ಸೋನು ಸೂದ್ ಮಾನವೀಯತೆ ಕೆಲಸ ಗೌರವಿಸಿದ 'ಆಚಾರ್ಯ' ತಂಡ
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಜನರ ನೋವಿಗೆ ನಟ ಸೋನು ಸೂದ್ ಸ್ಪಂದಿಸಿದ್ದರು. ಊರಿಗೆ ಹೋಗಲು ದುಡ್ಡಿಲ್ಲದೇ ಒದ್ದಾಡುತ್ತಿದ್ದವರಿಗೆ ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ, ಮಕ್ಕಳಿಗೆ ಲ್ಯಾಪ್ಟ್ಯಾಮ್, ಸ್ಮಾರ್ಟ್ಫೋನ್, ರೋಗಿಗಳ ಚಿಕಿತ್ಸೆಗೆ ಹಣ ಹೀಗೆ ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿದ ರಿಯಲ್ ಹೀರೋ.
ಸೋನು ಸೂದ್ ಅವರ ಮಾನವೀಯತೆ ಕೆಲಸಕ್ಕೆ ಇಡೀ ದೇಶ ಸಲಾಂ ಹೊಡೆದಿದೆ. ಲಾಕ್ಡೌನ್ ಬಳಿಕ ಸೋನು ಸೂದ್ ನಟಿಸುತ್ತಿರುವ ಚಿತ್ರತಂಡಗಳ ಸಹ ಸೆಟ್ಗೆ ಸೋನು ಬಂದಾಗ ಗೌರವಿಸಿರುವ ಉದಾಹರಣೆಗಳು ವರದಿಯಾಗಿದ್ದವು.
ಇದೀಗ, ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸೆಟ್ಗೆ ಸೋನು ಸೂದ್ ಆಗಮಿಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಕೊರಟಲಾ ಶಿವ, ಹಿರಿಯ ನಟ ತನಿಕೆಲ್ಲ ಭರಣಿ ಸೇರಿದಂತೆ ಚಿತ್ರತಂಡ ಸೋನು ಸೂದ್ ಅವರನ್ನು ಸ್ವಾಗತಿಸಿ ಗೌರವಿಸಿದ್ದಾರೆ.

ಸೋನು ಸೂದ್ ಅವರ ಈ ಸಮಾಜ ಸೇವೆಗೆ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಲಿವುಡ್ ನಟನ ಮಾನವೀಯತೆ ಗುಣ ಗೌರವಿಸಿದ ವಿಶ್ವಸಂಸ್ಥೆ, ಅಭಿವೃದ್ದಿ ಕಾರ್ಯಕ್ರಮದ (ಯುಎನ್ಡಿಪಿ) ಪ್ರತಿಷ್ಠಿತ ಎಸ್ಡಿಜಿ (ವಿಶೇಷ ಮಾನವೀಯ ಕ್ರಿಯಾ) ಪ್ರಶಸ್ತಿ ನೀಡಿ ಶ್ಲಾಘಿಸಿತ್ತು.
ಸದ್ಯದಲ್ಲೇ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೋನು ಸೂದ್ ಅನ್ನು ಪಂಜಾಬ್ ಚುನಾವಣಾ ರಾಯಭಾರಿಯನ್ನಾಗಿ ಚುನಾವಣಾ ಆಯೋಗವು ಘೋಷಿಸಿದೆ.
ಇನ್ನು ಆಚಾರ್ಯ ಚಿತ್ರತಂಡದ ಬಗ್ಗೆ ಹೇಳುವುದಾರೆ, ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಸಿನಿಮಾ. ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದು, ವಿಶೇಷ ಪಾತ್ರದಲ್ಲಿ ರಾಮ್ ಚರಣ್ ತೇಜ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











