ಜೀವನ ಸಾಗಿಸಲು ದಿನಸಿ ಅಂಗಡಿ ತೆರೆದ ಸಿನಿಮಾ ನಿರ್ದೇಶಕ
ಕೊರೊನಾ ವೈರಸ್ ಚಿತ್ರರಂಗದ ಮೇಲೆ ಭಾರಿ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ ಲಕ್ಷಾಂತರ ಮಂದಿಗೆ ಆದಾಯವೇ ಇಲ್ಲದಂತೆ ಮಾಡಿದೆ.
Recommended Video
ಲಾಕ್ಡೌನ್ ಪ್ರಾರಂಭವಾದ ಆರಂಭದಲ್ಲಿ ಕೇವಲ ಸಿನಿಮಾ ದಿನಗೂಲಿ ನೌಕರರು, ಕೆಳಹಂತದ ತಂತ್ರಜ್ಞರು, ನೌಕರರು ಮಾತ್ರವೇ ಕಷ್ಟದಲ್ಲಿದ್ದರು. ಆದರೆ ಲಾಕ್ಡೌನ್ ಮುಂದುವರೆದಂತೆ ಮೇಲ್ಹಂತದವರೂ ಕಷ್ಟಕ್ಕೆ ಸಿಲುಕಿದ್ದಾರೆ.
ನಿರ್ದೇಶಕರು, ನಟ-ನಟಿಯರೂ, ನಿರ್ಮಾಪಕರೂ ಸಹ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ತಮಿಳು ಸಿನಿಉದ್ಯಮದಲ್ಲಿ ಹತ್ತು ವರ್ಷ ಕೆಲಸ ಮಾಡಿದ ನಿರ್ದೇಶಕ ಜೀವನ ಸಾಗಿಸಲು ದಿನಸಿ ಅಂಗಡಿ ತೆರೆದಿರುವುದು.

ಹತ್ತು ವರ್ಷಗಳಿಂದ ಸಿನಿರಂಗದಲ್ಲಿರುವ ಆನಂದ್
ತಮಿಳು ಸಿನಿಮಾ ಕಳೆದ ಹತ್ತು ವರ್ಷಗಳಿಂದ ದುಡಿದಿರುವ ನಿರ್ದೇಶಕ ಆನಂದ್ ಜೀವನ ನಡೆಸಲು ದಿನಸಿ ಅಂಗಡಿಯನ್ನು ತೆರೆದಿದ್ದಾರೆ. ಚೆನ್ನೈ ನಿವಾಸಿ ಆಗಿರುವ ಅವರು, ಚೆನ್ನೈನ ಮೋಲಿವಕ್ಕುಂ ನಲ್ಲಿ ಅಂಗಡಿ ತೆರೆದಿದ್ದಾರೆ.

ಜೀವನ ಸಾಗಿಸಲು ದಿನಸಿ ಅಂಗಡಿ
'ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದು ನೋಡಿದರೆ ಒಂದು ವರ್ಷದ ವರೆಗೆ ಚಿತ್ರಮಂದಿರಗಳು ತೆರೆಯುವುದಿಲ್ಲವೆನಿಸುತ್ತದೆ. ಅಲ್ಲಿಯವರೆಗೆ ನಮಗೆ ಉದ್ಯೋಗ ಇರುವುದಿಲ್ಲ, ಹಾಗಾಗಿ ಜೀವನ ಸಾಗಿಸಲು ದಿನಸಿ ಅಂಗಡಿ ತೆರೆದಿದ್ದೇನೆ' ಎಂದಿದ್ದಾರೆ ಆನಂದ್.

ಶಾಲೆ, ಜಿಮ್, ಬೀಚ್ ತೆರೆದ ಮೇಲೆ ಚಿತ್ರಮಂದಿರ
ಮೊದಲಿಗೆ ಶಾಲೆಗಳು, ಜಿಮ್ಗಳು, ಪಾರ್ಕ್ಗಳು, ಬೀಚ್ಗಳು ತೆರೆಯಬೇಕು ಆ ನಂತರವೇ ಚಿತ್ರಮಂದಿರಗಳನ್ನು ತೆಗೆಯುತ್ತಾರೆ. ಇದೆಲ್ಲವೂ ಆಗುವ ವೇಳೆಗೆ ಒಂದು ವರ್ಷವಾಗಿರುತ್ತದೆ ಹಾಗಾಗಿ ಈ ನಡುವೆ ಲಾಭವಿರುವುದು ದಿನಸಿ ಅಂಗಡಿಗಳಿಗೆ ಮಾತ್ರ ಹಾಗಾಗಿ ದಿನಸಿ ಅಂಗಡಿ ತೆರೆದಿದ್ದೇನೆ ಎಂದಿದ್ದಾರೆ ಆನಂದ್.

ಕೆಲವು ಸಿನಿಮಾ ನಿರ್ದೇಶಿಸಿದ್ದಾರೆ
ಆನಂದ್ ಅವರು ಕಡಿಮೆ ಬಜೆಟ್ನ ಸಿನಿಮಾಗಳನ್ನು ತೆಗೆಯುವುದಕ್ಕೆ ಖ್ಯಾತರು. 'ಒರು ಮಳೈ ನಂಗು ಸಾರಲ್', 'ಮೌನ ಮಳೈ' ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ 'ತುನಿಂತು ಸೇಯ್' ಸಿನಿಮಾ ನಿರ್ದೇಶಿಸಿದ್ದು ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಈ ನಡುವೆ ಕೊರೊನಾ ಬಂದ ಕಾರಣ ಚಿತ್ರೀಕರಣ ಬಂದ್ ಆಗಿದೆ.


Click it and Unblock the Notifications











