ಅನುಷ್ಕಾ ಶೆಟ್ಟಿಯ 'ಈ' ಮಾತನ್ನು ಕೇಳಿದ ಕನ್ನಡಿಗರಿಗೆ ಬೆಲ್ಲ ತಿಂದಷ್ಟೇ ಖುಷಿ ಆಗಿದೆ.!
Recommended Video
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿ ಅನುಷ್ಕಾ ಶೆಟ್ಟಿ ಹೆಚ್ಚು ಗುರುತಿಸಿಕೊಂಡಿರಬಹುದು, ಆದ್ರೆ ಆಕೆ ಮೂಲತಃ ಕರ್ನಾಟಕದವರು. ಮಂಗಳೂರಿನ ತುಳು ಕುಟುಂಬದಲ್ಲಿ ಹುಟ್ಟಿದ ನಟಿ ಅನುಷ್ಕಾ ಶೆಟ್ಟಿ. ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ.
ಪ್ರತಿಭಾವಂತೆ ಅನುಷ್ಕಾ ಶೆಟ್ಟಿಗೆ ಅವಕಾಶಗಳು ಕೈಬೀಸಿ ಕರೆದಿದ್ದು ತೆಲುಗು ಸಿನಿ ಅಂಗಳ. 'ಸೂಪರ್', 'ಮಹಾನಂದಿ', 'ಅಸ್ತ್ರಂ', 'ಡಾನ್' 'ಅರುಂಧತಿ', 'ವೇದಂ', 'ಡಮರುಗಂ', 'ಬಾಹುಬಲಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅನುಷ್ಕಾ ಶೆಟ್ಟಿ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿದ್ದಾರೆ.
ಇನ್ನೂ 'ಬಿಲ್ಲಾ', 'ಸಿಂಗಂ', 'ವಾನಂ', 'ದೈವ ತಿರುಮಗಳ್', 'ಸಗುನಿ', 'ಲಿಂಗಾ' ಚಿತ್ರಗಳ ಮೂಲಕ ತಮಿಳಿನಲ್ಲೂ ಗುರುತಿಸಿಕೊಂಡಿರುವ ನಟಿ ಅನುಷ್ಮಾ ಶೆಟ್ಟಿಗೆ ಕಾಲಿವುಡ್ ನಲ್ಲೂ ಹೆಚ್ಚು ಬೇಡಿಕೆ ಇದೆ.
ಇಂತಿಪ್ಪ ನಟಿ ಅನುಷ್ಮಾ ಶೆಟ್ಟಿ ಇಲ್ಲಿಯವರೆಗೂ ಸ್ಯಾಂಡಲ್ ವುಡ್ ಕಡೆಗೆ ಮುಖ ಮಾಡಿಲ್ಲ. ಆದರೂ, ತಾಯ್ನಾಡು ಕರ್ನಾಟಕ ಮತ್ತು ಕನ್ನಡ ಭಾಷೆಯನ್ನು ನಟಿ ಅನುಷ್ಮಾ ಶೆಟ್ಟಿ ಮರೆತಿಲ್ಲ. ಅದಕ್ಕೆ ಸಾಕ್ಷಿ 'ಆ' ಮಾತು. ಅನುಷ್ಕಾ ಶೆಟ್ಟಿಯ 'ಆ' ಮಾತನ್ನು ಕೇಳಿದ ಕನ್ನಡಿಗರಿಗೆ ಬೆಲ್ಲ ತಿಂದಷ್ಟೇ ಖುಷಿ ಆಗಿದೆ.!

ಅವಕಾಶ ಸಿಕ್ಕಾಗೆಲ್ಲಾ ಕನ್ನಡದಲ್ಲೇ ಮಾತನಾಡುವ ಅನುಷ್ಕಾ ಶೆಟ್ಟಿ.!
ತುಳುನಾಡ ಹುಡುಗಿ ಅನುಷ್ಕಾ ಶೆಟ್ಟಿ ಅವಕಾಶ ಸಿಕ್ಕಾಗೆಲ್ಲಾ ಕನ್ನಡದಲ್ಲೇ ಮಾತನಾಡುತ್ತಾರೆ. ಕನ್ನಡ ಚಿತ್ರರಂಗದ ಕುರಿತು ಅಥವಾ ಕರ್ನಾಟಕದ ಕುರಿತು ಯಾರಾದರೂ ಏನಾದರೂ ಕೇಳಿದರೆ, ಅನುಷ್ಕಾ ಶೆಟ್ಟಿ ಹೆಮ್ಮೆಯಿಂದ ಕನ್ನಡದಲ್ಲೇ ಉತ್ತರ ಕೊಡುತ್ತಾರೆ. ಹಲವು ಪ್ರೆಸ್ ಮೀಟ್ ಗಳಲ್ಲಿ, ಕಾರ್ಯಕ್ರಮಗಳಲ್ಲಿ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸನ್ನೂ ಅನುಷ್ಕಾ ಶೆಟ್ಟಿ ಗೆದ್ದಿದ್ದಾರೆ.

ಕನ್ನಡದಲ್ಲೇ ಶುಭಾಶಯ ತಿಳಿಸಿದ ನಟಿ ಅನುಷ್ಕಾ
ಮಕರ ಸಂಕ್ರಾಂತಿ ಹಬ್ಬದಂದು ನಟಿ ಅನುಷ್ಕಾ ಶೆಟ್ಟಿ ''ಮಕರ ಸಂಕ್ರಾಂತಿ ಶುಭಾಶಯಗಳು'' ಎಂದು ಕನ್ನಡದಲ್ಲಿ ತಮ್ಮ ಫೇಸ್ ಬುಕ್ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಕನ್ನಡ ಭಾಷೆಯಲ್ಲಿ ಶುಭಾಶಯ ಹೇಳಿರುವುದನ್ನು ನೋಡಿದ ಕನ್ನಡಿಗರಿಗೆ ಎಳ್ಳು-ಬೆಲ್ಲ ಸವಿಯುವುದಕ್ಕಿಂತ ಹೆಚ್ಚು ಸಂತಸ ನೀಡಿದೆ.

ಅನುಷ್ಕಾ ಶೆಟ್ಟಿ ಬಗ್ಗೆ ಮೆಚ್ಚುಗೆ.!
ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಅಂತ ಕರೆಯಿಸಿಕೊಳ್ಳುವ ಈ ಹಬ್ಬ ನಾನಾ ರಾಜ್ಯಗಳಲ್ಲಿ, ನಾನಾ ಹೆಸರುಗಳಿಂದ (ಪೊಂಗಲ್, ಲೋಹ್ರಿ, ಉತ್ತರಾಯನ್, ಬಿಹು) ಕರೆಯಲ್ಪಡುತ್ತದೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಅನುಷ್ಕಾ ಶೆಟ್ಟಿ, ತಮ್ಮ ಮೂಲವನ್ನು ಮರೆಯದೆ ಕನ್ನಡದಲ್ಲಿ ಮಕರ ಸಂಕ್ರಾಂತಿ ಶುಭಾಶಯಗಳನ್ನು ಹೇಳಿದ್ದು ಕನ್ನಡಗರಿಗೆ ಸಿಕ್ಕಾಪಟ್ಟೆ ಸಂತೋಷ ತಂದಿದೆ. ಪರಿಣಾಮ, ಕನ್ನಡದಲ್ಲೇ ಪ್ರತಿ ಶುಭಾಶಯಗಳನ್ನು ತಿಳಿಸಿ ಅನುಷ್ಕಾ ಶೆಟ್ಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಕನ್ನಡಿಗರು.

ಕನ್ನಡಿಗರ ಕಾಮೆಂಟ್ ಗಳಿವು
ನಟಿ ಅನುಷ್ಕಾ ಶೆಟ್ಟಿಯ ಕನ್ನಡ ಶುಭಾಶಯ ಪೋಸ್ಟ್ ಗೆ 'ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮ ನಮನ', 'ನಿಮ್ಮ ಕನ್ನಡಾಭಿಮಾನಕ್ಕೆ ನಮ್ಮ ಸಲಾಂ', 'ನೀವು ಕನ್ನಡದಲ್ಲಿ ಶುಭಾಶಯ ಹೇಳಿದ್ದು ಎಳ್ಳಿನ ಜೊತೆ ಇರುವ ಬೆಲ್ಲದ ಸಿಹಿಗಿಂತ ಜಾಸ್ತಿ ಆಯಿತು', 'ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದ' ಅಂತೆಲ್ಲಾ ನೂರಾರು ಕಾಮೆಂಟ್ ಗಳು ಲಭ್ಯವಾಗಿದೆ. ಜೊತೆಗೆ 'ದರ್ಶನ್ ಜೊತೆಗೆ ಸಿನಿಮಾ ಮಾಡಿ', 'ಕನ್ನಡ ಚಿತ್ರಗಳಲ್ಲೂ ನಟಿಸಿ' ಅಂತೆಲ್ಲಾ ಕನ್ನಡಿಗರು ಬೇಡಿಕೆ ಇಟ್ಟಿದ್ದಾರೆ.

ಅನುಷ್ಕಾ ಶೆಟ್ಟಿಯ ಮುಂದಿನ ಸಿನಿಮಾ ಯಾವುದು.?
ಇತ್ತೀಚೆಗಷ್ಟೇ 'ಭಾಗಮತಿ' ಮತ್ತು 'ಸೈರಾ ನರಸಿಂಹ ರೆಡ್ಡಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಅನುಷ್ಕಾ ಶೆಟ್ಟಿ ಇದೀಗ 'ನಿಶ್ಯಬ್ದಂ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಈ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











