ಚಿರಂಜೀವಿ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಗೈರು: ಅಭಿಮಾನಿಗಳಲ್ಲಿ ಅನುಮಾನ?
ಮೆಗಾಸ್ಟಾರ್ ಚಿರಂಜೀವಿ ನಿನ್ನೆ (ಆಗಸ್ಟ್ 22)ಕ್ಕೆ ತಮ್ಮ 66ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮನೆಯಲ್ಲಿಯೇ ಕುಟುಂಬ ಸದಸ್ಯರೊಟ್ಟಿಗೆ ಸೇರಿ ಸರಳವಾಗಿ ಹುಟ್ಟುಹಬ್ಬ ಸಂಬ್ರಮ ನಡೆದಿದೆ.
ಮೆಗಾ ಕುಟುಂಬದ ಹೀರೋಗಳೆಲ್ಲ ಸೇರಿ ಒಟ್ಟಿಗೆ ಚಿತ್ರವೊಂದನ್ನು ತೆಗೆಸಿಕೊಂಡಿದ್ದು ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಪವನ್ ಕಲ್ಯಾಣ್, ನಾಗಬಾಬು ಹಾಗೂ ಹೊಸ ತಲೆಮಾರಿನ ನಾಯಕರಾದ ರಾಮ್ ಚರಣ್ ತೇಜ, ವರುಣ್ ತೇಜ್ , ಸಾಯಿ ಧರ್ಮ ತೇಜ್, ವೈಷ್ಣವ್ ತೇಜ್ ಅವರುಗಳು ಇದ್ದಾರೆ.
ಮೆಗಾ ಕುಟುಂಬ ನಾಯಕ ನಟರುಗಳ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಆದರೆ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಇಲ್ಲದೇ ಇರುವುದು ಹಲವು ಮೆಗಾ ಕುಟುಂಬ ಅಭಿಮಾನಿಗಳ ಅನುಮಾನಕ್ಕೆ ಸಹ ಕಾರಣವಾಗಿದೆ.

ಡ್ಯಾಡಿ ಸಿನಿಮಾದ ಚಿತ್ರ ಹಂಚಿಕೊಂಡ ಅಲ್ಲು ಅರ್ಜುನ್
ಚಿರಂಜೀವಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ನಟ ಅಲ್ಲು ಅರ್ಜುನ್ 'ಡ್ಯಾಡಿ' ಸಿನಿಮಾದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಡ್ಯಾಡಿ' ಸಿನಿಮಾದಲ್ಲಿ ಡ್ಯಾನ್ಸರ್ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಆ ಸಿನಿಮಾದ ಪಾತ್ರದಿಂದಲೇ ಅಲ್ಲು ಅರ್ಜುನ್ಗೆ ತಮ್ಮ ಮೊದಲ ಸಿನಿಮಾ 'ಗಂಗೋತ್ರಿ'ಯ ಅವಕಾಶ ದೊರಕಿತ್ತು. ಚಿತ್ರ ಹಂಚಿಕೊಂಡಿರುವ ಅಲ್ಲು ಅರ್ಜುನ್, ''ನನ್ನ ಮತ್ತು ನಮ್ಮೆಲ್ಲರ ಏಕೈಕ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು'' ಎಂದಿದ್ದಾರೆ. ಆದರೆ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಮಾತ್ರ ಅವರು ಗೈರಾಗಿದ್ದಾರೆ.

ಅಲ್ಲು ಅರ್ಜುನ್ಗೆ ಚಿರಂಜೀವಿ ಮಾವ
ನಟ ಅಲ್ಲು ಅರ್ಜುನ್ ಸಹ ಮೆಗಾ ಕುಟುಂಬದ ನಾಯಕ ನಟರೇ. ಅಲ್ಲು ಅರ್ಜುನ್ರ ಅತ್ತೆ ಸುರೇಖಾ ಅವರನ್ನು ಮೆಗಾಸ್ಟಾರ್ ಚಿರಂಜೀವಿ ವಿವಾಹವಾಗಿರುವುದು. ಅಲ್ಲು ಅರ್ಜುನ್ರ ತಾತ ಅಲ್ಲು ರಾಮಲಿಂಗಯ್ಯ ತೆಲುಗು ಸಿನಿಮಾದ ದೊಡ್ಡ ಹಾಸ್ಯನಟರು. ಅವರ ಮಗಳೇ ಚಿರಂಜೀವಿ ಪತ್ನಿ ಸುರೇಖಾ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಾಪಕರಾಗಿದ್ದು ಚಿರಂಜೀವಿ ನಟಿಸಿರುವ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಬುದ್ಧಿವಂತ ನಟ ಅಲ್ಲು ಅರ್ಜುನ್
ಇದೀಗ ಅಲ್ಲು ಅರ್ಜುನ್ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನಿರ್ದೇಶನ ರಾಮ್ ಗೋಪಾಲ್ ವರ್ಮಾ, ''ಬುದ್ಧಿವಂತ ಅಲ್ಲು ಅರ್ಜುನ್ ಚಿರಂಜೀವಿ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡಿಲ್ಲ ಕಾರಣ, ಆತ ತನ್ನ ಸ್ವಂತ ಬಲದ ಮೇಲೆ ಸ್ಟಾರ್ ಆಗಿದ್ದಾನೆ. ರಾಮ್ ಚರಣ್ ತೇಜ, ವರುಣ್ ತೇಜ್, ಸಾಯಿ ಧರಮ್ ತೇಜ್ ಅವರುಗಳಂತೆ ಚಿರಂಜೀವಿಯ ಜನಪ್ರಿಯತೆಯನ್ನು ಬಳಸಿಕೊಂಡು ಸ್ಟಾರ್ ಆಗಿಲ್ಲ'' ಎಂದಿದ್ದಾರೆ.

ಉಳಿದಿರುವ ಮೆಗಾಸ್ಟಾರ್ ಅಲ್ಲು ಅರ್ಜುನ್
ಮತ್ತೊಂದು ಟ್ವೀಟ್ನಲ್ಲಿ, ''ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗನದ್ದು ನಿಜವಾದ ಮೆಗಾ ಯಶಸ್ಸು. ಮೆಗಾ ಕುಟುಂಬದ ಮಕ್ಕಳು, ಮೊಮ್ಮಕ್ಕಳು, ಚಿಕ್ಕಪ್ಪಂದಿರಗಳಿಗೆ ಹೋಲಿಸಿದರೆ ಅಲ್ಲು ಅರ್ಜುನ್ ನಿಜವಾದ ನಾಯಕ ನಟ'' ಎಂದಿದ್ದಾರೆ ವರ್ಮಾ. ಇನ್ನೊಂದು ಟ್ವೀಟ್ನಲ್ಲಿ, ''ನಿಜವಾದ ಮೆಗಾಸ್ಟಾರ್ ಚಿರಂಜೀವಿ ನಂತರ ಉಳಿದಿರುವ ಏಕೈಕ ಮೆಗಾಸ್ಟಾರ್ ಅಲ್ಲು ಅರ್ಜುನ್'' ಎಂದಿದ್ದಾರೆ.

ಚಿರಂಜೀವಿ ಮೇಲೆ ಅಲ್ಲು ಅರ್ಜುನ್ಗೆ ಅಭಿಮಾನ ಹೆಚ್ಚು
ನಿಜಕ್ಕೆ ಅಲ್ಲು ಅರ್ಜುನ್ಗೆ ಚಿರಂಜೀವಿ ಮೇಲೆ ವಿಪರೀತ ಅಭಿಮಾನ ಗೌರವಗಳು ಇವೆ. ಈ ಹಿಂದೆ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಮಧ್ಯೆ ವೈಮನಸ್ಯ ಬಂದಾಗ ಅಲ್ಲು ಅರ್ಜುನ್, ಚಿರಂಜೀವಿ ಪರವಾಗಿ ನಿಂತು ಪವನ್ ಕಲ್ಯಾಣ್ಗೆ ಮಾತಿನ ಚಾಟಿ ಬೀಸಿದ್ದರು. ಮೆಗಾ ಕುಟುಂಬದಲ್ಲಿ ರಾಮ್ ಚರಣ್ ತೇಜಗಿಂತಲೂ ಯಶಸ್ಸು ಗಳಿಸಿರುವ ಏಕೈಕ ನಟ ಅಲ್ಲು ಅರ್ಜುನ್. ಈ ನಟ ಪ್ರಸ್ತುತ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಇದ್ದ ಕಾರಣದಿಂದಲೇ ಚಿರಂಜೀವಿ ಹುಟ್ಟುಹಬ್ಬ ಸಂಭ್ರಮಕ್ಕೆ ಅಲ್ಲು ಗೈರಾಗಿದ್ದಾರೆ ಎನ್ನಲಾಗುತ್ತಿದೆ. 'ಪುಷ್ಪ' ಸಿನಿಮಾವು ಇದೇ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ, ಕನ್ನಡದ ಡಾಲಿ ಧನಂಜಯ್, ಕಿಶೋರ್ ವಿಲನ್ಗಳಾಗಿದ್ದಾರೆ. ಪ್ರಮುಖ ವಿಲನ್ ಪಾತ್ರದಲ್ಲಿ ಫಹಾದ್ ಫಾಸಿಲ್ ಸಹ ಇದ್ದಾರೆ.


Click it and Unblock the Notifications











