ಚಿತ್ರೀಕರಣ ಪ್ರಾರಂಭಿಸಿ ಸಿನಿಮಾದಿಂದ ಹೊರನಡೆದ ಸೂರ್ಯ! ಕಾರಣವೇನು?
ನಟ ಸೂರ್ಯ ತಮಿಳಿನ ಸ್ಟಾರ್ ನಟರಲ್ಲೊಬ್ಬರು. ಕಮರ್ಷಿಯಲ್ ಸಿನಿಮಾಗಳ ಜೊತೆ-ಜೊತೆಗೆ ಸಾಮಾಜಿಕ ಸಂದೇಶ ಹೊಂದಿರುವ ಅದರಲ್ಲಿಯೂ ತಮಿಳು ಅಸ್ಮಿತೆ, ಥುಳಿತಕ್ಕೊಳಗಾದವರ ಪರವಾಗಿ ಸಿನಿಮಾ ಮಾಡುತ್ತಾ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ನಟ.
ತಮಿಳಿನ ನಟರ ಪೈಕಿ ಬಹಳ ವೃತ್ತಿಪರ, ವೃತ್ತಿನಿಷ್ಠೆ ಹೊಂದಿರುವ ನಟ ಎಂದು ಸೂರ್ಯ ಖ್ಯಾತರು. ಆದರೆ ಇತ್ತೀಚಿನ ಬೆಳವಣಿಗೆ ಇದಕ್ಕೆ ವ್ಯತಿರಿಕ್ತವಾಗಿದೆ.
ನಟ ಸೂರ್ಯ, ಸಿನಿಮಾ ಒಂದರಿಂದ ಹೊರಗೆ ನಡೆದಿದ್ದಾರೆ. ಅದೂ ಸಿನಿಮಾದ ಚಿತ್ರೀಕರಣ ಆರಂಭವಾಗಿ ಮೊದಲ ಷೆಡ್ಯೂಲ್ ಬಹುತೇಕ ಮುಗಿವ ವೇಳೆಗೆ ಸಿನಿಮಾದಿಂದ ಹೊರನಡೆದಿದ್ದಾರೆ ಸೂರ್ಯ. ಇದು ಸ್ವತಃ ಸೂರ್ಯ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.
'ವಾನಂಗನ್' ಹೆಸರಿನ ಹೊಸ ತಮಿಳು ಸಿನಿಮಾ ಒಂದನ್ನು ಸೂರ್ಯ ಒಪ್ಪಿಕೊಂಡಿದ್ದಾರೆ. ಸಿನಿಮಾವನ್ನು ಹಿರಿಯ ನಿರ್ದೇಶಕ ಬಾಲ ನಿರದೇಶಿಸುತ್ತಿದ್ದರು. ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಿ ಕೆಲ ದಿನಗಳಾಗಿತ್ತು. ಆದರೆ ಹಠಾತ್ತನೆ ಸಿನಿಮಾದಿಂದ ಸೂರ್ಯ ಹೊರನಡೆದಿದ್ದಾರೆ.
ನಟ ಸೂರ್ಯ, 'ವಾನಂಗನ್' ಸಿನಿಮಾದಿಂದ ಹೊರಗೆ ನಡೆದಿರುವ ಕುರಿತಾಗಿ ಹೇಳಿಕೆಯೊಂದನ್ನು ಪ್ರಕಟಿಸಿರುವ ನಿರ್ದೇಶಕ ಬಾಲ, 'ಸೂರ್ಯ ತಮ್ಮ ವೃತ್ತಿಯಲ್ಲಿ ಸಾಕಷ್ಟು ಬೆಳೆದಿದ್ದಾರೆ. ಅವರದ್ದು ಬಹಳ ದೊಡ್ಡ ಸ್ಟಾರ್ಡಮ್. ಆದರೆ 'ವಾನಂಗನ್' ಸಿನಿಮಾ ಕತೆ ಅವರ ಸ್ಟಾರ್ಡಂಗೆ ಸೂಟ್ ಆಗುವ ಕತೆಯಲ್ಲ. ಸುಮ್ಮನೆ ಸಾಮಾನ್ಯ ಕತೆಯೊಂದನ್ನು ಅವರಿಗೆ ಸಿನಿಮಾ ಮಾಡಿ ಅವರ ವೃತ್ತಿಗೆ ಸಮಸ್ಯೆ ತಂದೊಡ್ಡುವುದು ನಮಗೆ ಇಷ್ಟವಿಲ್ಲ. ಹಾಗಾಗಿ ಸೂರ್ಯ ಬದಲಿಗೆ ಕತೆಗೆ ಹೊಂದಿಕೆ ಆಗುವ ನಾಯಕನಿಗಾಗಿ ಹುಡುಕಾಡುತ್ತಿದ್ದೇವೆ'' ಎಂದಿದ್ದರು.

ಆದರೆ ಬಾಲ ಅವರ ಈ ಹೇಳಿಕೆಗೆ ಪ್ರತಿಯಾಗಿ ಸೂರ್ಯ ಯಾವುದೇ ಹೇಳಿಕೆ ನೀಡಿರಲಿಲ್ಲ. ವಿಶೇಷವೆಂದರೆ 'ವಾನಂಗನ್' ಸಿನಿಮಾಕ್ಕೆ ಸ್ವತಃ ಸೂರ್ಯ ಅವರೇ ನಿರ್ಮಾಪಕರು. ಸಿನಿಮಾಕ್ಕಾಗಿ ಈಗಾಗಲೇ 10 ಕೋಟಿ ಹಣವನ್ನೂ ಸೂರ್ಯ ಖರ್ಚು ಮಾಡಿದ್ದರು. ಹಾಗಿದ್ದರೂ ಸೂರ್ಯ ಸಿನಿಮಾವನ್ನು ನಿಲ್ಲಿಸಿದ್ದಾರೆ.


Click it and Unblock the Notifications











