ವರಲಕ್ಷ್ಮಿ ಶರತ್ಕುಮಾರ್ ಪ್ರಯತ್ನಕ್ಕೆ ಶುಭಕೋರಿದ ಕಿಚ್ಚ ಸುದೀಪ್
ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರ ಹೊಸ ಪ್ರಯತ್ನಕ್ಕೆ ಕನ್ನಡ ನಟ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ವರಲಕ್ಷ್ಮಿ ಮತ್ತು ಸುದೀಪ್ ಬಹಳ ಒಳ್ಳೆಯ ಸ್ನೇಹಿತರು. ವರಲಕ್ಷ್ಮಿ ಅವರ ಹೊಸ ಪ್ರಯತ್ನಗಳಿಗೆ ಸುದೀಪ್ ಯಾವಾಗಲೂ ಬೆಂಬಲಿಸಿರುವ ಉದಾಹರಣೆಗಳಿವೆ.
ಇದೀಗ, ವರಲಕ್ಷ್ಮಿ ಶರತ್ ಕುಮಾರ್ ನಟನೆಯಿಂದ ನಿರ್ದೇಶಕನಕ್ಕೆ ಜಿಗಿದಿದ್ದಾರೆ. ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದ ಶರತ್ ಕುಮಾರ್ ಮಗಳು, ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
'ಕಣ್ಣಾಮುಚ್ಚಿ' ಎಂಬ ಚಿತ್ರವನ್ನು ವರಲಕ್ಷ್ಮಿ ನಿರ್ದೇಶಿಸುತ್ತಿದ್ದಾರೆ. ಅಕ್ಟೋಬರ್ 18 ರಂದು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದ್ದರು.

ವರಲಕ್ಷ್ಮಿ ಹೊಸ ಪ್ರಯತ್ನಕ್ಕೆ ಶುಭಕೋರಿರುವ ಸುದೀಪ್ ''ಇದು ನಿಜವಾಗಲೂ ಆಶ್ಚರ್ಯ ತಂದಿದೆ ಮತ್ತು ನೀವು ತೆಗೆದುಕೊಂಡ ಅದ್ಭುತ ಹೆಜ್ಜೆ ಇದು. ಸ್ವಯಂ ಅನ್ವೇಷಣೆಯೊಂದಿಗೆ ನೀವು ಇಷ್ಟಪಡುವ ಕಡೆಗೆ ಇನ್ನೂ ಒಂದು ಹೆಜ್ಜೆ ಇಡುವುದು ಉತ್ತಮ ನಿರ್ಧಾರ. ಪೋಸ್ಟರ್ ಸೂಪರ್ ಆಗಿ ಕಾಣುತ್ತಿದೆ. ಆಲ್ ದಿ ಬೆಸ್ಟ್ ಫ್ರೆಂಡ್'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.
ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಈ ಹಿಂದೆ ವಿಜಯ್ ನಟಿಸಿದ್ದ 'ಮೆರ್ಸಲ್' ಚಿತ್ರವನ್ನು ನಿರ್ಮಿಸಿದ್ದ ತೇನಾಂಡಲ್ ಫಿಲಂಸ್ ಕಣ್ಣಾಮುಚ್ಚಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ವರಲಕ್ಷ್ಮಿಯ ಚೊಚ್ಚಲ ಪ್ರಯತ್ನಕ್ಕೆ ಸೌತ್ ಇಂಡಸ್ಟ್ರಿಯ ಖ್ಯಾತ ನಟಿಮಣಿಯರಾದ ತ್ರಿಷಾ, ಖುಷ್ಬೂ, ರಾಧಿಕಾ ಶರತ್ ಕುಮಾರ್, ಲಕ್ಷ್ಮಿ ಮಂಚು, ಕಾಜಲ್ ಅಗರ್ವಾಲ್, ಆಂಡ್ರಿಯಾ, ತಾಪ್ಸಿ ಪೆನ್ನಾ ಸೇರಿದಂತೆ ಹಲವರು ಫಸ್ಟ್ ಲುಕ್ ಶೇರ್ ಮಾಡಿ ಪ್ರೋತ್ಸಾಹಿಸಿದ್ದಾರೆ.


Click it and Unblock the Notifications











