ವೈಎಸ್.ಜಗನ್ ಮಾದರಿ ಅನುಸರಿಸಿ: ತಮಿಳುನಾಡು ಸಿಎಂಗೆ ವಿಶಾಲ್ ಮನವಿ
ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಚರ್ಚೆಗಳಾಗುತ್ತಿದ್ದು, ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು, ನಟರು ಆಂಧ್ರ ಹಾಗೂ ತೆಲಂಗಾಣ ಸಿಎಂ ಅವರುಗಳನ್ನು ಭೇಟಿ ಮಾಡಿ, ಚಿತ್ರಮಂದಿರ ಟಿಕೆಟ್ ದರ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಚಿತ್ರಮಂದಿರಗಳ ಟಿಕೆಟ್ ದರ ಏರಿಸುವ ಬಗ್ಗೆ ಆಂಧ್ರ ಸಿಎಂ ಜಗನ್ ಏಕಾ-ಏಕಿ ನಿರ್ಣಯ ತೆಗೆದುಕೊಂಡಿಲ್ಲ ಬದಲಿಗೆ, ಒಂದೊಳ್ಳೆ ಆಲೋಚನೆಯನ್ನು ಮಾಡಿದ್ದು, ನಿರ್ಮಾಪಕರಿಗೆ, ಚಿತ್ರಮಂದಿರ ಮಾಲೀಕರಿಗೆ ನಷ್ಟವಾಗುತ್ತಿದೆ ಇಲ್ಲವೆ ಪರೀಕ್ಷಿಸಿ ಆ ನಂತರ ನಿರ್ಣಯ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಹೊಸ ಆನ್ಲೈನ್ ಪೋರ್ಟಲ್ ಒಂದನ್ನು ಸರ್ಕಾರದ ವತಿಯಿಂದಲೇ ಬಿಡುಗಡೆ ಮಾಡಲಾಗುತ್ತಿದ್ದು, ಇಡೀ ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ಆ ಪೋರ್ಟಲ್ ಮೂಲಕವೇ ಸಿನಿಮಾ ಟಿಕೆಟ್ ವಿತರಿಸಬೇಕಾಗುತ್ತದೆ. ಒಟ್ಟು ಎಷ್ಟು ಟಿಕೆಟ್ ಮಾರಾಟವಾಗಿದೆ ಎಂಬ ಅಂಕಿ-ಅಂಶ ಸರ್ಕಾರಕ್ಕೆ ಸುಲಭವಾಗಿ ಸಿಗುತ್ತದೆ. ಇದರಿಂದ ನಿರ್ಮಾಫಕರಿಗೆ ಲಾಭವೆಷ್ಟಾಗುತ್ತಿದೆ, ಚಿತ್ರಮಂದಿರದವರಿಗೆ ಎಷ್ಟು ಲಾಭ ಗೊತ್ತಾಗುತ್ತದೆ. ಆಗ ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಿಸಬೇಕೊ ಇಳಿಸಬೇಕೊ ನಿರ್ಧಾರ ಮಾಡಲಾಗುತ್ತಿದೆ.

ವೈ.ಎಸ್.ಜಗನ್ರ ಈ ಐಡಿಯಾವನ್ನು ತಮಿಳಿನ ಖ್ಯಾತ ನಟ, ನಿರ್ಮಾಪಕ ವಿಶಾಲ್ ಬಹುವಾಗಿ ಮೆಚ್ಚಿಕೊಂಡಿದ್ದು, ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಸಹ ಜಗನ್ ಮಾದರಿಯಲ್ಲಿಯೇ ಹೊಸ ಪೋರ್ಟಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ವಿಶಾಲ್, ''ಆನ್ಲೈನ್ ಟಿಕೆಟ್ ಬುಕಿಂಗ್ ಪೋರ್ಟಲ್ ಹೊರತಂದಿದ್ದಕ್ಕೆ ಧನ್ಯವಾದ ಜಗನ್. ತಮಿಳುನಾಡಿನಲ್ಲಿಯೂ ಇಂಥಹಾ ವ್ಯವಸ್ಥೆ ಬರಲಿ ಎಂದು ಬಹಳ ದಿನಗಳಿಂದ ನಾವು ಬಯಸಿದ್ದೆವು. ಇದೇ ಮಾದರಿಯನ್ನು ತಮಿಳುನಾಡಿನಲ್ಲಿಯೂ ತನ್ನಿ ಎಂದು ನಾನು ಸಿಎಂ ಎಂಕೆ ಸ್ಟಾಲಿನ್ ಬಳಿ ಮನವಿ ಮಾಡುತ್ತೇನೆ'' ಎಂದಿದ್ದಾರೆ ವಿಶಾಲ್.
ಜಗನ್ ತಂದಿರುವ ಈ ಮಾದರಿಯ ಪಾರದರ್ಶಕವಾಗಿದ್ದು ಸರ್ಕಾರದ ಹಾಗೂ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿದೆ. ಈ ವ್ಯವಸ್ಥೆಯನ್ನು ತಮಿಳುನಾಡಿನ ಸಿನಿಮಾ ಪ್ರೇಮಿಗಳು ಮತ್ತು ಸಿನಿಮಾ ಕರ್ಮಿಗಳು ಬೆಂಬಲಿಸಲಿದ್ದಾರೆ ಎಂದಿದ್ದಾರೆ ವಿಶಾಲ್.


Click it and Unblock the Notifications











