'ಆಚಾರ್ಯ' ಸಿನಿಮಾ ಸೋಲಿನ ಬಗ್ಗೆ ಚಿರಂಜೀವಿ ಮಾತು
ಎಂಥಹಾ ಸ್ಟಾರ್ ನಟರೇ ಆದರೂ ಸಿನಿಮಾದಲ್ಲಿ ಕಂಟೆಂಟ್ ಇಲ್ಲದಿದ್ದರೆ ಸೋಲು ಗ್ಯಾರೆಂಟಿ. ಇದಕ್ಕಾ ತಾಜಾ ಉದಾಹರಣೆಯೆಂದರೆ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ.
'ಆಚಾರ್ಯ' ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ, ಪೂಜಾ ಹೆಗ್ಡೆ, ಸೋನು ಸೂದ್ ಅಂಥಹಾ ಸ್ಟಾರ್ ನಟರುಗಳಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮುಗಿಚುಕೊಂಡಿತು. ಚಿರಂಜೀವಿ ವೃತ್ತಿ ಜೀವನದಲ್ಲಿಯೇ ಹೀನಾಯ ಸೋಲು 'ಆಚಾರ್ಯ' ಮೂಲಕ ದಾಖಲಾಯ್ತು.
ವಿತರಕರು ತಮಗೆ ನಷ್ಟವಾದ ಹಣ ತುಂಬಿಕೊಡುವಂತೆ ಚಿರಂಜೀವಿಯನ್ನು ದುಂಬಾಲು ಬಿದ್ದರು. ಚಿರಂಜೀವಿ ಸೇರಿದಂತೆ ನಿರ್ದೇಶಕ ಕೊರಟಾಲ ಶಿವ ಇನ್ನಿತರರು ಸೇರಿ ಹಣ ವಾಪಸ್ಸು ನೀಡಿದರು. ಆದರೆ ಚಿರಂಜೀವಿ ಈ ವರೆಗೆ 'ಆಚಾರ್ಯ' ಸೋಲಿನ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದರೆ ಇದೀಗ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಚಿರಂಜೀವಿ ಈ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿರಂಜೀವಿ
ತೆಲುಗು ಸಿನಿಮಾ 'ಫರ್ಸ್ ಡೇ ಫರ್ಸ್ ಶೋ' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಚಿರಂಜೀವಿ, ತೆಲುಗು ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ''ಕಂಟೆಂಟ್ ಇದ್ದರಷ್ಟೆ ಸಿನಿಮಾಗಳು ಬದುಕಲು ಸಾಧ್ಯ. ಕಳೆದ ಒಂದೆರಡು ತಿಂಗಳಲ್ಲಿ ಮೂರು ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು ಬಂದಿವೆ. 'ಬಿಂಬಸಾರ', 'ಸೀತಾ ರಾಮಮ್' ಇದೀಗ 'ಕಾರ್ತಿಕೇಯ 2' ಸಿನಿಮಾಗಳು ಕಂಟೆಂಟ್ ಹೊಂದಿದ್ದವು ಹಾಗಾಗಿ ಆ ಸಿನಿಮಾಗಳು ಗೆದ್ದಿವೆ'' ಎಂದಿದ್ದಾರೆ.

''ಕಂಟೆಂಟ್ ಸರಿ ಇಲ್ಲದ್ದಕ್ಕೆ ನನ್ನ ಸಿನಿಮಾ ಸಹ ಸೋತಿತು''
ಎಷ್ಟು ದೊಡ್ಡ ನಟರೇ ಆದರು ಕಂಟೆಂಟ್ ಇಲ್ಲದೇ ಹೋದರೆ ಸಿನಿಮಾಗಳು ಜನರನ್ನು ಆಕರ್ಷಿಸುವುದಿಲ್ಲ. ಒಬ್ಬ ವ್ಯಕ್ತಿ ತನ್ನ 2:30 ಗಂಟೆ ಚಿತ್ರಮಂದಿರದಲ್ಲಿ ಕೂರಬೇಕೆಂದರೆ ಅದಕ್ಕೆ ನಟ-ನಟಿಯರಷ್ಟೆ ಸಾಕಾಗುವುದಿಲ್ಲ ಕಂಟೆಂಟ್ ಬೇಕು. ನನಗೆ ಸಹ ಕಂಟೆಂಟ್ ಹೊಂದಿರುವ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ನನ್ನ ಸಿನಿಮಾನೇ ನೋಡಿ ಹೇಗೆ ಮುಗಿಚಿ ಬಿತ್ತು. ನನ್ನ ಸಿನಿಮಾಗಳು ಹಾಗೆ ಸೋಲುವುದು ನನಗೆ ಇಷ್ಟವಿಲ್ಲ. ನನಗೂ ಒಳ್ಳೆಯ ಸಿನಿಮಾಗಳನ್ನು, ಕಂಟೆಂಟ್ ಹೊಂದಿರುವ ಸಿನಿಮಾಗಳನ್ನು ಕೊಡಬೇಕೆಂಬ ಆಸೆಯಿದೆ'' ಎಂದಿದ್ದಾರೆ.

ನನ್ನ ಸಿನಿಮಾ ಧಾರುಣವಾಗಿ ಸೋತಿತು: ಚಿರಂಜೀವಿ
''ಸಿನಿಮಾಗಳು ಬದಲಾಗಿವೆ, ಸಿನಿಮಾ ಫಿಲಾಸಫಿ ಬದಲಾಗಿದೆ. ಸಿನಿಮಾ ಪ್ರೇಕ್ಷಕರು ಬದಲಾಗಿದ್ದಾರೆ ಎಂದುಕೊಂಡರೆ ಅದು ಸರಿಯಲ್ಲ. ಸಿನಿಮಾದ ಕಂಟೆಂಟ್ ಸರಿಯಿದ್ದರೆ ಖಂಡಿತ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಕಂಟೆಂಟ್ ಸರಿಯಿಲ್ಲದಿದ್ದರೆ ಎರಡೇ ದಿನಕ್ಕೆ ಸಿನಿಮಾ ಹೊರಗೆ ಬೀಳುತ್ತದೆ. ನನ್ನ ಸಿನಿಮಾ ಸಹ ಹಾಗೆಯೇ ಆಯಿತು. ನಾನು ಸಹ ಅದರಿಂದ ಬಾಧಿತನಾಗಿದ್ದೇನೆ. ಕಂಟೆಂಟ್ ಸರಿ ಇದ್ದರೆ ಜನ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ'' ಎಂದಿದ್ದಾರೆ ಚಿರಂಜೀವಿ.

ಅರ್ಧದಷ್ಟು ಸಹ ಹಣ ವಾಪಸ್ಸಾಗಲಿಲ್ಲ
ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಇದೇ ವರ್ಷ ಏಪ್ರಿಲ್ 29 ರಂದು ಬಿಡುಗಡೆ ಆಯಿತು. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ, ಪೂಜಾ ಹೆಗ್ಡೆ, ಸೋನು ಸೂದ್ ನಟಿಸಿದ್ದರು. ಸಿನಿಮಾಕ್ಕೆ 140 ಕೋಟಿ ಬಂಡವಾಳ ಹೂಡಲಾಗಿತ್ತು. ಏಷ್ಯಾದಲ್ಲಿ ಅತಿ ದೊಡ್ಡ ಸೆಟ್ ಒಂದನ್ನು ಈ ಸಿನಿಮಾಕ್ಕಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ಸಿನಿಮಾಕ್ಕೆ ಹಾಕಿದ ಬಂಡವಾಳದ ಅರ್ಧದಷ್ಟು ಸಹ ವಾಪಸ್ಸಾಗಲಿಲ್ಲ. ಟಿವಿಯಲ್ಲಿ ಸಹ ಉತ್ತಮ ಟಿಆರ್ಪಿ ಪಡೆದುಕೊಳ್ಳುವಲ್ಲಿ ಸಿನಿಮಾ ಸೋತಿತು.


Click it and Unblock the Notifications











