ಉಪೇಂದ್ರ 'ಗಾಡ್ ಫಾದರ್'ಗೆ ಪ್ರೇಕ್ಷಕರ ಪ್ರತಿಕ್ರಿಯೆ
ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು (ಜುಲೈ 27, 2012) ರಾಜ್ಯಾದ್ಯಂತ ಬಿಡುಗಡೆಯಾಗಿರುವ ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್ಫಾದರ್' ಚಿತ್ರಕ್ಕೆ ಪ್ರೇಕ್ಷಕವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಒಟ್ಟೂ 120 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಭಾರೀ ಯಶಸ್ಸಿನ ನಿರೀಕ್ಷೆಯಿತ್ತು. ನಿರೀಕ್ಷೆ ನಿಜವಾಗುವ ಲಕ್ಷಣ ಮೊದಲ ಶೋ ಮುಗಿಯುತ್ತಿದ್ದಂತೆ ಕಂಡುಬಂದಿದೆ.
2006 ರಲ್ಲಿ ಬಿಡುಗಡೆಯಾಗಿದ್ದ ಅಜಿತ್ ನಟನೆಯ ತಮಿಳಿನ 'ವರಲಾರು' ಚಿತ್ರದ ರೀಮೇಕ್ ಆಗಿರುವ ಈ ಗಾಡ್ ಫಾದರ್ ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳು ಹೀಗೆ ತ್ರಿಪಾತ್ರ ಉಪ್ಪಿಯದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಮೂರೂ ವಿಭಾಗ ಚೆನ್ನಾಗಿದ್ದು ಎಲ್ಲೂ ಚಿತ್ರ ಬೋರೆನಿಸುವುದಿಲ್ಲ ಎಂಬುದ ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ. ಜೊತೆಗೆ, ಚಿತ್ರದ ಛಾಯಾಗ್ರಹಣವೂ ಚೆನ್ನಾಗಿದೆ ಎನ್ನಲಾಗಿದೆ.
ಗಾಡ್ ಫಾದರ್ ಚಿತ್ರದಲ್ಲಿ ಭಾರೀ ಕ್ರೂರತನದ ಮೂರು ಪಾತ್ರಗಳಿಗೆ ಉಪೇಂದ್ರ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ ಎಂಬುದು ಚಿತ್ರ ನೋಡಿ ಹೊರಬಂದಿರುವ ಪ್ರೇಕ್ಷಕರ ಮಾತು. ಉಪೇಂದ್ರ ನಟನೆಯ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿರುವ ತೀವ್ರ ಕುತೂಹಲವಿತ್ತು. ಕಾರಣ, ತಮಿಳಿನಲ್ಲಿ ಬಂದಿದ್ದ ಮೂಲ ಚಿತ್ರ ವರಲಾರುನಲ್ಲಿ ನಟಿಸಿದ್ದ ಅಜಿತ್, ಆ ಚಿತ್ರದ ನಟನೆಗೆ ಭಾರಿ ಪ್ರಶಂಸೆ ಪಡೆದಿದ್ದರು. ಉಪ್ಪಿ ಈ ರೀತಿ ಪಾತ್ರ ಹೊಸದು.
ಪಕ್ಕಾ ಥ್ರಿಲ್ಲರ್ ಚಿತ್ರವಾಗಿರುವ ಗಾಡ್ ಫಾದರ್ ನಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ ಹಾಗೂ ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಂಡಗಲಿ ಕೆ ಮಂಜು ನಿರ್ಮಾಣದ ಗಾಡ್ ಫಾದರ್ ಚಿತ್ರಕ್ಕೆ ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್ ನಿರ್ದೇಶಕರು.
ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ, ಗಾಡ್ಫಾದರ್ ಚಿತ್ರದ ಪ್ರಮುಖ ಆಕರ್ಷಣೆ ಎನ್ನಲಾಗಿತ್ತು. ಚಿತ್ರದಲ್ಲಿರುವ ಏಳು ಹಾಡುಗಳ ಪೈಕಿ ' ಸರಿಗಮ ಸಂಗಮ', 'ನಿನ್ನೆದೆ ಶ್ರುತಿಯಲಿ', ಹಾಗೂ 'ನೀನೆ ಈ ಕಣ್ಣ..' ಮೂರು ಹಾಡುಗಳು ತಮ್ಮ ಮಾಧುರ್ಯ ಹಾಗೂ ದೃಶ್ಯವೈಭವದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಮಿಕ್ಕ ಹಾಡುಗಳು ಹಾಗೂ ಸಂಗೀತವೂ ಓಕೆ ಎಂಬುದು ಚಿತ್ರ ನೋಡಿದವರ ಅಭಿಪ್ರಾಯ.
ಒಟ್ಟಿನಲ್ಲಿ ಮೊದಲ ಶೋ ನೋಡಿ ಬಂದವರು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ನೀಡಿದ್ದಾರೆ. ಇಂದು ಹಬ್ಬವಾದ ಕಾರಣಕ್ಕೆ ರಜಾ ಇರುವುದರಿಂದ ಥಿಯೇಟರ್ ಫುಲ್ ಆಗಿರುವ ಸಾಧ್ಯತೆ ಇರಬಹುದು ಎಂಬ ಕೆಲವರ ಲೆಕ್ಕಾಚಾರ ಸರಿಯಿರುವ ಸಾಧ್ಯತೆಯಿದೆ. ಯಾವುದಕ್ಕೂ, ಸೂಪರ್ ಹಿಟ್ ದಾಖಲಿಸಿದ್ದ ತಮಿಳು ಚಿತ್ರಕ್ಕೆ ಕನ್ನಡದ ಪ್ರೇಕ್ಷಕರ ಪಕ್ಕಾ ಅಭಿಪ್ರಾಯ ತಿಳಿದುಬರಲು ಸ್ವಲ್ಪ ದಿನ ಕಾಯಲೇಬೇಕು... (ಒನ್ ಇಂಡಿಯಾ ಕನ್ನಡ)


Click it and Unblock the Notifications











