ಕಮಲ್ ಹಾಸನ್ ವಿರುದ್ದ ಗಂಭೀರ ಆರೋಪ ಮಾಡಿದ ಕಿರುತೆರೆ ನಟಿ
ತಮಿಳುನಾಡಿನಲ್ಲಿ ವಿವಾದವೊಂದು ಎಲ್ಲೆಲ್ಲಿಯೋ ಸುತ್ತಿ ಕೊನೆಗೆ ಕಮಲ್ ಹಾಸನ್ ಬುಡಕ್ಕೆ ಬಂದಿದೆ. ಚಿತ್ರಸಾಹಿತಿ ಹಾಗೂ ಜನಪ್ರಿಯ ಟಿವಿ ನಟಿಯ ನಡುವೆ ನಡೆದ ಹಣಕಾಸು ವಂಚನೆ ಪ್ರಕರಣದಲ್ಲಿ ಸುಖಾ ಸುಮ್ಮನೆ ಕಮಲ್ ಹಾಸನ್ ಹೆಸರು ಎಳೆದು ತರಲಾಗಿದೆ.
ಆಗಿರುವದಿಷ್ಟು, ತಮಿಳುನಾಡಿನ ಜನಪ್ರಿಯ ಚಿತ್ರಸಾಹಿತಿ ಸ್ನೇಹನ್, ತಮಿಳು ಟಿವಿ ರಂಗದ ಜನಪ್ರಿಯ ನಟಿ ಜಯಲಕ್ಷ್ಮಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ತಮ್ಮ ಹೆಸರನ್ನು ಬಳಸಿಕೊಂಡು ಜಯಲಕ್ಷ್ಮಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.
ಸ್ನೇಹನ್ ತಮ್ಮದೇ ಹೆಸರಿನಲ್ಲಿ ಫೌಂಡೇಶನ್ ನಡೆಸುತ್ತಿದ್ದರು. ಆದರೆ ಕೆಲ ತಿಂಗಳ ಹಿಂದೆ ಅದೇ ಹೆಸರಿನ ಮತ್ತೊಂದು ಫೌಂಡೇಶನ್ ತಲೆ ಎತ್ತಿದ್ದು, ಆ ಫೌಂಡೇಶನ್ ಸಮಾಜ ಕಾರ್ಯ ಮಾಡುವುದಾಗಿ ಹೇಳಿ ಸಾರ್ವಜನಿಕರಿಂದ, ವಿಐಪಿಗಳಿಂದ ಚಂದಾ ವಸೂಲಿ ಮಾಡುತ್ತಿತ್ತು. ಈ ವಿಷಯ ತಿಳಿದ ಕೂಡಲೇ ಸ್ನೇಹನ್ ತಮ್ಮದೇ ಹೆಸರಿನ ಹೊಸ ಫೌಂಡೇಶನ್ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆ ಫೌಂಡೇಶನ್ ನಟಿ ಜಯಲಕ್ಷ್ಮಿ ಅವರದ್ದು ಎಂಬುದು ಗೊತ್ತಾಗಿದೆ. ಕೂಡಲೇ ಅವರ ವಿರುದ್ಧ ದೂರು ನೀಡಿದ್ದಾರೆ ಸ್ನೇಹನ್.

ಆರೋಪ ತಳ್ಳಿ ಹಾಕಿರುವ ನಟಿ
ತಮ್ಮ ವಿರುದ್ಧ ಸ್ನೇಹನ್ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ನಟಿ ಹಾಗೂ ಬಿಜೆಪಿ ಮುಖಂಡೆ ಜಯಲಕ್ಷ್ಮಿ, ಸ್ನೇಹನ್ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಯಾರ ಹೆಸರಲ್ಲೂ ಹಣ ವಸೂಲಿ ಮಾಡಿಲ್ಲವೆಂದಿದ್ದಾರೆ. ತಾವು ಸ್ನೇಹನ್ಗೆ ನೊಟೀಸ್ ಕಳಿಸಿರುವುದಾಗಿಯೂ ಹೇಳಿ ಮಾಧ್ಯಮಗಳಿಗೆ ನೊಟೀಸ್ ಪ್ರತಿ ನೀಡಿದ್ದಾರೆ. ನನ್ನ ಫೌಂಡೇಶನ್ನ ಹೆಸರು ನೊಂದಣಿ ಆಗಿದೆ. ನಾನು ಬೇರೆಯವರ ಹೆಸರನ್ನು ಬಳಸಿ ಫೌಂಡೇಶನ್ ಕಟ್ಟಿಲ್ಲ, ಹಲವು ವರ್ಷಗಳಿಂದ ಫೌಂಡೇಶನ್ ನಡೆಸುತ್ತಿದ್ದು, ಚೆನ್ನೈ ಪ್ರವಾಹ ಹಾಗೂ ಕೋವಿಡ್ ಸಮಯದಲ್ಲಿ ಹಲವರಿಗೆ ಸಹಾಯ ಮಾಡಿದ್ದೇನೆ ಎಂದಿದ್ದಾರೆ.

ಕಮಲ್ ಹಾಸನ್ ಅನ್ನು ಡಿಎಂಕೆ ಖರೀದಿಸಿದೆ
ಮುಂದುವರೆದು, ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದಿರುವ ಜಯಲಕ್ಷ್ಮಿ, ''ಬಿಜೆಪಿ ಸದಸ್ಯೆ ಆಗಿರುವ ನನ್ನ ಮೇಲೆ ಮಕ್ಕಳ್ ನಿಧಿ ಮಯಂ ಪಕ್ಷದವರಾದ ಸ್ನೇಹನ್ ಉದ್ದೇಶಪೂರ್ವಕವಾಗಿ ದೂರು ದಾಖಲಿಸಿದ್ದಾರೆ. ಇದು ರಾಜಕೀಯ ದ್ವೇಷವಷ್ಟೆ. ಕಮಲ್ ಹಾಸನ್ರ ಮಕ್ಕಳ್ ನಿಧಿ ಮಯಂ ಹಾಗೂ ಡಿಎಂಕೆ ಪಕ್ಷಗಳು ಒಂದಾಗಿಬಿಟ್ಟಿವೆ. ಡಿಎಂಕೆ ಪಕ್ಷವು ಕಮಲ್ ಹಾಸನ್ರ ಸಿನಿಮಾಗಳನ್ನು ನಿರ್ಮಿಸಿ ಅವರನ್ನು ಹಣ ಕೊಟ್ಟು ಖರೀದಿಸಿಬಿಟ್ಟಿವೆ. ಅಷ್ಟೇ ಅಲ್ಲ, ಡಿಎಂಕೆಯು ಕಮಲ್ ಹಾಸನ್ ಅವರನ್ನು ಚೆನ್ನೈ ದಕ್ಷಿಣ ಕ್ಷೇತ್ರದಿಂದ ಸಂಸದರನ್ನಾಗಿಸಲು ಸಹ ಯೋಜಿಸಿದೆ ಎಂದಿದ್ದಾರೆ.

ರಜನೀಕಾಂತ್ರ ಈ ಹಿಂದಿನ ಹಿಟ್ ಸಿನಿಮಾ 'ವಿಕ್ರಂ'
ನಟಿ ಜಯಲಕ್ಷ್ಮಿಯ ಈ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದೆ. ರಜನೀಕಾಂತ್ರ ಈ ಹಿಂದಿನ ಹಿಟ್ ಸಿನಿಮಾ 'ವಿಕ್ರಂ' ಹಾಗೂ ಮುಂದಿನ ಸಿನಿಮಾ 'ಇಂಡಿಯನ್ 2'ಗೆ ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ ಸಹ ನಿರ್ಮಾಪಕ ಆಗಿದ್ದಾರೆ. ಇಬ್ಬರೂ ಬಹಳ ಆತ್ಮೀಯರಾಗಿದ್ದಾರೆ. ಇದೇ ಕಾರಣಕ್ಕೆ ಜಯಲಕ್ಷ್ಮಿ ಆರೋಪಿಸಿದ್ದಾರೆ. ಆದರೆ ಕಮಲ್ ಹಾಸನ್ ಹಲವು ಬಾರಿ ಆಡಳಿತಪಕ್ಷವಾಗಿ ಡಿಎಂಕೆಯನ್ನು ಟೀಕಿಸಿದ್ದಾರೆ.
Recommended Video

ಹಲವು ಸಿನಿಮಾಗಳು ಕಮಲ್ ಹಾಸನ್ ಕೈಯಲ್ಲಿವೆ
ಇನ್ನು ಕಮಲ್ ಹಾಸನ್ ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಸಕ್ರಿಯರಾಗಿದ್ದಾರೆ. 'ವಿಕ್ರಂ' ಸಿನಿಮಾದ ಅಭೂತಪೂರ್ವ ಗೆಲುವಿನ ಖುಷಿಯಲ್ಲಿರುವ ಕಮಲ್ ಹಾಸನ್ 'ಇಂಡಿಯನ್ 2' ಸಿನಿಮಾ ಮತ್ತೆ ಪ್ರಾರಂಭಿಸಿದ್ದಾರೆ. ಅದರ ಬಳಿಕ 'ತಲೈವಿಯಾನ್ ಇರುಕ್ಕಿಂಡ್ರನ್' ಹೆಸರಿನ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಸಾಯಿ ಪಲ್ಲವಿ, ಶಿವಕಾರ್ತಿಕೇಯನ್ ನಟನೆಯ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಿಮಾಕ್ಕೆ ಅವರೇ ಕತೆ ಒದಗಿಸಿದ್ದಾರೆ. 'ತೇವರ್ ಮಗನ್ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 'ಪಾಪನಾಸಂ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 'ವಿಕ್ರಂ' ಸಿನಿಮಾದ ಮುಂದುವರೆದ ಭಾಗದಲ್ಲಿಯೂ ಕಮಲ್ ನಟಿಸಲಿದ್ದಾರೆ.


Click it and Unblock the Notifications











