ಕಂಗನಾ ರಣಾವತ್ 'ತಲೈವಿ' ನೋಡಿ ಮೆಚ್ಚಿದ 'ತಲೈವಾ'
ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ತಲೈವಿ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಕೆಲವು ಕಡೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚು ಜನರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ, ತಮಿಳು ಫಿಲ್ಮಿಬೀಟ್ ಹಾಗೂ ಕೆಲವು ವೆಬ್ಸೈಟ್ಗಳು ವರದಿ ಮಾಡಿರುವ ಪ್ರಕಾರ, ಸೂಪರ್ ಸ್ಟಾರ್ ರಜನಿಕಾಂತ್ ತಲೈವಿ ಸಿನಿಮಾ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಕಂಗನಾ ರಣಾವತ್ ಅವರ ಚಿತ್ರ ನೀಡಿದ ರಜನಿಕಾಂತ್, ನಿರ್ದೇಶಕ ಹಾಗೂ ನಟಿಯ ಪರ್ಫಾಮೆನ್ಸ್ ಬಗ್ಗೆ ಪ್ರಶಂಸಿಸಿದ್ದಾರೆ.
ರಜನಿಕಾಂತ್ ಅವರಿಗಾಗಿಯೇ ಪ್ರತ್ಯೇಕವಾಗಿ ತಲೈವಿ ಸಿನಿಮಾದ ಸ್ಕ್ರೀನಿಂಗ್ ಆಯೋಜಿಸಲಾಗಿತ್ತು. ಈ ವೇಳೆ ಸಿನಿಮಾ ನೋಡಿದ ತಲೈವಾ, ನಿರ್ದೇಶಕ ಎಎಲ್ ವಿಜಯ್ ಮತ್ತು ಕಂಗನಾ ರಣಾವತ್ ಅವರ ನಟನೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

''ರಜನಿ ಸರ್ ತಲೈವಿ ಚಿತ್ರ ನೋಡಿ ತುಂಬಾ ಇಷ್ಟಪಟ್ಟರು. ಪರ್ಸನಲ್ ಆಗಿ ನಿರ್ದೇಶಕ ವಿಜಯ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಸಾರ್ವಜನಿಕ ಜೀವನದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದ ಜಯಲಲಿತಾ ಮತ್ತು ಎಂಜಿಆರ್ ಅಂತಹ ವ್ಯಕ್ತಿಗಳ ಬಗ್ಗೆ ಸಿನಿಮಾ ಮಾಡುವುದು ಕಠಿಣವಾದ ಕೆಲಸ. ಅಂತಹ ಕೆಲಸವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ, ಬಹಳ ಸುಂದರವಾಗಿ ಬಂದಿದೆ ಎಂದು ಪ್ರಶಂಸಿಸಿದರು'' ಎಂದು ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ತೆರೆದಿಲ್ಲ. ಕೇರಳದಲ್ಲಿಯೂ ಥಿಯೇಟರ್ ಮುಚ್ಚಿವೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಚಿತ್ರಮಂದಿರಗಳು ತೆರದಿದ್ದರೂ ಶೇಕಡಾ 50ರಷ್ಟು ಮಾತ್ರ ಅನುಮತಿ ಇದೆ. ಬಹಳಷ್ಟು ಕಡೆ ನೈಟ್ ಶೋ ಇಲ್ಲ. ಇಷ್ಟೆಲ್ಲಾ ಸವಾಲಿನ ನಡುವೆಯೂ ಥಿಯೇಟರ್ಗೆ ಬಂದ ತಲೈವಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ತಲೈವಿ ಸಿನಿಮಾ ಬಿಡುಗಡೆಗೆ ಮುಂಚೆಯೇ 85 ಕೋಟಿ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ. ಚಿತ್ರದ ಡಿಜಿಟಲ್ ಹಕ್ಕು, ಸ್ಯಾಟ್ಲೈಟ್ ಹಕ್ಕು ಹಾಗೂ ಆಡಿಯೋ ಹಕ್ಕು ಸೇರಿ 85 ಕೋಟಿ ಬಾಚಿಕೊಂಡಿದೆಯಂತೆ. ಈ ಹಣದಿಂದಲೇ ಸಿನಿಮಾದ ನಿರ್ಮಾಪಕರು ಸೇಫ್ ಹಂತಕ್ಕೆ ತಲುಪಿದರು ಎಂದು ಹೇಳಲಾಗಿದೆ.
ಇನ್ನು ತಲೈವಿ ಚಿತ್ರ ಒಟಿಟಿಯಲ್ಲೂ ಭರ್ಜರಿ ಬಿಸಿನೆಸ್ ಮಾಡಿದೆ. ಥಿಯೇಟರ್ನಲ್ಲಿ ಬಂದ ಕೆಲವು ವಾರಗಳ ಬಳಿಕ ಒಟಿಟಿಯಲ್ಲಿ ಪ್ರೀಮಿಯರ್ ಮಾಡುವಂತೆ ಒಪ್ಪಂದ ಮಾಡಿಕೊಂಡಿದ್ದು, ಬಾಲಿವುಡ್ ಲೈಫ್ ವೆಬ್ಸೈಟ್ ವರದಿ ಮಾಡಿರುವಂತೆ ಅಮೇಜಾನ್ ಮತ್ತು ನೆಟ್ಪ್ಲಿಕ್ಸ್ ಎರಡೂ ಒಟಿಟಿಗಳು ತಲೈವಿ ಪ್ರಸಾರ ಹಕ್ಕಿಗೆ 55 ಕೋಟಿ ನೀಡಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ಮಾಪಕ ವಿಷ್ಣುವರ್ಧನ್ ಇಂದುರಿ "ನಾವು ಒಂದು ಉತ್ತಮ ಚಿತ್ರವನ್ನು ತಯಾರಿಸಿದ್ದೇವೆ. ಅದನ್ನು ದೇಶದಾದ್ಯಂತ ಎಲ್ಲರಿಗೂ ತೋರಿಸಲು ಬಯಸುತ್ತೇವೆ. ಉತ್ತರ ಭಾಗದ ಕೆಲವು ಭಾಗಗಳು ಇನ್ನೂ ಮುಚ್ಚಲ್ಪಟ್ಟಿವೆ. ಚಿತ್ರ ಮತ್ತು ಪ್ರೇಕ್ಷಕರ ಮೇಲಿನ ಪ್ರೀತಿಯಿಂದ ಮಾತ್ರ ನಾವು ಥಿಯೇಟರ್ಗೆ ಹೋಗಿದ್ದೇವೆ. ಹಾಗಂದ ಮಾತ್ರಕ್ಕೆ ಕಮರ್ಷಿಯಲ್ ಆಗಿ ಮೂರ್ಖರಾಗಲು ತಯಾರಿಲ್ಲ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ತೆರೆದಿದ್ದರೆ ಮಲ್ಟಿಪ್ಲೆಕ್ಸ್ ಜೊತೆ 4 ವಾರಗಳ ಒಪ್ಪಂದ ಮಾಡುತ್ತಿದ್ವಿ. ಅನೇಕ ಕಡೆ ನೈಟ್ ಶೋ ಇಲ್ಲ. ಒಬ್ಬ ನಿರ್ಮಾಪಕನಾಗಿ ನನ್ನ ಹೂಡಿಕೆಯನ್ನು ವಾಪಸ್ ಗಳಿಸಬೇಕು. ಆಗ ಮಾತ್ರ ನಾನು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತದೆ. ನನ್ನ ಬಂಡವಾಳ ಹಿಂಪಡೆಯದಿದ್ದರೆ, ನಾನು ತೊಂದರೆ ಅನುಭವಿಸುತ್ತೇನೆ. ಈಗ ನಾನು ಮಾಡಿಕೊಂಡಿರುವ ಒಪ್ಪಂದಂತೆ ಹೂಡಿಕೆಯ ಮೊತ್ತವನ್ನು ಹಿಂಪಡೆದಿದ್ದೇನೆ" ಎಂದರು.
ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ. ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ.


Click it and Unblock the Notifications











