ಅಬ್ಬಾ! 12 ದಿನದಲ್ಲಿ ರಜನೀಕಾಂತ್ರ 'ಅಣ್ಣಾತೆ' ಗಳಿಸಿದ್ದು ಇಷ್ಟೋಂದಾ!
ಈ ಡಿಸೆಂಬರ್ಗೆ ರಜನೀಕಾಂತ್ಗೆ ವಯಸ್ಸು 72 ಆಗುತ್ತದೆ. ಆದರೆ ತೆರೆಯ ಮೇಲೆ ಅದೇ ಉತ್ಸಾಹದಿಂದ ನಟಿಸುತ್ತಾರೆ ಈಗಲೂ. ಅಭಿಮಾನಿಗಳಲ್ಲಿ ರಜನೀಕಾಂತ್ ಕ್ರೇಜ್ ಸಹ ತುಸುವೂ ಕಡಿಮೆಯಾಗಿಲ್ಲ ಬದಲಿಗೆ ಇನ್ನೂ ಹೆಚ್ಚಾಗುತ್ತಿದೆ.
ರಜನೀಕಾಂತ್ ನಟಿಸಿರುವ ಹೊಸ ಸಿನಿಮಾ 'ಅಣ್ಣಾತೆ' ಬಿಡುಗಡೆ ಆಗಿ 12 ದಿನಗಳಾಗಿದ್ದು ಇಷ್ಟೇ ದಿನದಲ್ಲಿ ಭಾರಿ ದೊಡ್ಡ ಮೊತ್ತವನ್ನೇ ಸಿನಿಮಾ ಕಲೆಹಾಕಿದೆ.
ನವೆಂಬರ್ 4ರಂದು ಬಿಡುಗಡೆ ಆದ 'ಅಣ್ಣಾತೆ' ಸಿನಿಮಾವು ಭಾರಿ ದೊಡ್ಡ ಹಿಟ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾವೂ ಮಾಡದಷ್ಟು ದೊಡ್ಡ ಕಲೆಕ್ಷನ್ ಅನ್ನು ಈ ಸಿನಿಮಾ ಮಾಡಿದೆ. ದಳಪತಿ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ 'ಅಣ್ಣಾತೆ'.
ಬಿಡುಗಡೆ ಆದ ಕೇವಲ 12 ದಿನಗಳಲ್ಲಿ ಅಣ್ಣಾತೆ ಸಿನಿಮಾದ ಒಟ್ಟು ಕಲೆಕ್ಷನ್ 225 ಕೋಟಿ ರುಪಾಯಿಗಳು. ಇಷ್ಟು ದೊಡ್ಡ ಮೊತ್ತವನ್ನು ದಕ್ಷಿಣ ಭಾರತದ ಇನ್ನಾವುದೇ ಸಿನಿಮಾ ಇಷ್ಟು ಕಡಿಮೆ ಅವಧಿಯಲ್ಲಿ ಕಲೆಕ್ಷನ್ ಮಾಡಿಲ್ಲ.

ಭರ್ಜರಿ ಕಲೆಕ್ಷನ್
ಅಣ್ಣಾತೆ ಸಿನಿಮಾವು ಮೊದಲ ವಾರದಲ್ಲಿ 202 ಕೋಟಿ ಹಣವನ್ನು ವಿಶ್ವದೆಲ್ಲೆಡೆಯಿಂದ ಕಲೆಕ್ಷನ್ ಮಾಡಿತ್ತು, ಆದರೆ ಎರಡನೇ ವಾರಕ್ಕೆ ಕಲೆಕ್ಷನ್ ಗಣನೀಯವಾಗಿ ಕುಸಿದಿದೆಯಾದರೂ ಎರಡನೇ ವಾರದಲ್ಲಿ ಕೇವಲ 25 ಕೋಟಿ ಹಣ ಗಳಿಸಿದೆ. ಒಟ್ಟು ಕಲೆಕ್ಷನ್ 225.12 ಕೋಟಿಗೆ ಏರಿಕೆಯಾಗಿದೆ. ಎರಡನೇ ವಾರದಲ್ಲಿ ಕೆಲವು ಬೇರೆ ಸಿನಿಮಾಗಳ ಪ್ರತಿಸ್ಪರ್ಧೆ ಎದುರಿಸಬೇಕಾಗಿ ಬಂದ ಕಾರಣ ಕಲೆಕ್ಷನ್ ಇಳಿಮುಖವಾಗಿದೆ. ಜೊತೆಗೆ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಸಹ ಬಂದಿಲ್ಲ.

ಸಿನಿಮಾದ ಒಟ್ಟು ಬಂಡವಾಳ 189 ಕೋಟಿ
'ಅಣ್ಣಾತೆ' ಸಿನಿಮಾದ ಒಟ್ಟು ಬಂಡವಾಳ 189 ಕೋಟಿ. ಸಿನಿಮಾವನ್ನು ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಆಗಿದೆ. ಇನ್ನು ಸಿನಿಮಾದ ಸ್ಯಾಟಲೈಟ್ ಹಕ್ಕು, ಡಿಜಿಟಲ್ ಹಕ್ಕು, ಆಡಿಯೋ ಹಕ್ಕುಗಳ ಮೊತ್ತ ಸೇರಿಸಿದರೆ ಒಂದು ಅಂದಾಜಿನ ಪ್ರಕಾರ ಸಿನಿಮಾದ ಒಟ್ಟು ಗಳಿಕೆ 350 ಕೋಟಿ ದಾಟಿದೆ.

ಸಿನಿಮಾದಲ್ಲಿದೆ ದೊಡ್ಡ ತಾರಾಗಣ
'ಅಣ್ಣಾತೆ' ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಜಿತ್ ನಟನೆಯ 'ವಿಶ್ವಾಸಂ' ಸಿನಿಮಾವನ್ನು ಇವರು ನಿರ್ದೇಶಿಸಿದ್ದರು. 'ಅಣ್ಣಾತೆ' ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್, ಗೆಳತಿ ಪಾತ್ರದಲ್ಲಿ ನಯನತಾರಾ, ವಿಲನ್ಗಳಾಗಿ ಜಗಪತಿಬಾಬು, ಅಭಿಮನ್ಯು ಸಿಂಗ್, ಪ್ರಕಾಶ್ ರಾಜ್ ನಟಿಸಿದ್ದಾರೆ. ಜೊತೆಗೆ ಖುಷ್ಬು, ಮೀನಾ ಸಹ ಇದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಇಮ್ಮಾನ್ ನೀಡಿದ್ದು, ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಹಿಟ್ ಆಗಿದೆ.

ಚಿತ್ರೀಕರಣದ ಸಮಯದಲ್ಲಿ ಸಮಸ್ಯೆ
'ಅಣ್ಣಾತೆ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರಜನೀಕಾಂತ್ ಹಾಗೂ ಇಡೀಯ ಚಿತ್ರತಂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರತಂಡದ ಕೆಲವರಿಗೆ ಕೊರೊನಾ ಉಂಟಾಯಿತು. ಆ ನಂತರ ರಜನೀಕಾಂತ್ಗೆ ಹಠಾತ್ತನೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ಕೆಲವು ದಿನಗಳ ಕಾಲ ಅವರು ಹೈದರಾಬಾದ್ನ ಆಸ್ಪತ್ರೆಯಲ್ಲಿಯೇ ಸಮಯ ಕಳೆದರು. ಆ ನಂತರ ವೈದ್ಯರ ಸಲಹೆಯಂತೆ ಮನೆಯಲ್ಲಿ ಬಹು ಸಮಯ ವಿಶ್ರಾಂತಿ ಪಡೆದರು. ಇದರ ಕಾರಣದಿಂದ ಚಿತ್ರೀಕರಣದ ಸೆಟ್ ಅನ್ನು ಬದಲಾಯಿಸಬೇಕಾಯಿತು, ನಟ-ನಟಿಯರು, ತಂತ್ರಜ್ಞರ ಕಾಲ್ಶೀಟ್ ಬದಲಿಸಬೇಕಾಯಿತು.


Click it and Unblock the Notifications











