ಅರ್ಜುನ್ ಸರ್ಜಾ ನಿರ್ಮಾಣದ ಸಿನಿಮಾದಿಂದ ಹೊರನಡೆದ ಯುವನಟ, ಸರ್ಜಾ ವಾಗ್ದಾಳಿ
ಹಿರಿಯ ನಟ ಅರ್ಜುನ್ ಸರ್ಜಾ, ತೆಲುಗಿನ ಯುವ ನಟನೊಬ್ಬನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆ ನಟನಿಗೆ ವೃತ್ತಿಪರತೆ ಇಲ್ಲವೆಂದು, ತಮಗೆ ದೊಡ್ಡ ಮೋಸ ಮಾಡಿದ್ದಾನೆಂದು ಹೇಳಿದ್ದಾರೆ.
ತೆಲುಗಿನಲ್ಲಿ ಅರ್ಜುನ್ ಸರ್ಜಾ ಹೊಸ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ. ತಮ್ಮ ಮಗಳೇ ನಾಯಕಿಯಾಗಿರುವ ಆ ಸಿನಿಮಾಕ್ಕೆ ತಾವೇ ಬಂಡವಾಳ ಹೂಡಿ ನಿರ್ದೇಶನ ಸಹ ಮಾಡುತ್ತಿದ್ದಾರೆ.
ಸಿನಿಮಾಕ್ಕೆ ವಿಶ್ವಕ್ ಸೇನ್ ಎಂಬಾತನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಆತ ಸರಿಯಾಗಿ ಚಿತ್ರೀಕರಣಕ್ಕೆ ಬರುತ್ತಿಲ್ಲವೆಂದು, ಅನವಶ್ಯಕ ಬೇಡಿಕೆಗಳನ್ನು ಇಡುತ್ತಿದ್ದಾರೆಂದು ಹೇಳಿ ವಿಶ್ವಕ್ ಅನ್ನು ಸಿನಿಮಾದಿಂದ ಹೊರಗಿಡುತ್ತಿರುವುದಾಗಿ ಘೋಷಿಸಿದ್ದಾರೆ. ಪತ್ರಿಕಾ ಗೋಷ್ಠಿ ನಡೆಸಿ, ಅರ್ಜುನ್ ಸರ್ಜಾ, ವಿಶ್ವಕ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
ತೆಲುಗಿನಲ್ಲಿ ಒಳ್ಳೆಯ ಸಿನಿಮಾ ಮಾಡಲು ನಿಶ್ಚಯಿಸಿದ್ದೆ, ಮಗಳನ್ನು ತೆಲುಗು ಚಿತ್ರರಂಗಕ್ಕೆ ಲಾಂಚ್ ಮಾಡುವ ಯೋಚನೆಯಲ್ಲಿ ಸಿನಿಮಾ ಆರಂಭಿಸಿದ್ದೆ. ಸಿನಿಮಾಕ್ಕೆ ವಿಶ್ವಕ್ ಅನ್ನು ನಾಯಕ ನಟನಾಗಿ ಆರಿಸಿದ್ದೆ. ಪವನ್ ಕಲ್ಯಾಣ್ ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾಕ್ಕೆ ಶುಭಾರಂಭ ಮಾಡಿದ್ದರು. ವಿಶ್ವಕ್ಗೆ ಸಹ ಈ ಸಿನಿಮಾದ ಕತೆ ಬಹಳ ಇಷ್ಟವಾಗಿತ್ತು. ಡೇಟ್ಸ್ ಸಹ ನೀಡಿದ್ದ. ಅದರಂತೆ ನಾನೂ ಸಹ ಬಹಳ ಬ್ಯುಸಿಯಾಗಿರುವ ಜಗಪತಿ ಬಾಬು ಸೇರಿದಂತೆ ಇನ್ನೂ ಕೆಲವು ಜನಪ್ರಿಯ ನಟರ ಡೇಟ್ಸ್ಗಳನ್ನು ತೆಗೆದುಕೊಂಡಿದ್ದೆ. ಆದರೆ ವಿಶ್ವಕ್ ಸೇನ್ ತನ್ನ ಮ್ಯಾನೇಜರ್ ಜೊತೆ ಬಂದು ಇಡೀ ಶೆಡ್ಯೂಲ್ ಅನ್ನು ಕ್ಯಾನ್ಸಲ್ ಮಾಡಿರೆಂದು ಹೇಳಿದ'' ಎಂದಿದ್ದಾರೆ.

ಇಡೀ ಶೆಡ್ಯೂಲ್ಗೆ ಗೈರಾದರು: ಅರ್ಜುನ್ ಆರೋಪ
''ಈಗಷ್ಟೆ ವಿದೇಶದಿಂದ ಬಂದಿದ್ದೇನೆ, ನನಗೆ ಸುಸ್ತಾಗಿದೆ. ಅಲ್ಲದೆ, ನಾನು ಇನ್ನೂ ಒಳ್ಳೆಯ ಫಿಸಿಕ್ ಮಾಡಿಕೊಂಡು ಬರುತ್ತೇನೆ. ನನಗೆ ಇನ್ನಷ್ಟು ಸಮಯ ಕೊಡಿ' ಎಂದ, ಸರಿ ಒಳ್ಳೆಯ ಫಿಸಿಕ್ ನನಗೂ ಬೇಕಾಗುತ್ತು, ಸಿನಿಮಾ ಚೆನ್ನಾಗಿ ಬರುತ್ತದೆಂಬ ಕಾರಣಕ್ಕೆ ನಾನೂ ಸಹ ವಿಶ್ವಕ್ ಮಾತಿಗೆ ಒಪ್ಪಿಕೊಂಡು ಇಡೀ ಶೆಡ್ಯೂಲ್ ಕ್ಯಾನ್ಸಲ್ ಮಾಡಿದೆ. ಜಗಪತಿ ಬಾಬು ಕೊಟ್ಟಿರುವ ಡೇಟ್ಸ್ ಹಾಳಾಗಬಾರದೆಂದು ಅವರಿಗಾಗಿ ಎರಡು ದಿನ ಮಾತ್ರವೇ ಚಿತ್ರೀಕರಣ ಮಾಡಿದೆ'' ಎಂದಿದ್ದಾರೆ ಅರ್ಜುನ್ ಸರ್ಜಾ.

ಪ್ರತಿ ಹಂತದಲ್ಲಿಯೂ ಸಮಸ್ಯೆ ಮಾಡಿದ್ದಾರೆ: ಅರ್ಜುನ್
''ಆ ನಂತರ ನವೆಂಬರ್ ನಿಂದ ಡಿಸೆಂಬರ್ ವರೆಗೂ ಡೇಟ್ಸ್ ನೀಡಿದ್ದರು. ಸರಿ ಎಂದೆ. ಆ ನಂತರ ಮತ್ತೆ ಕರೆ ಮಾಡಿ ಮಧ್ಯದಲ್ಲಿ ನನಗೆ ಒಂದು ವಾರ ಗ್ಯಾಪ್ ಬೇಕು ಎಂದರು. ಸರಿ ಎಂದು ಅದನ್ನೂ ಕೊಟ್ಟೆ. ಆ ನಂತರ ನವೆಂಬರ್ 03 ರಿಂದ ಚಿತ್ರೀಕರಣ ಮಾಡಬೇಕು. ಅದಕ್ಕೆ ಮುಂಚೆ ಮತ್ತೊಮ್ಮೆ ಕತೆ ಡಿಸ್ಕಶನ್, ಡೈಲಾಗ್, ಡ್ರೆಸ್ ಎಲ್ಲವೂ ಆಗಿತ್ತು. ಶೂಟಿಂಗ್ಗೆ ಹಿಂದಿನ ದಿನ ಸಹ ಸಲೂನ್ನಿಂದ ಚಿತ್ರ ಕಳಿಸಿ, ನಿಮ್ಮ ಚಿತ್ರಕ್ಕೆ ರೆಡಿಯಾಗುತ್ತಿದ್ದೀನಿ ಎಂದಿದ್ದ. ನಾನೂ ಸಹ ಖುಷಿಯಾಗಿ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದೆ'' ಎಂದು ವಿವರಿಸಿದ್ದಾರೆ ಅರ್ಜುನ್.

ನಟನ ಮನೆಗೆ ಹೋದ ಬಳಿಕ ಬದಲಾವಣೆ: ಅರ್ಜುನ್
''ಚಿತ್ರೀಕರಣ ಮಾಡುವ ಹಿಂದಿನ ದಿನ ಒಬ್ಬ ನಟರ ಮನೆಗೆ ವಿಶ್ವಕ್ ಹೋಗಿದ್ದರು. ಬಳಿಕ ಚಿತ್ರೀಕರಣ ನಡೆಯಬೇಕಾದ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಸಂದೇಶ ಕಳಿಸಿ, ಚಿತ್ರೀಕರಣ ರದ್ದು ಮಾಡಿಕೊಳ್ಳಿ, ನನಗೆ ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ ಬೇಕು'' ಎಂದರು. ನನಗೆ ಅದು ತೀರ ಆಶ್ಚರ್ಯ ಹಾಗೂ ಶಾಕ್ ಎನಿಸಿತು. ಇಷ್ಟು ದಿನ ಎಲ್ಲವೂ ಓಕೆ ಎಂದಿದ್ದ ಈತ ಚಿತ್ರೀಕರಣದ ದಿನ ಕ್ಯಾನ್ಸಲ್ ಮಾಡಿಕೊಳ್ಳಲು ಕಾರಣವೇನು? ಇದು ನಿರ್ಮಾಪಕ, ನಿರ್ದೇಶಕನಾದ ನನಗೆ ಮಾಡಿದ ಅಪಮಾನ, ಸೆಟ್ನಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಮಾಡಿದ ಅಪಮಾನ'' ಎಂದಿದ್ದಾರೆ ಸರ್ಜಾ.

ಸಿನಿಮಾ ಚಿತ್ರೀಕರಣ ರದ್ದು ಮಾಡಿದ ಸರ್ಜಾ
''ನಾನು ಇಡೀ ಸಿನಿಮಾವನ್ನು ರದ್ದು ಮಾಡುತ್ತಿದ್ದೇನೆ. ಈ ಘಟನೆಯಿಂದ ನನಗೆ ಬೇಸರವಾಗಿದೆ. ನಾನು ಒಳ್ಳೆಯ ಶೇಪ್ನಲ್ಲಿ ಬರುತ್ತೇನೆ ಎಂದು ಟೈಮ್ ತೆಗೆದುಕೊಂಡು ಏನೂ ಇಲ್ಲದೆ ಸುಮ್ಮನೆ ಬಂದರು. ಬಳಿಕ ಕೇರಳದ ಶೆಡ್ಯೂಲ್ಗೆ ಗೈರಾದರು. ಈಗ ಚಿತ್ರೀಕರಣ ಪ್ರಾರಂಭವಾಗಬೇಕಿದ್ದ ದಿನ, ನನಗೆ ಅನುಮಾನ ಇದೆ ಚಿತ್ರೀಕರಣ ರದ್ದು ಮಾಡಿ ಎನ್ನುತ್ತಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ವೃತ್ತಿಪರ ನಟರನ್ನು ನೋಡಿದ್ದೇನೆ. ಆದರೆ ವಿಶ್ವಕ್ನಷ್ಟು ಅವೃತ್ತಿಪರರನ್ನು ನಾನು ನೋಡಿಲ್ಲ'' ಎಂದಿದ್ದಾರೆ ಅರ್ಜುನ್ ಸರ್ಜಾ.


Click it and Unblock the Notifications











