ಲೆಜೆಂಡರಿ ನಿರ್ಮಾಪಕ ಆರ್.ಬಿ ಚೌಧರಿ ವಿರುದ್ಧ ನಟ ವಿಶಾಲ್ ದೂರು
ತಮಿಳಿನ ಖ್ಯಾತ ನಟ, ನಿರ್ಮಾಪಕ ವಿಶಾಲ್ ಲೈಂಗಿಕ ಕಿರುಕುಳ ಆರೋಪ ಎದುರಿಸಿದ ಬೆನ್ನಲ್ಲೇ ಲೆಜೆಂಡರಿ ನಿರ್ದೇಶಕ ಆರ್.ಬಿ ಚೌಧರಿ ವಿರುದ್ಧ ದೂರು ನೀಡಿದ್ದಾರೆ. ಚೆನ್ನೈನ ಟಿ.ನಗರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದ್ದು, ಕಾಲಿವುಡ್ ನಲ್ಲಿ ಅಚ್ಚರಿ ಮೂಡಿಸಿದೆ.
ನಟ ವಿಶಾಲ್ ಆಗಾಗ ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ನಿರ್ಮಾಪಕ ಆರ್ ಬಿ ಚೌಧರಿ ವಿರುದ್ಧ ಸಿಡಿದೆದ್ದು ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಆರ್ ಬಿ ಚೌಧರಿ ಬಳಿ ಸಾಲ ಪಡೆದಿದ್ದ ವಿಶಾಲ್ ಸಾಲವನ್ನು ಮರುಪಾವತಿಸಿದ ಬಳಿಕವೂ ದಾಖಲೆಗಳನ್ನು ಪಾವಸ್ ಮಾಡಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಶಾಲ್, 'ಇರುಂಬು ತಿರೈ ಚಿತ್ರಕ್ಕಾಗಿ ಸಾಲವನ್ನು ಮರುಪಾವತಿಸಿ ತಿಂಗಳಾದರು ಚೆಕ್, ಬಾಂಡ್ ಮತ್ತು ಪ್ರಾಮಿಸರಿಗಳನ್ನು ಆರ್.ಬಿ ಚೌಧರಿ ಹಿಂದಿರುಗಿಸಿಲ್ಲ. ಏನಾದರೂ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕೊನೆಯದಾಗಿ ದಾಖಲೆಗಳು ಮಿಸ್ ಆಗಿವೆ ಎಂದು ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ' ಎಂದು ಹೇಳಿದ್ದಾರೆ.

ಇತ್ತೀಚಿಗಷ್ಟೆ ನಟ ವಿಶಾಲ್ ವಿರುದ್ಧ ಕನ್ನಡದ 'ಮನಸೆಲ್ಲಾ ನೀನೆ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಗಾಯತ್ರಿ ರಘುರಾಮ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ನಟ ವಿಶಾಲ್ ಕುರಿತು ಸರಣಿ ಟ್ವೀಟ್ ಮಾಡಿದ್ದ ಗಾಯತ್ರಿ ರಘುರಾಮ್, 'ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಇವರದ್ದು' ಎಂದು ಗಂಭೀರ ಆರೋಪ ಮಾಡಿದ್ದರು.


Click it and Unblock the Notifications











