Breaking: 'ರಾಜಕುಮಾರ', 'ಸಾರಥಿ' ಚಿತ್ರಗಳ ನಟ ಶರತ್ಕುಮಾರ್ ಆರೋಗ್ಯದಲ್ಲಿ ಏರುಪೇರು
ಬಹುಭಾಷಾ ನಟ ಶರತ್ಕುಮಾರ್ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಯೇರಿಯಾದಿಂದ ಡಿಹೈಡ್ರೇಷನ್ ಗುರಿಯಾಗಿದ್ದ ನಟನನ್ನ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ರಾಧಿಕಾ ಶರತ್ ಕುಮಾರ್ ಹಾಗೂ ಪುತ್ರಿ ವರಲಕ್ಷ್ಮಿ ಶರತ್ಕುಮಾರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದು ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ಸುದ್ದಿ ಕಾಲಿವುಡ್ನಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಶರತ್ ಕುಮಾರ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪುನೀತ್ ರಾಜ್ಕುಮಾರ್ ನಟನೆಯ 'ರಾಜಕುಮಾರ' ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ಆರಂಭದಲ್ಲಿ ಪೋಷಕ ಕಲಾವಿದರರಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಮುಂದೆ ಹೀರೊ ಆಗಿ ಸಕ್ಸಸ್ ಕಂಡರು. ನಂತರ ಈಗ ಮತ್ತೆ ಪೋಷಕ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಹಜ ಅಭಿನಯದಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಸಾರಥಿ' ಸಿನಿಮಾ ಮೂಲಕ ಶರತ್ ಕುಮಾರ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. 'ಸೀತಾರಾಮ ಕಲ್ಯಾಣ' ಚಿತ್ರದಲ್ಲೂ ನಟಿಸಿದ್ದರು. ತಮಿಳು ಸಿನಿಮಾ ನಿರ್ಮಾಪಕರಾಗಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಾಡುಗಳನ್ನು ಹಾಡಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ದಳಪತಿ ವಿಜಯ್, ರಶ್ಮಿಕಾ ಮಂದಣ್ಣ ನಟನೆಯ 'ವಾರೀಸು' ಚಿತ್ರದಲ್ಲೂ ಶರತ್ಕುಮಾರ್ ಬಣ್ಣ ಹಚ್ಚಿದ್ದಾರೆ. ತಮಿಳುನಾಡು ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದಾರೆ. 'ನಾಟಮ್ಮೈ', 'ಸೂರ್ಯವಂಶ', 'ನಟ್ಪುಕ್ಕಾಗ' ಶರತ್ ಕುಮಾರ್ ಹೀರೊ ಆಗಿ ನಟಿಸಿದ ಹಿಟ್ ಚಿತ್ರಗಳು. ಈ ಮೂರು ಚಿತ್ರಗಳು ಕನ್ನಡಕ್ಕೆ ರೀಮೆಕ್ ಆಗಿತ್ತು.


Click it and Unblock the Notifications











