ಒಟ್ಟಿಗೆ ಕಾಣಿಸಿಕೊಂಡ ಮಾಜಿ ವೈರಿಗಳು, ಒಂದಾಯ್ತ ಮೆಗಾ-ನಂದಮೂರಿ ಫ್ಯಾಮಿಲಿ
ತೆಲುಗು ಚಿತ್ರರಂಗದಲ್ಲಿ ಕೆಲವು ದಶಕಗಳಿಂದಲೂ ಎನ್ಟಿಆರ್ ಕುಟುಂಬ ಹಾಗೂ ಮೆಗಾ ಕುಟುಂಬಗಳ ನಡುವೆ ವೈರತ್ಯ ಸಾಗಿ ಬಂದಿದೆ. ಪರಸ್ಪರ ಕುಟುಂಬಗಳು ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡುವುದು, ಪರಸ್ಪರರ ವಿರುದ್ಧ ಸಿನಿಮಾಗಳಲ್ಲಿ, ನಿಜ ಜೀವನದಲ್ಲಿ ಡೈಲಾಗ್ಗಳನ್ನು ಹೊಡೆಯುವುದು ಸಾಮಾನ್ಯವಾಗಿತ್ತು.
ಆದರೆ ಎನ್ಟಿಆರ್ ಕುಟುಂಬದ ಮೂರನೇ ತಲೆಮಾರು, ಮೆಗಾ ಫ್ಯಾಮಿಲಿಯ ಎರಡನೇ ತಲೆಮಾರು ಈ ದ್ವೇಷವನ್ನು ಅಳಿಸಿ ಸ್ನೇಹವನ್ನು ಬಿತ್ತಿದ್ದರು. ಅದು ದೊಡ್ಡ ಮರವಾದಂತೆ ಕಾಣುತ್ತಿದೆ. ಎರಡು ಕುಟುಂಬಗಳ ನಡುವೆ ಇದ್ದ ವೈರತ್ವ ಪೂರ್ಣ ನಿರ್ನಾಮವಾದಂತೆ ಕಾಣುತ್ತಿದೆ.
ಮೊದಲಿಗೆ ಜೂ.ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ಇಬ್ಬರೂ ಮುಂದೆ ಬಂದು ತಮ್ಮ ಪರಸ್ಪರ ಸ್ನೇಹವನ್ನು ಪ್ರಕಟಿಸಿದ್ದಲ್ಲದೆ, ಎರಡು ಕುಟುಂಬಗಳ ನಡುವಿನ ಸಿನಿಮಾ ವೈರತ್ವವನ್ನು ತೊಲಗಿಸುವ ಸಂದೇಶ ನೀಡಿದ್ದರು.
ನಟ ಚಿರಂಜೀವಿ ಸಹ ಎನ್ಟಿಆರ್ ಅವರನ್ನು ಅವರ ಕುಟುಂಬದ ಸದಸ್ಯರನ್ನು ಪ್ರಶಂಸಿಸಿ ಬಹಿರಂಗವಾಗಿ ಮಾತನಾಡಿದ್ದರು. ಇದೀಗ ಮೆಗಾ ಕುಟುಂಬದ ಮತ್ತೊಬ್ಬ ಸದಸ್ಯ ಪವನ್ ಕಲ್ಯಾಣ್, ಎನ್ಟಿಆರ್ ಕುಟುಂಬದ ಪ್ರಮುಖ ಸದಸ್ಯರೊಬ್ಬರನ್ನು ಭೇಟಿಯಾಗಿದ್ದಾರೆ.

ಬಾಲಕೃಷ್ಣ ಸೆಟ್ಗೆ ಪವನ್ ಕಲ್ಯಾಣ್ ಭೇಟಿ
ನಂದಮೂರಿ ತಾರಕರಾಮಾರಾವ್ ಪುತ್ರ ನಂದಮೂರಿ ಬಾಲಕೃಷ್ಣ ಅವರ ಸಿನಿಮಾ ಸೆಟ್ಗೆ ಇಂದು ನಟ, ರಾಜಕಾರಣಿ ಪವನ್ ಕಲ್ಯಾಣ್ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ್ದಾರೆ. ಇಬ್ಬರೂ ಸ್ಟಾರ್ ನಟರು ಪರಸ್ಪರ ಭೇಟಿಯಾಗಿರುವ ಈ ಚಿತ್ರ ಬಹಳ ವೈರಲ್ ಆಗಿದೆ. ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಸಹ ಇದ್ದಾರೆ. ಶ್ರುತಿ ಹಾಸನ್ ಈ ಮೊದಲು ಪವನ್ ಕಲ್ಯಾಣ್ ಜೊತೆ 'ಗಬ್ಬರ್ ಸಿಂಗ್' ಸಿನಿಮಾದಲ್ಲಿಯೂ ನಟಿಸಿದ್ದರು.

ವೈರಲ್ ಆಗಿದೆ ಚಿತ್ರ
ಬಾಲಕೃಷ್ಣ ತಮ್ಮ 'ವೀರಸಿಂಹಾರೆಡ್ಡಿ' ಸಿನಿಮಾಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದರು, ಅದೇ ಸೆಟ್ನಲ್ಲಿ ಪವನ್ ಕಲ್ಯಾಣ್ ತಮ್ಮ 'ಹರಿಹರ ವೀರ ಮಲ್ಲು' ಸಿನಿಮಾಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ಬಿಡುವು ಮಾಡಿಕೊಂಡು ಪವನ್ ಕಲ್ಯಾಣ್ ಅವರು ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದಾರೆ. ಈ ಚಿತ್ರ ಇದೀಗ ಭಾರಿ ವೈರಲ್ ಆಗಿದೆ. ಮೆಗಾ ಕುಟುಂಬದ ಅಭಿಮಾನಿಗಳು ಹಾಗೂ ನಂದಮೂರಿ ಕುಟುಂಬದ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಎರಡೂ ಸಿನಿಮಾ ಒಂದೇ ಸ್ಟುಡಿಯೋನಲ್ಲಿ ಚಿತ್ರೀಕರಣ
'ವೀರ ನರಸಿಂಹಯ್ಯ' ಸಿನಿಮಾಕ್ಕಾಗಿ ಬಾಲಕೃಷ್ಣ ಹಾಗೂ ಶ್ರುತಿ ಹಾಸನ್ ಹಾಡೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಪವನ್ ಕಲ್ಯಾಣ್ ಅವರು 'ಹರಿಹರ ವೀರ ಮಲ್ಲು' ಸಿನಿಮಾಕ್ಕಾಗಿ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಎರಡೂ ಸಿನಿಮಾಗಳ ಚಿತ್ರೀಕರಣ ಹೈದರಾಬಾದ್ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ನಡೆಯುತ್ತಿತ್ತು ಎನ್ನಲಾಗುತ್ತಿದೆ.

ಒಟ್ಟಿಗೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದ ಬಾಲಕೃಷ್ಣ
ಕೆಲವು ದಿನಗಳ ಹಿಂದಷ್ಟೆ ನಟ ಬಾಲಕೃಷ್ಣ, ತಮ್ಮ 'ಅನ್ಸ್ಟಾಪೆಬಲ್' ಟಾಕ್ ಶೋನಲ್ಲಿ ಹಿರಿಯ ನಿರ್ಮಾಪಕರೊಬ್ಬರಿಗೆ, ನನ್ನನ್ನು ಹಾಗೂ ಚಿರಂಜೀವಿಯನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಿದರೆ ಅದು ಪ್ಯಾನ್ ವರ್ಲ್ಡ್ ಸಿನಿಮಾ ಆಗುತ್ತದೆ ಎಂದಿದ್ದರು. ಅದರ ಬೆನ್ನಲ್ಲೆ ಇದೀಗ ಪವನ್ ಕಲ್ಯಾಣ್, ಬಾಲಕೃಷ್ಣರನ್ನು ಭೇಟಿಯಾಗಿರುವುದು ಆಶ್ಚರ್ಯ ತಂದಿದೆ.


Click it and Unblock the Notifications











