ತಮಿಳುನಾಡು ಚಿತ್ರಮಂದಿರಗಳ ಮೇಲೆ ನಿರ್ಬಂಧ: ಧನುಷ್, ವಿಜಯ್ ಸೇತುಪತಿ ಸಿನಿಮಾಗಳಿಗೆ ಸಂಕಷ್ಟ
ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೊರೊನಾದ ಎರಡನೇ ಅಲೆಯನ್ನು ತಡೆಯಲು ಹಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ.
ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ, ಕರ್ನಾಟಕದಲ್ಲಿ 50% ಸೀಟು ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಇಂದಿನಿಂದ ಪಕ್ಕದ ತಮಿಳುನಾಡಿನಲ್ಲಿ ಸಹ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗಿದೆ.
ನಾಳೆಯಿಂದ (ಏಪ್ರಿಲ್ 09) ತಮಿಳುನಾಡಿನ ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಕಳೆದ ಎರಡು ತಿಂಗಳಿಂದಲೂ ತಮಿಳುನಾಡಿನ ಚಿತ್ರಮಂದಿರಗಳು 100% ಸೀಟು ಸಾಮರ್ಥ್ಯ ಬಳಸಿ ಕಾರ್ಯ ನಿರ್ವಹಿಸುತ್ತಿದ್ದವು. ಈಗ ಸರ್ಕಾರವು ಹೊರಡಿಸಿರುವ ಹೊಸ ಮಾರ್ಗಸೂಚಿಯಂತೆ 50% ಸೀಟುಗಳನ್ನಷ್ಟೆ ಭರ್ತಿ ಮಾಡಬಹುದಾಗಿದೆ.

ತಮಿಳುನಾಡು ಸರ್ಕಾರದ ಈ ನಿರ್ಧಾರದಿಂದ ಹಲವಾರು ತಮಿಳು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿವೆ. ಧನುಷ್ ನಟನೆಯ 'ಕರ್ಣನ್' ಸಿನಿಮಾ ನಾಳೆ ಬಿಡುಗಡೆ ಆಗಲಿಕ್ಕಿದೆ. ಏಪ್ರಿಲ್ 14 ರಂದು ವಿಜಯ್ ಸೇತುಪತಿ-ಶ್ರುತಿ ಹಾಸನ್ ನಟನೆಯ 'ಲಾಭಂ' ಹಾಗೂ ಚಿಯಾನ್ ವಿಕ್ರಂ, ಕ್ರಿಕೆಟಿಗ ಇರ್ಫಾನ್ ಪಠಾಣ್ ನಟನೆಯ 'ಕೋಬ್ರಾ' ಸಿನಿಮಾ ಬಿಡುಗಡೆ ಆಗಲಿದೆ. ಕಂಗನಾ ರನೌತ್ ನಟನೆಯ 'ತಲೈವಿ' ಏಪ್ರಿಲ್ 23 ಕ್ಕೆ ಬಿಡುಗಡೆ ಆಗಲಿದೆ. ಇವು ಮಾತ್ರವಲ್ಲದೆ ಇನ್ನೂ ಹಲವು ಸಿನಿಮಾಗಳು ಇದೇ ತಿಂಗಳಲ್ಲಿ ಬಿಡುಗಡೆ ಆಗಲು ತಯಾರಾಗಿವೆ. ಸರ್ಕಾರದ ಹೊಸ ಆದೇಶದಿಂದ ಈ ಸಿನಿಮಾಗಳು ಸಂಕಷ್ಟ ಎದುರಿಸಲಿವೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಏಪ್ರಿಲ್ 06 ರಂದು ಮತದಾನ ನಡೆದಿದೆ. ಮತದಾನ ಮುಗಿದ ಬಳಿಕ ಸರ್ಕಾರವು ಈ ನಿರ್ಧಾರ ಕೈಗೊಂಡಿರುವುದು ಗಮನಿಸಬಹುದಾದ ಅಂಶ.
Recommended Video
ಚಿತ್ರಮಂದಿರಗಳ ಮೇಲೆ ನಿರ್ಬಂಧ ಇರುವಾಗಲೇ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಬಿಡುಗಡೆ ಆಗಿ ಕೋಟ್ಯಂತರ ಹಣ ಗಳಿಸಿ ದಾಖಲೆ ಬರೆದಿತ್ತು.


Click it and Unblock the Notifications











