ಗುರುಕಾಣಿಕೆ ಸಲ್ಲಿಸಲು ದಿಟ್ಟ ನಿರ್ಧಾರ ಮಾಡುತ್ತಾರಾ 'ತಲೈವಾ' ರಜನಿಕಾಂತ್.?
ಸೂಪರ್ ಸ್ಟಾರ್ ರಜನಿಕಾಂತ್ ರನ್ನ ತಮಿಳು ಚಿತ್ರರಂಗಕ್ಕೆ ಪರಿಚಯ ಮಾಡಿದ್ದೇ ನಿರ್ದೇಶಕ ಕೆ.ಬಾಲಚಂದರ್.
ಕೆ.ಬಾಲಚಂದರ್ ನಿರ್ದೇಶನದ 'ಅಪೂರ್ವ ರಾಗಂಗಳ್' ಸಿನಿಮಾದ ಮೂಲಕ ಕಾಲಿವುಡ್ ಗೆ ಪದಾರ್ಪಣೆ ಮಾಡಿದವರು ರಜನಿಕಾಂತ್. ಸೂಪರ್ ಸ್ಟಾರ್ ಮಾತ್ರವಲ್ಲದೆ ಸಕಲಕಲಾವಲ್ಲಭ ಕಮಲ್ ಹಾಸನ್, ಪ್ರಕಾಶ್ ರಾಜ್, ಸರಿತಾ, ವಿವೇಕ್ ಸೇರಿದಂತೆ ಹಲವು ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದವರು ಕೆ.ಬಾಲಚಂದರ್.
ಕಲೈಮಾಮಣಿ, ಪದ್ಮಶ್ರೀ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಸ್ಟಾರ್ ನಟರ ಸೃಷ್ಟಿಕರ್ತ ಕೆ.ಬಾಲಚಂದರ್ ನಮ್ಮನ್ನೆಲ್ಲ ಅಗಲಿ ಐದು ವರ್ಷಗಳು ಉರುಳಿವೆ. ಈ ಹಿನ್ನೆಲೆಯಲ್ಲಿ ಕೆ.ಬಾಲಚಂದರ್ ರವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆಯಿತು.

ಕೆ.ಬಾಲಚಂದರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಕಾಲಿವುಡ್ ನ ಪ್ರಮುಖರೆಲ್ಲರನ್ನ ಆಹ್ವಾನಿಸಲಾಗಿತ್ತು. ಆದರೆ ಅಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗಿಯಾಗಿದ್ದರು. ಇದನ್ನೆಲ್ಲಾ ಗಮನಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿರ್ಮಾಪಕ ಕೆ.ರಾಜನ್ ತಮ್ಮ ಮಾತಿನ ಸಂದರ್ಭದಲ್ಲಿ ಕೆ.ಬಾಲಚಂದರ್ ಮೇಲಿನ ಕಾಳಜಿ ಹಾಗೂ ಚಿತ್ರರಂಗದ ಪ್ರತಿಕ್ರಿಯೆ ಬಗ್ಗೆ ಬೇಸರ ಹೊರಹಾಕಿದರು. ಹಾಗೇ ಕೆ.ಬಾಲಚಂದ್ರ ಅವರ ಕುಟುಂಬದ ಸಂಕಷ್ಟದ ದಿನಗಳನ್ನೂ ಎಲ್ಲರೆದುರು ಬಿಚ್ಚಿಟ್ಟರು.
ಕೆ.ಬಾಲಚಂದರ್ ಇಹಲೋಕ ತ್ಯಜಿಸಿದ ಮೇಲೆ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿರುವುದನ್ನು ತಿಳಿಸಿದ ಕೆ.ರಾಜನ್ ಅದಕ್ಕೆ ಪರಿಹಾರ ಮಾರ್ಗವೊಂದನ್ನೂ ಅಲ್ಲೇ ಸೂಚಿಸಿ ಅದು ನೆರವೇರುವ ವಿಶ್ವಾಸ ವ್ಯಕ್ತಪಡಿಸಿದರು.
''ಕೆ.ಬಾಲಚಂದರ್ ಫ್ಯಾಮಿಲಿಗೆ ಸಹಾಯ ಮಾಡುವ ಸಲುವಾಗಿ, ಅವರ ಕುಟುಂಬ ನಿರ್ಮಾಣ ಮಾಡುವ ಒಂದು ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಬೇಕು. ರಜನಿಕಾಂತ್ ಇದಕ್ಕೆ ಒಪ್ಪುತ್ತಾರೆ ಎಂಬ ನಂಬಿಕೆ ನನಗಿದೆ'' ಎಂದು ಕೆ.ರಾಜನ್ ಹೇಳಿದರು.
ನಿಜ ತಮಿಳು ಚಿತ್ರರಂಗಕ್ಕೆ ಜೀವ ತುಂಬಿದವರು ಕೆ.ಬಾಲಚಂದರ್. ನಿರ್ಮಾಪಕ ಕೆ.ರಾಜನ್ ಹೇಳಿದಂತೆ ಕೆ.ಬಾಲಚಂದರ್ ರನ್ನ ಗುರು ಅಂತ ಪರಿಗಣಿಸಿದ್ದ ರಜನಿಕಾಂತ್, ಗುರುಕಾಣಿಕೆ ಸಲ್ಲಿಸುವ ರೂಪದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಲು ದಿಟ್ಟ ನಿರ್ಧಾರ ಕೈಗೊಳ್ಳುತ್ತಾರಾ.? ಕಾಲವೇ ಉತ್ತರಿಸಬೇಕು.!


Click it and Unblock the Notifications











