ಆಲಿಯಾ-ರಣ್ಬೀರ್ ಸಿನಿಮಾ ಪ್ರಚಾರಕ್ಕೆ ತೆಲುಗಿನ ಸೂಪರ್ ಸ್ಟಾರ್ ನಟ!
ದಕ್ಷಿಣ ಭಾರತ ಸಿನಿಮಾ ರಂಗವನ್ನು ಕೀಳಾಗಿ ಅಥವಾ ಎರಡನೇ ದರ್ಜೆ ಚಿತ್ರರಂಗದಂತೆ ಕಂಡಿದ್ದ ಬಾಲಿವುಡ್ಡಿಗರಿಗೆ ಈಗ ಸತ್ಯ ಅರಿವಾದಂತಿದೆ. ಇದೀಗ ಬಾಲಿವುಡ್ಡಿಗರು ತಮ್ಮ ಸಿನಿಮಾಗಳನ್ನು ಹಿಟ್ ಮಾಡಿಕೊಳ್ಳಲು ದಕ್ಷಿಣ ಭಾರತ ಚಿತ್ರರಂಗ ಸೆಲೆಬ್ರಿಟಿಗಳ ಮೊರೆ ಹೋಗುತ್ತಿದ್ದಾರೆ.
ಹಿಂದಿ ಸಿನಿಮಾಗಳು ಸಾಲು-ಸಾಲಾಗಿ ಸೋಲು ಕಾಣುತ್ತಿವೆ. ಅದರಲ್ಲಿಯೂ ಪಕ್ಕಾ ಪೈಸಾ ವಸೂಲ್ ಸ್ಟಾರ್ ನಟರ ಸಿನಿಮಾಗಳೇ ಸೋಲುತ್ತಿವೆ. ಕೆಲವು ನಟರಂತೂ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಸಹ ಹಿಂದೇಟು ಹಾಕುತ್ತಿದ್ದಾರೆ.
ಹಿಂದಿ ಭಾಷಿಕ ಪ್ರದೇಶದಲ್ಲಿ ತಮ್ಮ ಸಿನಿಮಾ ಸೋಲುತ್ತಿರುವ ಕಾರಣ ದಕ್ಷಿಣ ಭಾರತದ ಮಾರುಕಟ್ಟೆ ಮೇಲೆ ಬಾಲಿವುಡ್ಡಿಗರು ಕಣ್ಣು ಹಾಕಿದ್ದು, ದಕ್ಷಿಣ ಭಾರತದಲ್ಲಿ ತಮ್ಮ ಸಿನಿಮಾಗಳ ಪ್ರಚಾರಕ್ಕೆ ಇಲ್ಲಿನ ಸ್ಟಾರ್ ನಟರೊಟ್ಟಿಗೆ ಕೈ ಜೋಡಿಸುತ್ತಿದ್ದಾರೆ. ಇದೀಗ ರಣ್ಬೀರ್ ಕಪೂರ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಆಂಧ್ರ-ತೆಲಂಗಾಣ ಪ್ರೇಕ್ಷಕರು ಟಾರ್ಗೆಟ್
ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಸೆಪ್ಟೆಂಬರ್ 9 ಕ್ಕೆ ತೆರೆಗೆ ಬರಲಿದ್ದು, ಅತಿಮಾನುಷ ಶಕ್ತಿಯ ಕತೆಯನ್ನು ಸಿನಿಮಾ ಒಳಗೊಂಡಿದೆ. ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದು, ವಿವಿಧ ನಗರಗಳಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ನಡೆಸಲಾಗುತ್ತಿದೆ. ಸಿನಿಮಾದಲ್ಲಿ ನಟ ನಾಗಾರ್ಜುನ ಸಹ ನಟಿಸುತ್ತಿರುವ ಕಾರಣ ಆಂಧ್ರ ಹಾಗೂ ತೆಲಂಗಾಣ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭರ್ಜರಿ ಪ್ರೀ ರಿಲೀಸ್ ಇವೆಂಟ್ ಪ್ಲ್ಯಾನ್ ಮಾಡಲಾಗಿದೆ.

ಹೈದರಾಬಾದ್ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್
ಹೈದರಾಬಾದ್ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಈ ಇವೆಂಟ್ನಲ್ಲಿ ನಾಗಾರ್ಜುನ ಸೇರಿದಂತೆ ಇತರೆ ಚಿತ್ರತಂಡದ ಜೊತೆಗೆ ಅತಿಥಿಯಾಗಿ ಜೂ ಎನ್ಟಿಆರ್ ಪಾಲ್ಗೊಳ್ಳಲಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮವು ಸೆಪ್ಟೆಂಬರ್ 02ರಂದು ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜೂ ಎನ್ಟಿಆರ್ ಮಾತ್ರವೇ ಅಲ್ಲದೆ ಎಸ್ಎಸ್ ರಾಜಮೌಳಿ ಸಹ ಭಾಗಿಯಾಗಲಿದ್ದಾರೆ. ವಿಶೇಷವೆಂದರೆ ಇಷ್ಟು ಅದ್ಧೂರಿ ಕಾರ್ಯಕ್ರಮವನ್ನು ಮುಂಬೈನಲ್ಲೂ ಚಿತ್ರತಂಡ ಮಾಡುತ್ತಿಲ್ಲ.

ಮೆಗಾಸ್ಟಾರ್ ಚಿರಂಜೀವಿ ಧ್ವನಿ
ಎಸ್ಎಸ್ ರಾಜಮೌಳಿ, 'ಬ್ರಹ್ಮಾಸ್ತ್ರ' ಸಿನಿಮಾದೊಟ್ಟಿಗೆ ಅಸೋಸಿಯೆಟ್ ಆಗಿದ್ದು, ಚಿತ್ರತಂಡ ಹೋದಲ್ಲೆಲ್ಲ ತೆರಳಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. 'ಬ್ರಹ್ಮಾಸ್ತ್ರ' ಹಿಂದಿ ಸಿನಿಮಾ ಆಗಿದ್ದರೂ ಸಹ ಹಲವು ತೆಲುಗು ನಟರನ್ನು ಸಿನಿಮಾಕ್ಕೆ ಬಳಸಿಕೊಳ್ಳಲಾಗಿದೆ. ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟ ನಾಗಾರ್ಜುನ ನಟಿಸಿದ್ದಾರೆ. ನಟ ಚಿರಂಜೀವಿ ಈ ಸಿನಿಮಾಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಎಸ್ಎಸ್ ರಾಜಮೌಳಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದೀಗ ನಟ ಜೂ ಎನ್ಟಿಆರ್ ಸಹ ಸಿನಿಮಾದ ಪ್ರಚಾರಕ್ಕೆ ಕೈ ಜೋಡಿಸಿದ್ದಾರೆ.

ಭಾರಿ ಬಜೆಟ್ನ ಸಿನಿಮಾ
'ಬ್ರಹ್ಮಾಸ್ತ್ರ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 9 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಮೌನಿ ರಾಯ್, ಸೌರವ್ ಗುಜ್ರಾರ್, ದಿವ್ಯೇಂದು, ಡಿಂಪಲ್ ಕಪಾಡಿಯಾ ಇನ್ನು ಹಲವರು ನಟಿಸಿದ್ದಾರೆ. ಸಿನಿಮಾದ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ, ಆರು ಮಂದಿ ಸೇರಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











