ಅವಾರ್ಡ್ ಕಾರ್ಯಕ್ರಮಕ್ಕೆ ಹೋದ ನಯನತಾರ ವಿರುದ್ಧ ಆಕ್ರೋಶ
'ಲೇಡಿ ಸೂಪರ್ ಸ್ಟಾರ್' ಎಂದು ಕರೆಸಿಕೊಳ್ಳುತ್ತಿರುವ ನಯನತಾರ ಸದ್ಯ ದರ್ಬಾರ್ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಸತತ ಸಿನಿಮಾಗಳನ್ನು ಮಾಡುತ್ತಿರುವ ನಯನತಾರ ದಕ್ಷಿಣ ಚಿತ್ರರಂಗದ ಬೇಡಿಕೆ ನಟಿ.
ಇತ್ತೀಚಿಗಷ್ಟೆ ತಮಿಳು ಜೀ ಸಂಸ್ಥೆ ಆಯೋಜಿಸಿದ್ದ ಪ್ರಶಸ್ತಿ ಸಮಾರಂಭಕ್ಕೆ ನಯನತಾರ ಹೋಗಿದ್ದರು. ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಹೆಸರಿನಲ್ಲಿ ನೀಡುವ 'ಭಾರತೀಯ ಚಿತ್ರರಂಗದ ಸ್ಪೂರ್ತಿದಾಯಕ ಮಹಿಳೆ' ಪ್ರಶಸ್ತಿಯನ್ನು ನಯನತಾರಗೆ ನೀಡಿ ಗೌರವಿಸಲಾಯಿತು.
ಆದ್ರೀಗ, ನಯನತಾರ ಈ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಕಾಲಿವುಡ್ ಇಂಡಸ್ಟ್ರಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಏಕೆ? ಮುಂದೆ ಓದಿ...

ನಯನತಾರ ಕಂಡಿಷನ್ ಏನು?
ನಯನತಾರ ಸಿನಿಮಾಗೆ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಷರತ್ತು ಹಾಕಿ ಸಹಿ ಹಾಕ್ತಾರೆ ಎಂಬ ಮಾತಿದೆ. ಚಿತ್ರೀಕರಣ ಮಾಡ್ತೀನಿ, ಶೂಟಿಂಗ್ ಮುಗಿದ ಮೇಲೆ ನಾನು ಪ್ರಚಾರಕ್ಕೆ ಬರಲ್ಲ ಎನ್ನುವುದು ನಯನತಾರ ಕಂಡಿಷನ್. ಈ ಷರತ್ತಿನ ಬಗ್ಗೆ ತಮಿಳು ನಿರ್ದೇಶಕ ಮತ್ತು ನಿರ್ಮಾಪಕರು ಆಕ್ರೋಶ ಹೊರಹಾಕಿದ್ದಾರೆ.

ಪ್ರಚಾರಕ್ಕೆ ಬರಲ್ಲ, ಪ್ರಶಸ್ತಿ ಮಾತ್ರ ಬೇಕು
ನಿರ್ಮಾಪಕರು ಕೋಟಿ ಕೋಟಿ ಹಣ ಹಾಕಿ ಸಿನಿಮಾ ಮಾಡ್ತಾರೆ. ನಯನತಾರ ಮಾತ್ರ ಸಿನಿಮಾ ಪ್ರಚಾರಕ್ಕೆ ಬರಲ್ಲ. ಆದರೆ, ಅವಾರ್ಡ್ ಕಾರ್ಯಕ್ರಮಗಳಿಗೆ ಮಾತ್ರ ತಪ್ಪದೇ ಹೋಗ್ತಾರೆ. ಅನ್ನದಾತರು ಎನ್ನುವ ನಿರ್ಮಾಪಕರಿಗಿಂತ ಅವಾರ್ಡ್ ಹೆಚ್ಚಾಯ್ತು ಅವರಿಗೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹೀರೋ ಯಾರೇ ಆದರೂ ಬರಲ್ಲ
ಪ್ರಚಾರಕ್ಕೆ ಬರಲ್ಲ ಎಂದು ಷರತ್ತು ಹಾಕುವ ನಯನತಾರ, ಹೀರೋ ಯಾರೇ ಇದ್ದರೂ ನಿರ್ಧಾರ ಮಾತ್ರ ಬದಲಾಯಿಸಲ್ಲ. ಇತ್ತೀಚಿಗಷ್ಟೆ ವಿಜಯ್ ಜೊತೆ ಬಿಗಿಲ್ ಸಿನಿಮಾ ಮಾಡಿದ್ರು. ಆ ಚಿತ್ರದ ಕಾರ್ಯಕ್ರಮಕ್ಕೂ ಬಂದಿಲ್ಲ. ಈಗ ದರ್ಬಾರ್ ಸಿನಿಮಾ ಮಾಡಿದ್ರು. ಈ ಚಿತ್ರದ ಪ್ರಚಾರಕ್ಕೂ ಬಂದಿಲ್ಲ.

ನಯನತಾರ ಯಾಕೆ ಪ್ರಚಾರಕ್ಕೆ ಬರಲ್ಲ?
ನಯನತಾರ ಯಾಕೆ ಪ್ರಚಾರಕ್ಕೆ ಭಾಗಿಯಾಗಿಲ್ಲ ಎಂಬುದರ ಬಗ್ಗೆ ಈ ಹಿಂದೆ ಮಾತನಾಡಿದ್ದರು. ''ನಾನು ಬಹಳ ಖಾಸಗಿ ವ್ಯಕ್ತಿ. ಹೆಚ್ಚು ಜನರು ಸೇರುವ ಕಡೆ ನಾನು ಹೋಗಲು ಇಷ್ಟಪಡುವುದಿಲ್ಲ. ನನ್ನನ್ನು ಸಾಕಷ್ಟು ಬಾರಿ ತಪ್ಪಾಗಿ ಉಲ್ಲೇಖಿಸಲಾಗಿದೆ ಮತ್ತು ಅರ್ಥೈಸಲಾಗಿದೆ. ಹಾಗಾಗಿ, ನಾನು ಜನದಟ್ಟಣೆ ಇರುವ ಸ್ಥಳದಿಂದ ಹಿಂದೆ ಇರುತ್ತೇನೆ'' ಎಂದು ನಯನತಾರ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











