ಚಿರಂಜೀವಿ ಮನೆಗೆ ಬಂದು ಸಿನಿಮಾ ತೋರಿಸಿದ ಅಮೀರ್ ಖಾನ್
ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಿಂದ ದಕ್ಷಿಣ ಭಾರತ ಚಿತ್ರರಂಗ, ಹಿಂದಿ ಚಿತ್ರರಂಗದ ನಡುವೆ ಅಂತರ ಕಡಿಮೆಯಾಗಿದೆ. ಇತರೆ ರಾಜ್ಯಗಳಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡುವ ಉದ್ದೇಶದಿಂದ ನೆರೆ-ಹೊರೆ ಚಿತ್ರರಂಗದ ಸ್ಟಾರ್ ನಟರು ಹಿಂದೆಂದಿಗಿಂತಲೂ ಆತ್ಮೀಯರಾಗಿದ್ದಾರೆ.
ಬಾಲಿವುಡ್ ಸ್ಟಾರ್ ನಟರು ತಮ್ಮ ಸಿನಿಮಾಗಳ ಪ್ರಚಾರಕ್ಕೆ ದಕ್ಷಿಣದ ಸ್ಟಾರ್ ನಟರ ಸಹಾಯ ಕೇಳುವುದು, ದಕ್ಷಿಣದ ನಟರು ಉತ್ತರ ಭಾರತದಲ್ಲಿ ಸಿನಿಮಾ ಪ್ರಚಾರ ಮಾಡಲು ಬಾಲಿವುಡ್ ನಟರ ನೆರವು ಪಡೆಯುವುದು ಸಾಮಾನ್ಯವಾಗಿದೆ.
ಇದೀಗ ಬಾಲಿವುಡ್ನ ಸ್ಟಾರ್ ನಟ ಅಮೀರ್ ಖಾನ್ ತಮ್ಮ ಹೊಸ ಸಿನಿಮಾದ ಬಿಡುಗಡೆಯ ಹೊಸ್ತಿಲಲ್ಲಿದ್ದು, ದಕ್ಷಿಣ ಭಾರತದಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡಲು ಚಿರಂಜೀವಿಯನ್ನು ಆಸರಿಸಿದ್ದಾರೆ ಎನಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಅಮೀರ್ ಖಾನ್ ಹೈದರಾಬಾದ್ನ ಚಿರಂಜೀವಿಯವರ ನಿವಾಸಕ್ಕೆ ಆಗಮಿಸಿದ್ದ ನಟ ಅಮೀರ್ ಖಾನ್ ತಮ್ಮ ಹೊಸ ಸಿನಿಮಾವನ್ನು ಚಿರಂಜೀವಿ ಸೇರಿದಂತೆ ತೆಲುಗಿನ ಹಲವು ದಿಗ್ಗಜ ಸಿನಿಮಾ ಕರ್ಮಿಗಳಿಗೆ ತೋರಿಸಿದ್ದಾರೆ.

ಚಿರಂಜೀವಿ ನಿವಾಸದಲ್ಲಿ ವಿಶೇಷ ಪ್ರದರ್ಶನ
ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾವನ್ನು ನಟ ಚಿರಂಜೀವಿ ನಿವಾಸದಲ್ಲಿ ಪ್ರದರ್ಶನ ಮಾಡಿದ್ದಾರೆ ನಟ ಅಮೀರ್ ಖಾನ್. ಚಿರಂಜೀವಿ ನಿವಾಸದಲ್ಲಿನ ವಿಶೇಷ ಚಿತ್ರಮಂದಿರದಲ್ಲಿ ಚಿರಂಜೀವಿ ಜೊತೆಗೆ ನಾಗಾರ್ಜುನ, ನಿರ್ದೇಶಕ ರಾಜಮೌಳಿ, 'ಪುಷ್ಪ' ನಿರ್ದೇಶಕ ಸುಕುಮಾರ್, ನಾಗಾರ್ಜುನ ಪುತ್ರ ನಾಗ ಚೈತನ್ಯ ಅವರುಗಳಿಗೆ ಒಟ್ಟಿಗೆ ಅಮೀರ್ ಖಾನ್ ತಮ್ಮ ಸಿನಿಮಾ ತೋರಿಸಿದ್ದಾರೆ.

ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡ ಚಿರಂಜೀವಿ
ಸಿನಿಮಾ ವೀಕ್ಷಿಸಿದ ಚಿರಂಜೀವಿ ಉತ್ಸಾಹಭರಿತವಾಗಿ ಬಂದು ಅಮೀರ್ ಖಾನ್ ಅನ್ನು ಅಪ್ಪಿಕೊಂಡು ಅದ್ಭುತವಾದ ಸಿನಿಮಾ ಎಂದು ಹೊಗಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿನಿಮಾ ವೀಕ್ಷಿಸಿದ ಇತರೆ ದಿಗ್ಗಜರು ಸಹ ಅಮೀರ್ ಖಾನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಚಿರಂಜೀವಿ ಅಂತೂ ಅಮೀರ್ ಖಾನ್ರ ಎಕ್ಸ್ಪ್ರೆಶನ್ಸ್ಗಳನ್ನು ಬಹುವಾಗಿ ಮೆಚ್ಚಿದ್ದಾಗಿ ಹೇಳಿದ್ದಾರೆ. ಅದೇ ಸಿನಿಮಾದಲ್ಲಿ ನಟಿಸಿರುವ ನಾಗ ಚೈತನ್ಯ ಅನ್ನೂ ಸಹ ಚಿರಂಜೀವಿ ಅಭಿನಂದಿಸಿದ್ದಾರೆ.

ಅಭಿಪ್ರಾಯ ಹಂಚಿಕೊಂಡ ರಾಜಮೌಳಿ, ಸುಕುಮಾರ್
ರಾಜಮೌಳಿ, ಸುಕುಮಾರ್ ಅವರುಗಳು ಸಿನಿಮಾದ ಬಗ್ಗೆ ಅಮೀರ್ ಖಾನ್ ಬಳಿ ವಿಶೇಷ ಟಿಪ್ಪಣಿಗಳನ್ನು ನೀಡುತ್ತಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ. ಅಮೀರ್ ಖಾನ್ ಸಹ ಚಿತ್ರೀಕರಣದ ವಿವರವನ್ನು ರಾಜಮೌಳಿ, ಚಿರಂಜೀವಿಗೆ ವಿವರಿಸಿದ್ದಾರೆ. ಈ ವಿಡಿಯೋವನ್ನು ಚಿರಂಜೀವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ''ಲಾಲ್ ಸಿಂಗ್ ಛಡ್ಡಾ' ಸಿನಿಮಾದ ತೆಲುಗು ಆವೃತ್ತಿಯನ್ನು ಪ್ರೆಸೆಂಟ್ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಸಿನಿಮಾ ಒಂದು ಭಾವುಕ ಪಯಣ, ಖಂಡಿತವಾಗಿಯೂ ಈ ಸಿನಿಮಾ ನಮ್ಮ ತೆಲುಗು ಜನರಿಗೆ ಇಷ್ಟವಾಗುತ್ತದೆ'' ಎಂದಿದ್ದಾರೆ.

ಜಪಾನ್ನಲ್ಲಿ ಏರ್ಪೋರ್ಟ್ ಸಣ್ಣ ಭೇಟಿ ಕಾರಣ
ಮುಂದುವರೆದು, ''ಕೆಲ ವರ್ಷಗಳ ಹಿಂದೆ ಜಪಾನ್ನ ಟೋಕಿಯೋದ ವಿಮಾನ ನಿಲ್ದಾಣದಲ್ಲಿ ಅಮೀರ್ ಖಾನ್ ಜೊತೆ ಅನಿರೀಕ್ಷಿತವಾಗಿ ಆದ ಭೇಟಿಯೊಂದು ಅವರ ಸಿನಿಮಾ 'ಲಾಲ್ ಸಿಂಗ್ ಛಡ್ಡಾ'ದ ಭಾಗವಾಗಲು ಅವಕಾಶ ಮಾಡಿಕೊಟ್ಟಿದೆ. ಆ ಸಣ್ಣ ಭೇಟಿ, ಅಮೀರ್ ಖಾನ್ರ ಈ ಡ್ರೀಮ್ ಪ್ರಾಜೆಕ್ಟ್ನಲ್ಲಿ ನನ್ನನ್ನು ಭಾಗಿಯಾಗಿಸಿದೆ. ಅದೆಲ್ಲ ಏನೇ ಇರಲಿ, ಎಂಥಹಾ ಅದ್ಭುತವಾದ ಸಿನಿಮಾವನ್ನು ಅಮೀರ್ ಖಾನ್ ಮಾಡಿದ್ದಾರೆ. ಅದ್ಭುತವಾದ ಭಾವುಕ ಪ್ರಪಂಚಕ್ಕೆ ಈ ಸಿನಿಮಾ ಕರೆದೊಯ್ಯುತ್ತದೆ'' ಎಂದಿದ್ದಾರೆ ಚಿರಂಜೀವಿ.


Click it and Unblock the Notifications











