ಸೆಟ್ನಲ್ಲಿ ಕಣ್ಣೀರು ಹಾಕಿದ ಘಟನೆ ನೆನಪಿಸಿಕೊಂಡ ನಟಿ ಅದಿತಿ
ನಟಿ ಅದಿತಿ ರಾವ್ ಹೈದರಿ ಸುಂದರ ಹಾಗೂ ಪ್ರತಿಭಾವಂತ ನಟಿ. ಗ್ಲಾಮರಸ್, ಕ್ಲಾಸ್, ಸಂಪ್ರದಾಯಸ್ತ ಪಾತ್ರ ಯಾವುದೇ ರೀತಿಯ ಪಾತ್ರಕ್ಕೂ ಹೊಂದಿಕೊಳ್ಳುವ ಅದಿತಿ ಇದೀಗ 'ಮಹಾಸಮುದ್ರಂ' ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.
ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿರುವ 'ಮಹಾಸಮುದ್ರಂ' ಸಿನಿಮಾದಲ್ಲಿ ಅದಿತಿ ರಾವ್ ಹೈದಿರಿಯದ್ದು ಪ್ರಮುಖ ಪಾತ್ರ. ಆಕೆಯ ಪಾತ್ರದ ಹೆಸರು 'ಮಹಾ' ಎಂದಿದ್ದು, ಒಟ್ಟಾರೆ ಕತೆ ಆಕೆಯ ಸುತ್ತವೇ ಸುತ್ತುತ್ತದೆಯಂತೆ.
ಟ್ರೇಲರ್ ಹಾಗೂ ಪಾತ್ರವರ್ಗದ ಮೂಲಕ 'ಮಹಾಸಮುದ್ರಂ' ಸಿನಿಮಾ ಈಗಾಗಲೇ ಬಹುವಾಗಿ ಗಮನ ಸೆಳೆದಿದೆ. ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ಬಹುಜೋರಾಗಿ ನಡೆಯುತ್ತಿದೆ. ಸಿನಿಮಾದ ಬಗ್ಗೆ ಅದಿತಿ ವಿಶೇಷ ಕಾಳಜಿವಹಿಸಿದ್ದು, ಸಿನಿಮಾದ ಪ್ರಚಾರಾರ್ಥ ಸರಣಿ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಮಾತನಾಡುತ್ತಾ ಸೆಟ್ನಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ ನಟಿ ಅದಿತಿ. ತಾವು ಸೆಟ್ನಲ್ಲಿ ಕಣ್ಣೀರು ಹಾಕಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ನಟ ಸಿದ್ಧಾರ್ಥ್, ಶರ್ವಾನಂದ ಹಾಗೂ ನಿರ್ದೇಶಕ ಅಜಯ್ ಭೂಪತಿ ನೀಡಿದ ಸಹಕಾರವನ್ನೂ ನಟಿ ಅದಿತಿ ಹೈದರಿ ನೆನಪಿಸಿಕೊಂಡಿದ್ದಾರೆ.

ಸಂಭಾಷಣೆಗಳನ್ನು ಉರು ಹೊಡೆಯುವುದು ನನ್ನ ಅಭ್ಯಾಸ: ಅದಿತಿ
''ನಾನು ಹುಟ್ಟಿದ್ದ ಹೈದರಾಬಾದ್ನಲ್ಲಿಯೇ ಆದರು ಬೆಳೆದಿದ್ದೆಲ್ಲ ಉತ್ತರ ಭಾರತದಲ್ಲಿ. ನನಗೆ ತೆಲುಗು ಭಾಷೆ ಮಾತನಾಡಲು ಬರುವುದಿಲ್ಲ. ಆದರೆ ಚೆನ್ನಾಗಿ ಅರ್ಥ ಆಗುತ್ತದೆ. ಹಾಗಾಗಿ ನಾನು ಯಾವುದೇ ಸಿನಿಮಾ ಸೆಟ್ಗೆ ಹೋಗುವ ಮುನ್ನ ನನ್ನ ಡೈಲಾಗ್ಗಳನ್ನು ಚೆನ್ನಾಗಿ ಉರು ಹೊಡೆದುಕೊಂಡು ಹೋಗಿರುತ್ತೇನೆ. ಇದು ನನ್ನ ಅಭ್ಯಾಸ. 'ಮಹಾಸಮುದ್ರಂ' ಸಿನಿಮಾಕ್ಕೆ ಸಹ ನಾನು ಮೊದಲೇ ಸೀನ್ ಪೇಪರ್ಗಳನ್ನು ಪಡೆದುಕೊಂಡು ಸಂಭಾಷಣೆ ಉರು ಹೊಡೆದುಕೊಂಡು ಹೋಗಿದ್ದೆ'' ಎಂದರು ಅದಿತಿ ರಾವ್ ಹೈದರಿ.

ಕೊನೆ ಕ್ಷಣದಲ್ಲಿ ಸೀನ್ ಬದಲಿಸಿಬಿಟ್ಟರು: ಅದಿತಿ
''ನನ್ನ ಹಾಗೂ ಸಿದ್ಧಾರ್ಥ್ ನಡುವೆ ದೃಶ್ಯ ಚಿತ್ರೀಕರಣ ಆಗುವುದಿತ್ತು. ನಾನು ಚೆನ್ನಾಗಿ ತಯಾರಿ ಮಾಡಿಕೊಂಡು ಹೋಗಿದ್ದೆ. ಆದರೆ ನಿರ್ದೇಶಕ ಅಜಯ್ ಭೂಪತಿ ಕೊನೆಯ ಕ್ಷಣದಲ್ಲಿ ಸೀನ್ ಬದಲಾಯಿಸಿಬಿಟ್ಟರು. ಸಂಭಾಷಣೆ ಸಹ ಬದಲಾಯಿಸಿಬಿಟ್ಟರು. ಇದು ನನಗೆ ಆಘಾತ ತಂದಿತು. ಬಹಳ ದೊಡ್ಡ ಸೀನ್ ಬೇರೆ. ನಾನು ಅಳಲು ಆರಂಭಿಸಿಬಿಟ್ಟೆ. ಆಗ ಅಜಯ್ ಅವರೇ ನನಗೆ ಸಮಾಧಾನ ಮಾಡಿ ಹೊಸ ದೃಶ್ಯಕ್ಕೆ ತಯಾರಾಗಲು ತುಸು ಸಮಯ ನೀಡಿದರು'' ಎಂದು ನೆನಪಿಸಿಕೊಂಡಿದ್ದಾರೆ ಅದಿತಿ.

ನಿರ್ದೇಶಕ, ನಟರು ನನಗೆ ಬೆಂಬಲ ನೀಡಿದರು: ಅದಿತಿ
''ನಾನು ಸಂಭಾಷಣೆಗಳನ್ನು ಚೆನ್ನಾಗಿ ತಯಾರಿ ಮಾಡಿಕೊಳ್ಳುತ್ತೇನೆ. ಸೆಟ್ನಲ್ಲಿ ನನ್ನಿಂದ ಸಮಯ, ಹಣ ವ್ಯರ್ಥವಾಗುವುದು ನನಗೆ ಇಷ್ಟವಾಗುವುದಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಹೀಗೆ ಸೀನ್ ಬದಲಾವಣೆ ಆದರೆ ಗೊಂದಲವಾಗಿಬಿಡುತ್ತದೆ. ಆದರೆ ನಿರ್ದೇಶಕ ಅಜಯ್ ಹಾಗೂ ನಟ ಸಿದ್ಧಾರ್ಥ್ ನನಗೆ ಬೆಂಬಲ, ಸಹಕಾರ ನೀಡಿದರು. ಹಾಗಾಗಿ ಸಿನಿಮಾದ ಚಿತ್ರೀಕರಣ ಸುಗಮವಾಗಿ ಸಾಗಿತು. 'ಮಹಾಸಮುದ್ರಂ' ಸಿನಿಮಾದ ನಟರಾದ ಸಿದ್ಧಾರ್ಥ್ ಹಾಗೂ ಶರ್ವಾನಂದ ಸ್ಟಾರ್ಗಳ ರೀತಿ ಅಲ್ಲದೆ ಗೆಳೆಯರ ರೀತಿ ಸೆಟ್ನಲ್ಲಿ ವರ್ತಿಸಿದರು'' ಎಂದು ಸಹ ನಟರನ್ನು ಹೊಗಳಿದ್ದಾರೆ ಅದಿತಿ.

'ಮಹಾಸಮುದ್ರಂ' ಬಿಡುಗಡೆ ಯಾವಾಗ?
'ಮಹಾಸಮುದ್ರಂ' ಸಿನಿಮಾ ಗೆಳೆತನ, ಪ್ರೀತಿ ವಿಷಯಗಳನ್ನು ಹೇಳುತ್ತದೆ. ನನ್ನ ಪಾತ್ರದ ಹೆಸರು 'ಮಹಾ' ಎಂದಾಗಿದ್ದು, ಸಿನಿಮಾದ ಕತೆ ನನ್ನ ಪಾತ್ರದ ಸುತ್ತಲೇ ಸುತ್ತುತ್ತದೆ. ಬಹಳ ಕಷ್ಟಪಟ್ಟು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆಗಳಿವೆ'' ಎಂದಿದ್ದಾರೆ ಅದಿತಿ. ನಟಿ ಅದಿತಿ ನಟನೆಯ ತಮಿಳು ಸಿನಿಮಾ 'ಹೇಯ್ ಸಿನಿಮಿಕಾ' ಸಹ ಬಿಡುಗಡೆಗೆ ತಯಾರಾಗಿದೆ. 'ಹೇ ಸಿನಿಮಿಕಾ'ನಲ್ಲಿ ದುಲ್ಕರ್ ಸಲ್ಮಾನ್ ನಾಯಕ.


Click it and Unblock the Notifications











