Pawan Kalyan: ಕರ್ನಾಟಕದ ದೇವಾಲಯ ಸ್ವಚ್ಛತೆಗೆ ಕೈ ಜೋಡಲಿದ್ದಾರೆ ಪವನ್ ಕಲ್ಯಾಣ್
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಕ್ಕೆ ಟಾಲಿವುಡ್ ಖ್ಯಾತ ನಟ ಪವನ್ ಕಲ್ಯಾಣ್ ಭೇಟಿ ನೀಡಿದ್ದಾರೆ. ಸ್ನೇಹಿತರ ಜೊತೆ ಕುಕ್ಕೆಗೆ ಬೇಟಿ ನೀಡಿದ ಪವನ್ ಕಲ್ಯಾಣ್, ಕ್ಷೇತ್ರದಲ್ಲಿ ಆಶ್ಲೇಷಾ ಬಲಿ ಮತ್ತು ಆದಿ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಮರ್ಪಣೆ ಮಾಡಿದ್ದಾರೆ. ದೇವಸ್ಥಾನದಲ್ಲಿ ನಡೆಯುವ ಸ್ವಚ್ಛ ಮಂದಿರ ಅಭಿಯಾನದ ಬಗ್ಗೆಯೂ ಮಾಹಿತಿ ಪಡೆದ ಪವನ್, ದೇವಸ್ಥಾನದಲ್ಲಿ ಗಿಡವೊಂದನ್ನು ನೆಟ್ಟು ಈ ಅಭಿಯಾನದಲ್ಲಿ ತಾವೂ ಭಾಗಿಯಾಗುವುದಾಗಿ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದ ದರ್ಶನ ಪಡೆದು ಮಹಾಪೂಜೆಯಲ್ಲಿ ಭಾಗಿಯಾಗಿ ಆಶ್ಲೇಷಾ ಬಲಿ ಸೇವೆಯನ್ನು ಪವನ್ ಕಲ್ಯಾಣ್ ಮಾಡಿದ್ದಾರೆ. ಲಕ್ಷಾಂತರ ಮಂದಿ ಭಕ್ತ ಸಮೂಹವನ್ನು ಪ್ರತಿದಿನ ಹೊಂದುವ ಕುಕ್ಕೆ ಸುಬ್ರಹ್ಮಣ್ಯ ವನ್ನು ಸ್ವಚ್ಛವಾಗಿರಿಸುವ ಕ್ಷೇತ್ರದ ಯೋಜನೆಯ ಪವನ್ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ದೇವಾಲಯದವರು ಈ ಅಭಿಯಾನದಲ್ಲಿ ತೊಡಗಿಸಿ ಕೊಳ್ಳಬೇಕು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಬರುವ ಭಕ್ತಾದಿಗಳು ಆದಷ್ಟು ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಬೇಕು. ಇದು ನಾಗದೇವರು ಸಂಚಾರ ಮಾಡುವ ಪವಿತ್ರ ಭೂಮಿಯಾಗಿದೆ. ಈ ಭೂಮಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದಲ್ಲಿ ಬಿಸಾಡಿ ಅವುಗಳಿಗೆ ತೊಂದರೆ ಕೊಡುವುದು ಬೇಡ. ನಾಗನ ರಕ್ಷಣೆ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ. ಜೊತೆಗೆ ದೇವಾಲಯವು ತನ್ನ 500 ಸಿಬ್ಬಂದಿ, ಸ್ವಯಂಸೇವಕರ ಜೊತೆ ಪ್ರತಿ ತಿಂಗಳು ಮಾಡುತ್ತಿರುವ ಸ್ವಚ್ಛ ಮಂದಿರ ಅಭಿಯಾನ ನನಗೆ ಹಿಡಿಸಿತು. ನನ್ನ ಸಹಕಾರ ಇದಕ್ಕೆ ಇರಲಿದೆ'' ಎಂದರು.

ಮೆಚ್ಚುಗೆ ವ್ಯಕ್ತಪಡಿಸಿದ ಪವನ್ ಕಲ್ಯಾಣ್
ನಂತರ ದೇವಾಲಯದ ಮಾಸ್ಟರ್ ಪ್ಲಾನಿನಲ್ಲಿ ತೆಗೆದುಕೊಳ್ಳಲು ನಿರ್ಣಯಿಸಿರುವ ಕಟ್ಟಡಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ನಾನು ನಿಮ್ಮೊಂದಿಗೆ ಜೊತೆಗೂಡುತ್ತೇನೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪಾವಿತ್ರ್ಯತೆ ಹಾಗೂ ಪರಂಪರೆಯನ್ನು ಮುಂದುವರಿಸೋಣ ಎಂದರು.

''ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಅನುಸರಿಸುವಂತಾಗಬೇಕು''
ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಬದಿ ಗಿಡಗಳನ್ನು ನೆಟ್ಟು ಪೋಷಿಸುವುದನ್ನು ಕಂಡು ಎಲ್ಲಾ ದೇವಸ್ಥಾನಗಳೂ ಕುಕ್ಕೆ ಸುಬ್ರಹ್ಮಣ್ಯವನ್ನು ಅನುಸರಿಸರಿಸುವಂತೆ ಆಗಬೇಕು, ಇದರಿಂದ ಪರಿಸರ ರಕ್ಷಣೆ ಮತ್ತು ಸ್ವಚ್ಛತಾ ಜಾಗೃತಿ ಸಾಧ್ಯ ಅಂತಾ ಪವನ್ ಕಲ್ಯಾಣ್ ಹೇಳಿದರು. ಬಳಿಕ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಗಿಡ ನೆಡುವ ಮೂಲಕ ಸ್ವಚ್ಛ ಮಂದಿರದ ಅಭಿಯಾನಕ್ಕೆ ಪವನ್ ಕೈಜೋಡಿಸಿದ್ದಾರೆ. ಪವನ್ ಗೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಸೇರಿದಂತೆ ಸದಸ್ಯರು, ಪದಾಧಿಕಾರಿಗಳು ಜೊತೆಗಿದ್ದರು.

ಬಿಜೆಪಿ ಜೊತೆ ಕೈ ಜೋಡಿಸಿರುವ ಪವನ್ ಕಲ್ಯಾಣ್
ಸಿನಿಮಾದ ಜೊತೆ ರಾಜಕೀಯದಲ್ಲಿಯೂ ತೊಡಗಿಕೊಂಡಿರುವ ಪವನ್ ಕಲ್ಯಾಣ್, ಅಧ್ಯಾತ್ಮದ ಬಗ್ಗೆ ಆಸಕ್ತಿವುಳ್ಳವರಾಗಿದ್ದಾರೆ. 'ವಕೀಲ್ ಸಾಬ್' ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮುನ್ನಾ, ಸಾಧುವಿನ ರೀತಿ ಉದ್ದ ಗಡ್ಡ ಬಿಟ್ಟು ಕಾವಿ ಬಟ್ಟೆಗಳನ್ನು ತೊಟ್ಟುಕೊಂಡು ಪವನ್ ಕಲ್ಯಾಣ್ ಓಡಾಡುತ್ತಿದ್ದರು. ಬಿಜೆಪಿ ಜೊತೆ ಕೈಜೋಡಿಸಿರುವ ಪವನ್ ಕಲ್ಯಾಣ್ ಕೆಲವು ದಿನಗಳ ಹಿಂದಷ್ಟೆ ಮಾಡಿದ ಭಾಷಣದಲ್ಲಿ ಸುಭಾಷ್ ಚಂದ್ರ ಬೋಸ್ ಕುರಿತಾಗಿ ಮಾಹಿತಿಯನ್ನು ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ನಟನೆಯ 'ಭೀಮ್ಲಾ ನಾಯಕ್' ಸಿನಿಮಾ ಕಳೆದ ತಿಂಗಳಷ್ಟೆ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಹಿಟ್ ಎನಿಸಿಕೊಂಡಿದೆ. ಇದೀಗ ಕ್ರಿಶ್ ನಿರ್ದೇಶನದ 'ಹರಿ ಹರ ವೀರ ಮಲ್ಲು' ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಇದು ಪವನ್ ನಟಿಸುತ್ತಿರುವ ಮೊದಲ ಐತಿಹಾಸಿಕ ಕಥೆಯುಳ್ಳ ಸಿನಿಮಾ. ಅದರ ಬಳಿಕ ಸುರೇಂದ್ರ ರೆಡ್ಡಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ಪವನ್ ನಟಿಸಲಿದ್ದಾರೆ. 'ಭವದೀಯಡು ಭಗತ್ಸಿಂಗ್' ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ಇದೆ.


Click it and Unblock the Notifications











