ಎನ್ಟಿಆರ್ ಕುಟುಂಬಕ್ಕೆ ಆಗಸ್ಟ್ ಅಪಶಕುನ? ದುರಂತಗಳು ಒಂದೆರಡಲ್ಲ!
ಖ್ಯಾತ ನಟ, ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ಎನ್ಟಿಆರ್ ಕುಟುಂಬದಲ್ಲಿ ಮತ್ತೆ ವಿಷಾದ ಮನೆ ಮಾಡಿದೆ. ನಿನ್ನೆಯಷ್ಟೆ(ಆಗಸ್ಟ್. 01) ಎನ್ಟಿಆರ್ ಕಿರಿಯ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದರು. ಆಗಸ್ಟ್ ತಿಂಗಳಿನಲ್ಲೇ ದುರಂತ ಸಂಭವಿಸಿರುವುದರಿಂದ ಎನ್ಟಿಆರ್ ಕುಟುಂಬಕ್ಕೆ ಈ ತಿಂಗಳು ಅಪಶಕುನನಾ ಅನ್ನುವ ಚರ್ಚೆ ಶುರುವಾಗಿದೆ.
ಉಮಾ ಮಹೇಶ್ವರಿ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಉಮಾ ಮಹೇಶ್ವರಿ ನಿಧನದಿಂದ ಎನ್ಟಿಆರ್ ಕುಟುಂಬ ಹಾಗೂ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಎನ್ಟಿಆರ್ಗೆ 8 ಜನ ಗಂಡು ಮಕ್ಕಳು. ನಾಲ್ವರು ಹೆಣ್ಣು ಮಕ್ಕಳು ಸೇರಿ ಒಟ್ಟು 12 ಜನ ಮಕ್ಕಳು. ಮೊದಲ ಮಗ ರಾಮಕೃಷ್ಣ ಚಿಕ್ಕಂದಿನಲ್ಲೇ ಅನಾರೋಗ್ಯದಿಂದ ನಿಧನರಾಗಿದ್ದರು. ನಂತರ 7ನೇ ಮಗನಿಗೆ ರಾಮಕೃಷ್ಣ ಎಂದು ಹೆಸರಿಟ್ಟಿದ್ದರು. ಇದೀಗ ಕಿರಿಯ ಪುತ್ರಿ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾರೆ.
ಉಮಾ ಮಹೇಶ್ವರಿ ನಿಧನದ ನಂತರ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಚಾರ ಸಖತ್ ವೈರಲ್ ಆಗಿದೆ. ಅದೇನು ಅಂದರೆ ಎನ್ಟಿಆರ್ ಕುಟುಂಬಕ್ಕೆ ಆಗಸ್ಟ್ ತಿಂಗಳು ಆಗಿ ಬರುವುದಿಲ್ಲ ಅನ್ನೋದು. ಯಾಕಂದ್ರೆ ಈ ತಿಂಗಳು ಎನ್ಟಿಆರ್ಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಅದೇ ರೀತಿ ಕುಟುಂಬದ ವಿಚಾರದಲ್ಲೂ ಅಪಶಕುನ ಅಂತೆ. ಆಗಸ್ಟ್ ಒಂದರಂದು ಉಮಾ ಮಹೇಶ್ವರಿ ನಿಧನದ ಹಿನ್ನಲೆಯಲ್ಲಿ ಈ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಆಗಸ್ಟ್ನಲ್ಲೇ ಹರಿಕೃಷ್ಣ ಕಾರು ಅಪಘಾತ
2018 ಆಗಸ್ಟ್ 29ರಂದು ಎನ್ಟಿಆರ್ ಪುತ್ರ, ನಟ ಹರಿಕೃಷ್ಣ ಕಾರು ಅಪಘಾತದಲ್ಲಿ ಅಸುನೀಗಿದ್ದರು. ತೆಲಂಗಾಣದ ನೆಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಕಾರು ಮಗುಚಿ ಬಿದ್ದಿತ್ತು. ಅತಿ ವೇಗ ಹಾಗೂ ಸೀಟ್ ಬೆಲ್ಡ್ ಧರಿಸದೇ ಇದ್ದಿದ್ದೇ ಅವರು ಮೃತಪಡಲು ಕಾರಣ ಅನ್ನಲಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ರಾಜಕೀಯ ಹಿನ್ನೆಡೆ
1984ರಲ್ಲಿ ಎನ್ಟಿಆರ್ ನೇತೃತ್ವದ ಸರ್ಕಾರದ ವಿರುದ್ಧ ಅದೇ ಪಕ್ಷದ ನಾದೆಂಡ್ಲ ಭಾಸ್ಕರ್ ತಿರುಗಿ ಬಿದ್ದಿದ್ದರು. ಎನ್ಟಿಆರ್ನ ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಸಿಎಂ ಆಗಲು ಯತ್ನಿಸಿದ್ದರು. ಹರಸಾಹಸಪಟ್ಟು ಸಿಎಂ ಎನ್ಟಿಆರ್ ಸಿಎಂ ಸ್ಥಾನ ಉಳಿಸಿಕೊಂಡಿದ್ದರು. ನಂತರ 1995ರಲ್ಲಿ ಅಳಿಯ ಚಂದ್ರಬಾಬು ನಾಯ್ಡು ಎನ್ಟಿಆರ್ ವಿರುದ್ಧ ತಿರುಗಿಬಿದ್ದಿದ್ದರು. ಅಲ್ಲಿಂದ ಮುಂದೆ ತೆಲುಗರ ಪಾಲಿನ ಅನ್ನಗಾರು ಸಿಎಂ ಆಗಲೇಯಿಲ್ಲ.

ತೆಲುಗು ದೇಶಂ ಪಕ್ಷಕ್ಕೂ ಅಂದರೆ ಭಯ!
ಎನ್ಟಿಆರ್ ಎರಡು ಬಾರಿ ಆಗಸ್ಟ್ ತಿಂಗಳಿನಲ್ಲೇ ಸಿಎಂ ಪದವಿ ಕಳೆದುಕೊಳ್ಳುವಂತಾಗಿತ್ತು. ಅವರು ಸ್ಥಾಪಿಸಿದ ತೆಲುಗು ದೇಶಂ ಪಕ್ಷಕ್ಕೂ ಆಗಸ್ಟ್ ತಿಂಗಳು ಬಂದರೆ ಆತಂಕ ಶುರುವಾಗುತ್ತದೆ. ಯಾಕಂದ್ರೆ ಇದೇ ತಿಂಗಳು ಆ ಪಕ್ಷದಲ್ಲಿ ಸಾಕಷ್ಟು ಏಳುಬೀಳು ಸಂಭವಿಸಿದೆ.

ಅಪಘಾತಗಳಿಂದಲೂ ಸರಣಿ ಸಾವು!
ಇನ್ನು ಎನ್ಟಿಆರ್ ಕುಟುಂಬದಲ್ಲಿ ರಸ್ತೆ ಅಪಘಾತಗಳಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಎನ್ಟಿಆರ್ ತಂದೆ ಲಕ್ಷ್ಮಯ್ಯ ಚೌಧರಿ, ಪುತ್ರ ಹರಿಕೃಷ್ಣ, ಮೊಮ್ಮಗ ಜಾನಕಿ ರಾಮ್ ಕೂಡ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದು ವಿಪರ್ಯಾಸ. ಇನ್ನು ನಟ ಜ್ಯೂನಿಯರ್ ಎನ್ಟಿಆರ್ ಕೂಡ ಕೆಲ ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು.


Click it and Unblock the Notifications











