ತೆಲುಗಿನ ಖ್ಯಾತ ಹಾಸ್ಯ ನಟ ಶಿವಾಜಿರಾಜಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ತೆಲುಗಿನ ಖ್ಯಾತ ಹಾಸ್ಯ ನಟ ಶಿವಾಜಿರಾಜಗೆ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನಲೆ ತಕ್ಷಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Recommended Video
58 ವರ್ಷದ ನಟ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಬಣ್ಣಹಚ್ಚುವ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ. ಸಿನಿಮಾ ಜೊತೆಗೆ ಶಿವಾಜಿ ರಾಜ ಕಿರುತೆರೆಯಲ್ಲಿಯೂ ಖ್ಯಾತಿಗಳಿಸಿದ್ದಾರೆ. ಸದ್ಯ ಶಿವಾಜಿರಾಜ ಆರೋಗ್ಯ ಸ್ಥಿರವಾಗಿದ್ದು, ವೀಕ್ಷಣೆಯಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಶಿವಾಜಿ ರಾಜ ಸ್ನೇಹಿತನ ಪ್ರತಿಕ್ರಿಯೆ
ಈ ಬಗ್ಗೆ ಮಾಹಿತಿ ನೀಡಿರುವ ಅವರ ಸ್ನೇಹಿತ ಸುರೇಶ್ "ರಕ್ತದೊತ್ತಡ ಕಡಿಮೆಯಾದ ಕಾರಣ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.

400ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯ
ಶಿವಾಜಿ ರಾಜ ಸುಮಾರು 400ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2001ರಲ್ಲಿ ರಿಲೀಸ್ ಆಗಿದ್ದ ಮಹೇಶ್ ಬಾಬು ಮತ್ತು ಸೊನಾಲಿ ಬೇಂದ್ರೆ ಅಭಿನಯದ ಮುರಾರಿ ಸಿನಿಮಾದ ಪಾತ್ರ ಶಿವಾಜಿರಾಜ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಆನಂತರ ಶ್ರೀಮಂತಡು ಸಿನಿಮಾ ಮೂಲಕ ಮತ್ತೆ ಮಹೇಶ್ ಬಾಬು ಜೊತೆ ಅಭಿನಯಿಸಿದ್ದಾರೆ.

ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಕೆ
ತೆಲುಗಿನ ಕಲ್ಲು, ಅಹೋ ಬ್ರಹ್ಮ ಓಹೋ ಶಿಷ್ಯ, ದೇವುಡು, ಕಾಳಿಸುಂದರ್ ರಾ, ಮನಸಿಷ್ಠ ರಾ, ನಿನ್ನು ಚುಡಲಾನಿ, ಶಂಕರ್ ದಾದಾ ಎಂಬಿಬಿಎಸ್, ನಕ್ಷತ್ರಂ ಸೇರಿದಂತೆ ಮುಂತಾದ ಪ್ರಸಿದ್ಧ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಶಿವಾಜಿ ರಾಜ ಕೊನೆಯದಾಗಿ ಬ್ರೋಚೆವರೇವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಿರುತೆರೆಯಲ್ಲಿಯೂ ಖ್ಯಾತಿಗಳಿಸಿದ್ದಾರೆ
ಸಿನಿಮಾರಂಗ ಮಾತ್ರವಲ್ಲದೆ ಕಿರುತೆರೆಯಲ್ಲಿಯೂ ಖ್ಯಾತಿಗಳಿಸಿದ್ದಾರೆ. ಟಿವಿಯ ಖ್ಯಾತ ಹಾಸ್ಯ ಧಾರಾವಾಹಿಗಳಲ್ಲಿ ಶಿವಾಜಿರಾಜ ಬಣ್ಣಹಚ್ಚಿದ್ದಾರೆ. ಅಮೃತಂ ಸೀರಿಯಲ್ ಮೂಲಕ ಪ್ರೇಕ್ಷಕರ ಮನೆಮಾತಾಗಿದ್ದರು. ಅಮೃತ ವಿಲಾಸ್ ಎನ್ನುವ ರೆಸ್ಟೋರೆಂಟ್ ಹೊಂದಿರುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಪಾಪಮ್ ಪದ್ಮನಾಭಂ ಎನ್ನುವ ಕಾಮಿಡಿ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ.


Click it and Unblock the Notifications











