ಕಾಂಚನಾ' ಚಿತ್ರವನ್ನು 'ಕಲ್ಪನಾ' ಹೆಸರಿನಲ್ಲಿ ಕನ್ನಡಕ್ಕೆ ತಂದಿರುವ ಉಪೇಂದ್ರ ಅಂಡ್ ಟೀಮ್, ಈ ಚಿತ್ರದ ಬಗ್ಗೆ ಭಾರಿ ಭರವಸೆ ಹೊಂದಿದೆ. ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್ ಗಳು ಮೂಡಿರುವ ಭರವಸೆಗೆ ಪುಷ್ಟಿ ನೀಡುವಂತಿವೆ.
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಜೊತೆ ನಟಿಸಲು ಸಿಕ್ಕ ಅವಕಾಶಕ್ಕಾಗಿ ಖುಷಿ ವ್ಯಕ್ತಪಡಿಸಿರುವ ಈ ಬೆಡಗಿ, "ಕನ್ನಡದಲ್ಲಿ ಈಗ ನನಗೆ ಬಹಳಷ್ಟು ಆಫರ್ ಗಳು ಬರುತ್ತಿವೆ. ಆದರೆ ನಾನೀಗ ತಮಿಳು-ತೆಲುಗಿನಲ್ಲಿ ಬಿಜಿಯಾಗಿದ್ದೇನೆ" ಎಂದಿದ್ದಾರೆ. ಪರಭಾಷೆಯಲ್ಲಿ ಯಶಸ್ವಿಯಾದ ನಟ-ನಟಿಯರಿಗೆ ಕನ್ನಡದಲ್ಲಿ ಇದ್ದಕ್ಕಿದ್ದಂತೆ ಭಾರಿ ಬೇಡಿಕೆ ಸೃಷ್ಟಿಯಾಗಿಬಿಡುವ ಸತ್ಯವನ್ನು ಬಲ್ಲ ಕನ್ನಡಿಗರು ಈ ನಟಿಯ ಮಾತನ್ನು ನಂಬದಿರಲು ಅಸಾಧ್ಯ. ಆದರೆ ಅವರೀಗ ಪರಭಾಷೆ ಚಿತ್ರಗಳಲ್ಲಿ ಬಿಜಿಯಾಗಿರುವುದರಿಂದ 'ಕಲ್ಪನಾ' ಬಿಡುಗಡೆ ನಂತರವೂ ಕನ್ನಡಿಗರಿಗೆ ಲಭ್ಯವಾಗದಿದ್ದರೆ ಆಶ್ಯರ್ಯವೇನೂ ಇಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











