ಠಾಣೆ ಮೆಟ್ಟಿಲೇರಿದ 'ಲೈಗರ್' ವಿವಾದ: ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಪುರಿ ಜಗನ್ನಾಥ್ ದೂರು!
'ಲೈಗರ್' ಸಿನಿಮಾ ವಿವಾದ ದಿನದಿಂದ ದಿನಕ್ಕೆ ನಾನಾ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ನಿರ್ದೇಶಕ ಪುರಿ ಜಗನ್ನಾಥ್ ಸಿನಿಮಾ ವಿತರಕರ ವಿರುದ್ಧ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ, ನಿರ್ಮಾಪಕಿ ಚಾರ್ಮಿ ಕುಡಿದ ಮತ್ತಲ್ಲಿ ಏನೇನೋ ಮಾತಾಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ.
ಆಗಸ್ಟ್ 25ಕ್ಕೆ ತೆರೆಗಪ್ಪಳಿಸಿದ್ದ 'ಲೈಗರ್' ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಪುರಿ ಜಗನ್ನಾಥ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಆಗಿ ಮಿಂಚಿದ್ದರು. ಪ್ಯಾನ್ ಇಂಡಿಯಾ ಅಂತೆಲ್ಲಾ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ನಿರ್ಮಾಪಕರಿಗೆ ಭಾರೀ ನಷ್ಟ ತಂದೊಡ್ಡಿತ್ತು. ವಿತರಕರು ಕೂಡ ನಷ್ಟಭರಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಚಿತ್ರದ ನಿರ್ಮಾಣದಲ್ಲೂ ಪಾಲುದಾರರಾಗಿದ್ದ ಪುರಿ ಜಗನ್ನಾಥ್ ಒಂದಷ್ಟು ಮೊತ್ತವನ್ನು ಹಿಂತಿರುಗಿಸುವುದಾಗಿ ಮಾತು ಕೊಟ್ಟಿದ್ದರು.
ಪಾರ್ಟಿಯಲ್ಲಿ ಚಾರ್ಮಿ ಕುಡಿದ ಮತ್ತಿನಲ್ಲೇ ನಮಗೆ ನಷ್ಟವಾಗಿಲ್ಲ, ನಾವು ಸೇಫ್ ಆಗಿದ್ದೀವಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದರಂತೆ. ಇದು ಹೇಗೋ ವಿತರಕರ ಕಿವಿಗೆ ಬಿದ್ದು, ಪುರಿ ಜಗನ್ನಾಥ್ ಮನೆ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಪುರಿ ತಿರುಗೇಟು ನೀಡಿದ್ದ ಆಡಿಯೋ ವೈರಲ್ ಆಗಿತ್ತು. ಸಾಲದಕ್ಕೆ ಈಗ ನಿರ್ದೇಶಕರು ಠಾಣೆ ಮೆಟ್ಟಿಲೇರಿದ್ದಾರೆ.

ವಿತರಕರ ವಿರುದ್ಧ ಪುರಿ ದೂರು
ನಿನ್ನೆ(ಅಕ್ಟೋಬರ್ 26) ಪುರಿ ಜಗನ್ನಾಥ್ ಜೂಬ್ಲಿಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಿತರಕರಾದ ವರಂಗಲ್ ಶ್ರೀನು, ಫೈನಾನ್ಸಿಯರ್ ಶೋಭನ್ ವಿರುದ್ಧ ದೂರು ನೀಡಿದ್ದಾರೆ. ಇವರಿಂದ ನನಗೂ ನನ್ನ ಕುಟುಂಬಕ್ಕೂ ಜೀವಹಾನಿಯ ಭಯವಿದೆ. ನಮ್ಮ ಕುಟುಂಬದ ಮೇಲೆ ದಾಳಿ ಮಾಡುವಂತೆ ಇವರು ಇತರರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಇಲ್ಲದೇ ಇರುವಾಗಿ ನನ್ನ ಕುಟುಂಬವನ್ನು ಶಾರೀರಿಕವಾಗಿ, ಮಾನಸಿಕವಾಗಿ ಹಿಂಸಿಸಿ ಅಕ್ರಮವಾಗಿ ಹಣ ಪಡೆಯಲು ಮುಂದಾಗಿದ್ದಾರೆ. ವಾಟ್ಸಾಪ್ ಮೂಲಕ ನನ್ನ ವಿರುದ್ಧ ವಿತರಕರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ. ನಮಗೆ ರಕ್ಷಣೆ ನೀಡಿ ಎಂದು ಕೋರಿದ್ದಾರೆ. ಇದರಿಂದ 'ಲೈಗರ್' ಸಿನಿಮಾ ವಿವಾದ ಮತ್ತಷ್ಟು ತಾರಕಕ್ಕೇರಿದೆ. ಆದರೆ ಈ ಬಗ್ಗೆ ನಟ ವಿಜಯ್ ದೇವರಕೊಂಡ ಈವರೆಗೆ ಮಾತನಾಡಿಲ್ಲ.

ವೈರಲ್ ಆಗಿತ್ತು ಪುರಿ ಆಡಿಯೋ ಕ್ಲಿಪ್
'ಲೈಗರ್' ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರು, ಪ್ರದರ್ಶಕರು ಪುರಿ ಜಗನ್ನಾಥ್ ಮನೆ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದರು. ಇದಕ್ಕೆ ಸಂಬಂಧಿಸಿದ ವಾಟ್ಸಾಪ್ ಮೆಸೇಜ್ ಸ್ಕ್ರೀನ್ಶಾಟ್ ವೈರಲ್ ಆಗಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಪುರಿ ಜಗನ್ನಾಥ್, "ಏನು ಬ್ಲಾಕ್ ಮೇಲ್ ಮಾಡುತ್ತಿದ್ದೀರಾ ? ನಮ್ಮ ಒಪ್ಪಂದದ ಪ್ರಕಾರ ನಾನು ಹೇಳಿದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸುತ್ತೇನೆ. ಇಷ್ಟು ಹೇಳಿದ ಮೇಲೂ ಮತ್ತೆ ಹೀಗೆ ಮಾಡುತ್ತಿದ್ದರೆ ಕೊಡಲು ಮನಸ್ಸಾಗುತ್ತಿಲ್ಲ. ಆದರೆ ನಾವೇಕೆ ಕೊಡುತ್ತಿದ್ದೇವೆ? ಗೌರವಕ್ಕಾಗಿ ನೀಡುತ್ತಿದ್ದೇವೆ. ನನ್ನ ಮರ್ಯಾದೆ ತೆಗೆಯಬೇಕು ಎಂದುಕೊಂಡರೆ ನಯಾಪೈಸೆ ಕೊಡುವುದಿಲ್ಲ." ಎಂದಿದ್ದರು.

ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದ 'ಲೈಗರ್'
ಆಗಸ್ಟ್ 25ಕ್ಕೆ ತೆರೆಗಪ್ಪಳಿಸಿದ್ದ 'ಲೈಗರ್' ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿತ್ತು. 120 ಕೋಟಿಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದ್ದ ಚಿತ್ರಕ್ಕೆ ಫಸ್ಟ್ ಶೋನಿಂದಲೇ ನೆಗೆಟಿವ್ ಟಾಕ್ ಸಿಕ್ಕಿತ್ತು. ಭಾರೀ ನಂಬಿಕೆಯಿಂ ಸಿನಿಮಾ ಕೊಂಡುಕೊಂಡಿದ್ದ ವಿತರಕರು, ಪ್ರದರ್ಶನಕರು ನಷ್ಟ ಅನುಭವಿಸಿದ್ದರು. ಧರ್ಮ್ ಪ್ರೊಡಕ್ಷನ್ಸ್ ಜೊತೆ ಸೇರಿ ಪುರಿ ಜಗನ್ನಾತ್ ಹಾಗೂ ಚಾರ್ಮಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಮ್ಯಾಕೃಷ್ಣ, ಮೈಕ್ ಟೈಸನ್ ಚಿತ್ರದಲ್ಲಿ ನಟಿಸಿದ್ದರು.

ಫೈನಾನ್ಸಿಯರ್ ಶೋಭನ್ ತಿರುಗೇಟು
ಇನ್ನು ಪುರಿ ಜಗನ್ನಾಥ್ ತಮ್ಮ ವಿರುದ್ಧ ನೀಡಿರುವ ದೂರಿನ ಬಗ್ಗೆ ಫೈನಾನ್ಸಿಯರ್ ಶೋಭನ್ ಪ್ರತಿಕ್ರಿಯಿಸಿದ್ದಾರೆ. "ಲೈಗರ್' ಸಿನಿಮಾ ರಿಲೀಸ್ ಆದ ಮರು ದಿನದಿಂದಲೂ ಪುರಿ ನನ್ನ ಫೋನ್ ತೆಗಿತ್ತಿಲ್ಲ. ಸಂಪರ್ಕಕ್ಕೆ ಸಿಗುತ್ತಿಲ್ಲ. ಅಂಥಾದ್ರಲ್ಲಿ ಬೆದರಿಕೆ ಹಾಕುವ ಮಾತು ಎಲ್ಲಿಂದ ಬಂತು. ಈ ಹಿಂದೆ ನಾನು ಸಾಕಷ್ಟು ಅವರಿಗೆ ಸಹಾಯ ಮಾಡಿದ್ದೀನಿ. ಅದು ಅವರಿಗೂ ಗೊತ್ತು. ಅದರೆ ಯಾಕೆ ಈ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ" ಎಂದಿದ್ದಾರೆ.

ನಷ್ಟ ಹಿಂತಿರುಗಿಸಿದ್ದ ಸ್ಟಾರ್ಸ್
ಸಿನಿಮಾ ಎನ್ನುವುದೇ ಗ್ಯಾಂಬ್ಲಿಂಗ್. ಧೈರ್ಯ ಮಾಡಿ ಹಣ ಹಾಕಬೇಕು. ಸಿನಿಮಾ ಮಾಡಬೇಕು. ವಿತರಕರು, ಪ್ರದರ್ಶಕರು ಕೂಡ ನಂಬಿಕೆಯಿಂದ ಸಿನಿಮಾ ರೈಟ್ಸ್ ಖರೀದಿಸುತ್ತಾರೆ. ಒಂದು ವೇಳೆ ನಷ್ಟ ಆದರೆ ಯಾರಿಗೂ ಹಣ ಹಿಂತಿರುಗಿಸುವ ಅವಶ್ಯಕತೆ ಇಲ್ಲ. ಯಾಕೆಂದರೆ ಲಾಭ ಬಂದರೂ ಯಾರು ನಿರ್ಮಾಪಕರಿಗೆ ವಾಪಸ್ ಕೊಡುವುದಿಲ್ಲ. ಆದರೂ ಕೆಲವೊಮ್ಮೆ ಸ್ಟಾರ್ ನಟರು ಹಾಗೂ ನಿರ್ಮಾಪಕರು ತಮ್ಮ ಸಿನಿಮಾದಿಂದ ನಷ್ಟ ಅನುಭವಿಸಿದವರಿಗೆ ಸಾಧ್ಯವಾದಷ್ಟು ಭರಿಸಿಕೊಟ್ಟಿದ್ದಾರೆ.


Click it and Unblock the Notifications











