ನಟ ಸೂರ್ಯ ಮತ್ತು ಕಾರ್ತಿ ಸಹೋದರರಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ
ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಸ್ವಾಗತಿಸಿದವರ ಪಟ್ಟಿಯಲ್ಲಿ ಕಾಲಿವುಡ್ ನ ಸ್ಟಾರ್ ನಟರಾದ ಸೂರ್ಯ ಮತ್ತು ಕಾರ್ತಿ ಸಹೋದರರು ಇದ್ದಾರೆ. ಇದೀಗ ಸೂರ್ಯ ಸಹೋದರರು ಸಿಎಂ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾಗಿ ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ.
ಕೊರೊನಾ ಎರಡನೇ ಅಲೇಯ ಭೀಕರತೆ ದೇಶವನ್ನು ಬೆಚ್ಚಿಬೀಳಿಸಿದೆ. ಸೋಂಕಿತರು ಸರಿಯಾದ ವೈದ್ಯಕೀಯ ಸೌಲಭ್ಯ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಭೀಕರ ಪರಿಸ್ಥಿತಿಯಲ್ಲಿ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಸಹ ಕಷ್ಟದಲ್ಲಿರೊರ ನೆರವಿಗೆ ನಿಂತಿದ್ದಾರೆ.
ಇದೀಗ ತಮಿಳು ಸ್ಟಾರ್ ನಟರಾದ ಕಾರ್ತಿ ಮತ್ತು ಸೂರ್ಯ ಸಹೋದರರು ಸಿ.ಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ನಿನ್ನೆ (ಮೇ 12) ಸಿ ಎಂ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದ ಸೂರ್ಯ ಸಹೋದರರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರು ಸಹಾಯಕ್ಕೆ ನಿಂತಿದ್ದಾರೆ. ಕರ್ನಾಟಕದಲ್ಲೂ ಅನೇಕ ಸಿನಿ ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಕಿಚ್ಚ ಸುದೀಪ್, ಉಪೇಂದ್ರ ಸೇರಿದಂತೆ ಅನೇಕರು ಸಹಾಯ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಸಿನಿಮಾ ಕಾರ್ಮಿಕರ ಸಹಾಯಕ್ಕೆ ನಿಂತಿದ್ದು, ರಿಯಲ್ ಸ್ಟಾರ್ ಗೆ ಅನೇಕರು ಕೈ ಜೋಡಿಸಿದ್ದಾರೆ. ಸಾಧು ಕೋಕಿಲಾ, ಹಿರಿಯ ನಟ ಸರೋಜದೇವಿ, ನಟಿ ಮಾನ್ಯಾ, ಪವನ್ ಒಡೆಯರ್ ಸೇರಿದಂತೆ ಅನೇಕರು ನೆರವು ನೀಡಿದ್ದಾರೆ.
ಇನ್ನು ನಿರ್ದೇಶಕ ಮತ್ತು ಚಿತ್ರಸಾಹಿತಿ ಕವಿರಾಜ್ ತಮ್ಮದೆ ತಂಡ ರಚಿಸಿಕೊಂಡು ಆಕ್ಸಿಜನ್ ಪೂರೈಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ನಡೆಯುತ್ತಿದ್ದು, ಸದ್ಯದಲ್ಲೇ ಕೆಲಸ ಶುರುಮಾಡುವುದಾಗಿ ಕವಿರಾಜ್ ಹೇಳಿದ್ದಾರೆ.


Click it and Unblock the Notifications











