ಎಸ್ಪಿಬಿ ಸಾವಿನ ಸುದ್ದಿ ಚರಣ್ಗೂ ಮೊದಲೇ ತಿಳಿಸಿದ್ದು ವೆಂಕಟ್ ಪ್ರಭು
ಸಂಗೀತ ದಿಗ್ಗಜ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ಮಧ್ಯಾಹ್ನ 1.04ರಂದು ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಇನ್ನು ಅವರ ಪುತ್ರ ಎಸ್ ಪಿ ಬಿ ಚರಣ್ ಅವರ ಪರಿಸ್ಥಿತಿ ಹೇಗಿರಬೇಡ. ಇಡೀ ಪ್ರಪಂಚವೇ ಕೊಂಡಾಡಿರುವ ಗಾಯಕನ ಪುತ್ರನಾಗಿ ಚರಣ್ ಅವರು ತಮ್ಮ ತಂದೆಯ ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲದ ಮೂಲಕ ತಿಳಿಸುವಂತೆ ಆತ್ಮೀಯ ಗೆಳೆಯ ನಿರ್ದೇಶಕ ವೆಂಕಟ್ ಪ್ರಭು ಅವರಿಗೆ ಹೇಳಿದರು ಎಂಬ ಮಾಹಿತಿಯಿದೆ.
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚರಣ್ ಜೊತೆಗೆ ಇದ್ದ ವೆಂಕಟ್ ಪ್ರಭು ಅವರು ಎಸ್ಪಿಬಿ ಸಾವಿನ ಸುದ್ದಿಯನ್ನು ಚರಣ್ ಗೂ ಮೊದಲೇ ಟ್ವೀಟ್ ಮಾಡಿ ತಿಳಿಸಿದರು. ನಂತರ ಚರಣ್ ಗೆ ಧೈರ್ಯ ತುಂಬಿ ಆಸ್ಪತ್ರೆಯ ಹೊರಗಡೆ ಕಾದಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ವಿಷಯ ತಿಳಿಸಲು ಹೇಳಿದರು.
ನಿರ್ದೇಶಕ ವೆಂಕಟ್ ಪ್ರಭು, ನಟ ಪ್ರಸನ್ನ, ಚಿತ್ರಕರ್ಮಿ ಭಾರತಿ ರಾಜಾ ಅವರು ಮೊದಲಿಗೆ ದುಃಖದ ವಾರ್ತೆಯನ್ನು ಜನತೆಯ ಮುಂದಿಡುವ ಕಷ್ಟದ ಕೆಲಸ ಹೊತ್ತುಕೊಂಡವರು..

ಎಸ್ಪಿಬಿ ಚರಣ್ ಅವರು ಮಾಧ್ಯಮದವರ ಮುಂದೆ ಬಂದು ಮಧ್ಯಾಹ್ನ 1.04ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಅಪ್ಪ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು. ಎಂಜಿಎಂ ಆಸ್ಪತ್ರೆಯವರು ಅಂತಿಮ ಹೆಲ್ತ್ ಬುಲೇಟಿನ್ ಇನ್ನರ್ಧ ಗಂಟೆಯಲ್ಲಿ ವಿವರವಾಗಿ ನೀಡುತ್ತಾರೆ ಎಂದಷ್ಟೇ ಹೇಳಿ ತೆರಳಿದರು.
ಕೊರೊನಾ ವೈರಸ್ಗೆ ತುತ್ತಾಗಿದ್ದ ಎಸ್ಪಿಬಿ ಕಳೆದ ಕೆಲವು ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿದ್ದರು. ಆದ್ರೆ, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಕಳೆದ ಎರಡು ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದರು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದ ವೈದ್ಯರು ಅಮೆರಿಕದ ತಜ್ಞರ ನೆರವು ಕೂಡಾ ಪಡೆದುಕೊಂಡಿದ್ದರು. ಆದರೆ, ವೈದ್ಯರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.


Click it and Unblock the Notifications











