ನಟ ವಿಶಾಲ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಚೌಧರಿ
ತಮಿಳು ನಟ ವಿಶಾಲ್, ಖ್ಯಾತ ನಿರ್ಮಾಪಕ ಆರ್.ಬಿ.ಚೌಧರಿ ವಿರುದ್ಧ ದೂರು ನೀಡಿದ್ದರು. ಸಾಲ ಮರುಪಾವತಿಸಿದರೂ ಸಹ ತಮ್ಮ ಚೆಕ್ ಹಾಗೂ ಇತರೆ ದಾಖಲೆಗಳನ್ನು ಚೌಧರಿ ನೀಡಿಲ್ಲ ಎಂದು ವಿಶಾಲ್ ಆರೋಪಿಸಿದ್ದರು.
ನಟನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಚೌಧರಿ, 'ನಟ ವಿಶಾಲ್ ಸಾಲ ಮರುಪಾವತಿ ಮಾಡಿರುವುದು ನಿಜ. ಆದರೆ ಅವರು ನೀಡಿದ್ದ ಚೆಕ್ ಹಾಗೂ ಇತರೆ ದಾಖಲೆಗಳನ್ನು ದಿವಂಗತ ನಿರ್ದೇಶಕ ಶಿವಕುಮಾರ್ ನೋಡಿಕೊಳ್ಳುತ್ತಿದ್ದರು. ಈಗ ನಮ್ಮ ತಂಡ ಹುಡುಕಿದರೂ ಆ ದಾಖಲೆಗಳು ಸಿಗುತ್ತಿಲ್ಲ' ಎಂದಿದ್ದಾರೆ.
'ಇರುಂಬು ತಿರೈ' ಸಿನಿಮಾಕ್ಕಾಗಿ ನನ್ನ ಬಳಿ ಹಾಗೂ ತಿರುಪ್ಪೂರು ಸುಬ್ರಹ್ಮಣ್ಯನ್ ಬಳಿ ವಿಶಾಲ್ ಸಾಲ ಪಡೆದುಕೊಂಡಿದ್ದರು. ಸಾಲಕ್ಕೆ ಜಾಮೀನಾಗಿ ಚೆಕ್ ಹಾಗೂ ಇತರೆ ದಾಖಲೆಗಳನ್ನು ನೀಡಿದ್ದರು. ಆ ದಾಖಲೆಗಳನ್ನೆಲ್ಲ ನಿರ್ದೇಶಕ ಶಿವಕುಮಾರ್ ನೋಡಿಕೊಳ್ಳುತ್ತಿದ್ದರು. ದುರಾದೃಷ್ಟವಶಾತ್ ಶಿವಕುಮಾರ್ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಅವರ ಸಾವಿನ ಬಳಿಕ ವಿಶಾಲ್ ನೀಡಿದ್ದ ದಾಖಲೆಗಳು ನಮಗೆ ಸಿಗುತ್ತಿಲ್ಲ' ಎಂದಿದ್ದಾರೆ ಚೌಧರಿ.

'ವಿಶಾಲ್ ಸಾಲವನ್ನು ಮರುಪಾವತಿ ಮಾಡಿದ್ದಾರೆ ಎಂದು ಲಿಖಿತ ಹೇಳಿಕೆನ್ನು ನಾವು ನೀಡಿದ್ದೇನೆ. ಆದರೂ ವಿಶಾಲ್, ನಾವು ಅವರ ದಾಖಲೆಗಳನ್ನು ದುರುಪಯೋಗ ಮಾಡುತ್ತೇವೆ ಎಂಬ ಭಯದೊಂದಿಗೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಭಯಪಡುವ ಅಗತ್ಯವಿಲ್ಲ' ಎಂದಿದ್ದಾರೆ ಚೌಧರಿ.
'ಪ್ರಸ್ತುತ ನಾನು ಚೆನ್ನೈನಲ್ಲಿಲ್ಲ ಒಮ್ಮೆ ಚೆನ್ನೈಗೆ ವಾಪಸ್ಸಾದ ಬಳಿಕ ವಿಶಾಲ್ ಜೊತೆ ಮಾತನಾಡಿ ವಿಷಯ ಇತ್ಯರ್ಥ ಪಡಿಸುತ್ತೇನೆ' ಎಂದಿದ್ದಾರೆ ಚೌಧರಿ.
ಚೆನ್ನೈನ ಟಿ.ನಗರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಬಿ.ಆರ್.ಚೌಧರಿ ವಿರುದ್ಧ ದೂರು ನೀಡಿದ್ದ ವಿಶಾಲ್, ಈ ಬಗ್ಗೆ ಟ್ವೀಟ್ ಮಾಡಿ, 'ಇರುಂಬು ತಿರೈ ಚಿತ್ರಕ್ಕಾಗಿ ಸಾಲವನ್ನು ಮರುಪಾವತಿಸಿ ತಿಂಗಳಾದರು ಚೆಕ್, ಬಾಂಡ್ ಮತ್ತು ಪ್ರಾಮಿಸರಿಗಳನ್ನು ಆರ್.ಬಿ ಚೌಧರಿ ಹಿಂದಿರುಗಿಸಿಲ್ಲ. ಏನಾದರೂ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕೊನೆಯದಾಗಿ ದಾಖಲೆಗಳು ಮಿಸ್ ಆಗಿವೆ ಎಂದು ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ' ಎಂದಿದ್ದರು.
Recommended Video
ಬಿ.ಆರ್.ಚೌಧರಿ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು, 33 ವರ್ಷಗಳಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಚೌದರಿ, ತೆಲುಗು, ತಮಿಳು, ಮಲಯಾಳಂಗಳಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











