ಸೆಲೆಬ್ರಿಟಿಗಳ ತೆರಿಗೆ ಮನ್ನಾ: ವಿಜಯ್ ನಂತರ ಧನುಷ್ ಕಾಡುತ್ತಿರುವ Ghost
ನಲವತ್ತೆಂಟು ಗಂಟೆಗಳಲ್ಲಿ ಬಾಕಿ ಇರುವ ವಿದೇಶಿ ಕಾರು ತೆರಿಗೆ ಪಾವತಿಸುವಂತೆ ನಟ ಧನುಷ್ಗೆ ಮದ್ರಾಸ್ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ. ಈ ಮೂಲಕ ಮತ್ತೊಮ್ಮೆ ಸೆಲೆಬ್ರಿಟಿಗಳ ಕಾರು ತೆರಿಗೆ ಮನ್ನಾಕ್ಕೆ ಕೋರ್ಟ್ ತಪರಾಕಿ ನೀಡಿದೆ. ವಿದೇಶದಿಂದ ಐಷಾರಾಮಿ ಕಾರು ಆಮದು ಮಾಡಿಕೊಂಡು ತೆರಿಗೆ ಕಟ್ಟದೆ ಸೆಲೆಬ್ರಿಟಿ ಎಂದು ಓಡಾಡುವ ಸಿನಿತಾರೆಯರಿಗೆ ಮತ್ತೊಮ್ಮೆ ನ್ಯಾಯಾಲಯದಿಂದ ಸರಿಯಾದ ಪೆಟ್ಟು ಬಿದ್ದಿದೆ.
ಇತ್ತೀಚೆಗೆ ತಮಿಳು ಚಿತ್ರರಂಗ ಸೂಪರ್ ಸ್ಟಾರ್ ಎನಿಸಿಕೊಂಡಿರುವ ''ಇಳಯ ದಳಪತಿ'' ವಿಜಯ್ ಪರ ವಕೀಲರಿಗೆ ಮದ್ರಾಸ್ ಹೈಕೋರ್ಟ್ ಬಿಸಿ ಮುಟ್ಟಿಸಿತ್ತು. ಈಗ ಸ್ಟಾರ್ ನಟ ರಜನಿ ಕಾಂತ್ ಅಳಿಯ, ಜನಪ್ರಿಯ ನಟ ಕಸ್ತೂರಿ ರಾಜ ಧನುಷ್ ಸರದಿ. ವಿಜಯ್ ಹಾಗೂ ಧನುಷ್ ಇಬ್ಬರಿಗೂ ಕಾಡುತ್ತಿರುವುದು ಅದೇ ರೋಲ್ಸ್ ರಾಯ್ಸ್ ಘೋಸ್ಟ್ . ಇಬ್ಬರು ಹಲವು ವರ್ಷಗಳ ಹಿಂದೆ ತಮ್ಮ ಕಾರು ಸಂಗ್ರಹದಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳಲು ಈ ಭಾರಿ ಗಾತ್ರದ ಐಷಾರಾಮಿ ಕಾರು ಆಮದು ಮಾಡಿಕೊಂಡಿದ್ದರು. ಜೊತೆಗೆ ತೆರಿಗೆ ಮನ್ನಾ ಮಾಡುವಂತೆ ಕೋರಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆದಿದೆ.

ಕೋರ್ಟ್ ಆದೇಶವೇನು?:
ಧನುಷ್ ಅವರು ಇಂಗ್ಲೆಂಡ್ನಿಂದ ಆಮದು ಮಾಡಿಕೊಂಡ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಪ್ರವೇಶ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಬಾಕಿ ಇರುವ ₹ 30,30,757 (ಸುಮಾರು ₹ 30.3 ಲಕ್ಷಗಳು) ಮೊತ್ತವನ್ನು ಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ. 2015ರಲ್ಲಿ ಧನುಷ್ ಸಲ್ಲಿಸಿದ್ದ ರಿಟ್ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ನಟ ತನ್ನ ವೃತ್ತಿಯನ್ನು ಬಹಿರಂಗಪಡಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಟೀಕಿಸಿದೆ. ವಿಜಯ್ ಕೂಡಾ ಇದೇ ತಪ್ಪನ್ನು ಎಸಗಿದ್ದರು.

ಧನುಷ್ ಪರ ವಕೀಲರ ವಾದ:
ಸೋಮವಾರದೊಳಗೆ ಉಳಿದ ತೆರಿಗೆ ಪಾವತಿಸಲು ಸಿದ್ಧವಿದ್ದು 2015ರ ರಿಟ್ ಅರ್ಜಿಯನ್ನು ಹಿಂಪಡೆಯಲು ಹಿಂಪಡೆಯಲು ಬಯಸಿರುವುದಾಗಿ ಧನುಷ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ತಕ್ಷಣ ಪ್ರಕರಣ ಹಿಂಪಡೆಯಲು ಒಪ್ಪದ ಜಸ್ಟೀಸ್ ಎಸ್ . ಎಂ ಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಪ್ರಕರಣವನ್ನು ಸುಪ್ರೀಂಕೋರ್ಟ್ ವರ್ಷಗಳ ಹಿಂದೆಯೇ ಇತ್ಯರ್ಥಪಡಿಸಿರುವಾಗ ನಟ ಈ ಮೊದಲೇ ಯಾಕೆ ತೆರಿಗೆ ಪಾವತಿಸದೆ ಅರ್ಜಿ ಹಿಂಪಡೆಯಲು ಮುಂದಾದರು ಎಂದು ಪ್ರಶ್ನಿಸಿತು.

2.15 ಕೋಟಿ ರುಗೆ ಕಾರು ಖರೀದಿಸಿದ್ದ ಧನುಷ್
ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 2.15 ಕೋಟಿ ರು ನೀಡಿ ಇಂಗ್ಲೆಂಡಿನಿಂದ ಧನುಷ್ ಕಾರು ಖರೀದಿಸಿದ್ದಾರೆ. ಅಬಕಾರಿ ಸುಂಕ 2.69 ಕೋಟಿ ರು ಪಾವತಿಸಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿ ಪ್ರವೇಶ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಧನುಷ್ ಪರ ವಕೀಲರು ವಾದಿಸಿದ್ದರು. ಆದರೆ, ಅಫಿಡವಿಟ್ ನಲ್ಲಿ ಧನುಷ್ ಒಬ್ಬ ನಟ ಎಂಬುದನ್ನು ನಮೂದಿಸಿಲ್ಲ. ಧನುಷ್ಗೆ ಬೇಕಾದ ರೀತಿಯಲ್ಲಿ ಅಫಿಡವಿಟ್ ತಿದ್ದಲು ಸಹಕರಿಸಿದ ಕೋರ್ಟ್ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲು ನ್ಯಾ. ಸುಬ್ರಮಣಿಯನ್ ಸೂಚಿಸಿದ್ದಾರೆ.

ಶೇ 50 ರಷ್ಟು ತೆರಿಗೆ ಪಾವತಿಸಲು ಸೂಚಿಸಲಾಗಿತ್ತು
ತೆರಿಗೆ ಪಾವತಿ ಮಾಡದ ಸಂಬಂಧ ಆರು ವರ್ಷಗಳ ಹಿಂದಿನ ವಿಚಾರಣೆ ವೇಳೆ ಧನುಷ್ಗೆ ರೂ ಒಂದು ಲಕ್ಷ ದಂಡವನ್ನು ನ್ಯಾಯಾಲಯವ ವಿಧಿಸಿತ್ತು. ಶೇ 50ರಷ್ಟು ಪ್ರವೇಶ ತೆರಿಗೆ ಪಾವತಿಸಲು ಮಧ್ಯಂತರ ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಮತ್ತೆ ಅಂತಿಮ ವಿಚಾರಣೆ ನಡೆದಿದ್ದು, ಧನುಷ್ ಪರ ವಕೀಲರಾದ ವಿಜಯನ್ ಸುಬ್ರಮಣಿಯನ್ ಅವರು ತಮ್ಮ ಕಕ್ಷಿದಾರ ಪೂರ್ತಿ ಹಣವನ್ನು ಪಾವತಿಸಿ, ಅರ್ಜಿ ಹಿಂಪಡೆಯಲು ಸಿದ್ಧ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡರು.

ರೀಲ್ ನಾಯಕರಂತೆ ವರ್ತಿಸುವ ಅಗತ್ಯವಿಲ್ಲ
"ಪ್ರವೇಶ ತೆರಿಗೆ ಪಾವತಿ ತಪ್ಪಿಸುವ ಸಲುವಾಗಿ" ಅರ್ಜಿ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳು ಕೋರಿದ ಪ್ರವೇಶ ತೆರಿಗೆಯನ್ನು ಅವರು ಪ್ರಾಮಾಣಿಕವಾಗಿ ಪಾವತಿಸಬೇಕಿತ್ತು ಎಂದು ನ್ಯಾ ಸುಬ್ರಮಣ್ಯಂ ಅಭಿಪ್ರಾಯಪಟ್ಟಿದ್ದಾರೆ. ''ಅವರು ರೀಲ್ ನಾಯಕರಂತೆ ವರ್ತಿಸುವ ಅಗತ್ಯವಿಲ್ಲ. ತೆರಿಗೆ ವಂಚನೆ ರಾಷ್ಟ್ರ ವಿರೋಧಿ ಅಭ್ಯಾಸ ಮತ್ತು ಮನಸ್ಥಿತಿಯಾಗಿದ್ದು ಅದು ಅಸಾಂವಿಧಾನಿಕ. ಈ ನಟರು ತಮ್ಮನ್ನು ತಾವು ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವ ಹರಿಕಾರರು ಎಂದು ಬಿಂಬಿಸಿಕೊಳ್ಳುತ್ತಾರೆ. ಅವರ ಸಿನಿಮಾಗಳು ಸಮಾಜದಲ್ಲಿನ ಭ್ರಷ್ಟಾಚಾರದ ವಿರುದ್ಧ ಇರುತ್ತವೆ. ಆದರೆ ಅವರು ತೆರಿಗೆ ತಪ್ಪಿಸುತ್ತಿದ್ದು ಕಾನೂನಿಗೆ ಹೊರತಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ," ಎಂದು ನ್ಯಾ ಸುಬ್ರಮಣ್ಯಂ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೆರಿಗೆ ಪಾವತಿಸಲು ವಿಫಲವಾದರೆ ಹೇಗೆ?
ಪ್ರತಿಷ್ಠಿತ ವ್ಯಕ್ತಿಗಳು ಕಾನೂನುಬದ್ಧ ನಾಗರಿಕರಂತೆ ವರ್ತಿಸಲು ಮತ್ತು ತೆರಿಗೆ ಪಾವತಿಸಲು ಸಾಮಾನ್ಯ ಜನರನ್ನು ಪ್ರೇರೇಪಿಸಬೇಕು. ಹಾಗಿದ್ದರೂ ಶ್ರೀಮಂತರು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ತೆರಿಗೆ ಪಾವತಿಸಲು ವಿಫಲವಾದರೆ ಆಗ ನ್ಯಾಯಾಲಯ ಸಾಂವಿಧಾನಿಕ ಗುರಿಗಳನ್ನು ಸಾಧಿಸಲು ಇನ್ನೂ ಬಹಳ ದೂರ ಸಾಗಬೇಕಾಗುತ್ತದೆ ಎಂದು ನೋವಿನಿಂದ ಈ ನ್ಯಾಯಾಲಯ ದಾಖಲಿಸುತ್ತದೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರು ಪ್ರವೇಶ ತೆರಿಗೆ ಪಾವತಿಸದಿರುವುದು ಅಭಿಮಾನಿಗಳಿಗೆ ಅಗೌರವ ಉಂಟು ಮಾಡಿದಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ತಾತ್ವಿಕವಾಗಿ, ಸಂಪತ್ತಿನ ಕ್ರೋಢೀಕರಣ ಅಥವಾ ರೋಲ್ಸ್ ರಾಯ್ಸ್ನಂತಹ ವಿಶ್ವದ ಪ್ರತಿಷ್ಠಿತ ಕಾರನ್ನು ಹೊಂದಿದ್ದರೂ, ಅದು ಉತ್ತಮ ಜೀವನಕ್ಕೆ ಯಾವುದೇ ನೆರವು ನೀಡದು, ಏಕೆಂದರೆ ನಮ್ಮ ದೇಶವು ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳಿಂದ ಸಮೃದ್ಧವಾಗಿದೆ. ಅರ್ಜಿದಾರರು ಪ್ರವೇಶ ತೆರಿಗೆ ಪಾವತಿಸದೆ ಇರುವುದನ್ನು ಮೆಚ್ಚಲಾಗದು ಎಂದು ವಿಜಯ್ ಪ್ರಕರಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಲಕ್ಷಾಂತರ ಅಭಿಮಾನಿಗಳಿಗೆ ಮಾಡುವ ಮೋಸ
ವೈಯಕ್ತಿಕ ಬಳಕೆಗೆ ವಿಶ್ವದ ಪ್ರತಿಷ್ಠಿತ ಕಾರು ಖರೀದಿ ಅವರ ಸಿನಿಮಾಗಳನ್ನು ದುಡ್ಡು ತೆತ್ತು ನೋಡುವ ಲಕ್ಷಾಂತರ ಅಭಿಮಾನಿಗಳನ್ನು ಅರ್ಜಿದಾರರು ಗೌರವಿಸಿಲ್ಲ ಅಥವಾ ಅವರಿಗೆ ಸ್ಪಂದಿಸಿಲ್ಲ. ಏಕೆಂದರೆ ಅಂಥ ಹಣದಿಂದ ಅರ್ಜಿದಾರ/ ನಟ ತನ್ನ ವೈಯಕ್ತಿಕ ಬಳಕೆಗೆ ವಿಶ್ವದ ಪ್ರತಿಷ್ಠಿತ ಕಾರು ಖರೀದಿಸಿದ್ದಾನೆ. ದೇಶದ ಅತ್ಯಂತ ಹೆಸರಾಂತ ವ್ಯಕ್ತಿಗಳು ತಮಗೆ ತಲುಪುವ ಹಣ ಬಂದದ್ದು ಬಡವರ ರಕ್ತದಿಂದ ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ, ಆಕಾಶದಿಂದಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ನ್ಯಾ. ಸುಬ್ರಮಣಿಯನ್ ಅವರು ಹೇಳಿದರು.


Click it and Unblock the Notifications











