'ಕೆಜಿಎಫ್' ರೀತಿಯ ಸಿನಿಮಾ ಮಾಡಬೇಡಿ ಎಂದ ಅಭಿಮಾನಿಗೆ ನಿರ್ದೇಶಕ ಖಡಕ್ ಉತ್ತರ
ಕನ್ನಡದ 'ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಗಳು ವಿವಿಧ ಚಿತ್ರರಂಗದ ಸಿನಿಮಾ ಕರ್ಮಿಗಳಿಗೆ ಮಾದರಿಯೊಂದನ್ನು ಹಾಕಿಕೊಟ್ಟಿವೆ.
ಕತೆಯೊಂದನ್ನು ತಂತ್ರಜ್ಞಾನದ ನೆರವಿನೊಂದಿಗೆ ಹೇಗೆ ಆಕರ್ಷಕವಾಗಿ ನಿರೂಪಣೆ ಮಾಡಬೇಕು, ಪ್ರೇಕ್ಷಕರ ಎದುರು ಇಡಬೇಕು ಎಂಬುದನ್ನು ತೋರಿಸಿಕೊಟ್ಟಿವೆ. ತಂತ್ರಜ್ಞಾನಕ್ಕಿರುವ ಶಕ್ತಿಯನ್ನು, ಸಿನಿಮಾಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾದ ರೀತಿಯನ್ನು ಹೇಳಿಕೊಟ್ಟಿವೆ.
ಇದೀಗ ಹಲವು ಸಿನಿಮಾ ಕರ್ಮಿಗಳು ತಾವೂ ಸಹ 'ಕೆಜಿಎಫ್ 2' ಮಾದರಿಯ ಸಿನಿಮಾ ಮಾಡಬೇಕೆಂದು ಹಪಹಪಿಸುತ್ತಿದ್ದಾರೆ. ಈ ನಡುವೆ ಅಭಿಮಾನಿಯೊಬ್ಬ ಜನಪ್ರಿಯ ನಿರ್ದೇಶಕರಿಗೆ 'ಕೆಜಿಎಫ್' ಅನ್ನು ಉದಾಹರಣೆ ನೀಡಿ ಆ ರೀತಿಯ ಸಿನಿಮಾ ಮಾಡಬೇಡಿ ಎಂದಿದ್ದಾನೆ. ಆತನಿಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ ನಿರ್ದೇಶಕ.

ಹರೀಶ್ ಶಂಕರ್ಗೆ ಅಭಿಮಾನಿಯ ಟ್ವೀಟ್
ತೆಲುಗಿನ ಜನಪ್ರಿಯ ನಿರ್ದೇಶಕ ಹರಿರ್ಶ ಶಂಕರ್ಗೆ ಟ್ವೀಟ್ ಮಾಡಿರುವ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ. ''ಪವನ್ ಕಲ್ಯಾಣ್ಗೆ ಸಿನಿಮಾ ಮಾಡುವ ಅವಕಾಶ ದೊರೆತರೆ 'ಗಬ್ಬರ್ ಸಿಂಗ್' ರೀತಿ ಮಾಮೂಲಿ ಮಸಾಲಾ ಸಿನಿಮಾ ಮಾಡಬೇಡಿ. ಲೋಕಲ್ ಕತೆ ಹೊಂದಿದ್ದರೂ ಇಂಟರ್ನ್ಯಾಷನಲ್ ಕ್ವಾಲಿಟಿ ಉಳ್ಳ ಸಿನಿಮಾ ಮಾಡಿ. ಒಳ್ಳೆ ಸಿನಿಮಾಟೊಗ್ರಫಿ, ಒಳ್ಳೆಯ ಹಿನ್ನೆಲೆ ಸಂಗೀತ ಬಳಸಿ ಆದರೆ 'ಕೆಜಿಎಫ್' ರೀತಿ ಫಾಸ್ಟ್ ಕಟ್ ಮಾಡಬೇಡಿ. ಅನ್ನ್ಯಾಚುರಲ್ ಫೈಟ್ಸ್ ಬದಲಿಗೆ ರಿಯಲಿಸ್ಟಿಕ್ ಫೈಟ್ ದೃಶ್ಯಗಳನ್ನು ಬಳಸಿ. ಹೊಡೆದರೆ ವಿಲನ್ಗಳು ಗಾಳಿಯಲ್ಲಿ ತೇಲುವ ರೀತಿಯ ಫೈಟ್ಗಳು ಬೇಡ ಎಂದು ಮನವಿ ಮಾಡಿದ್ದಾರೆ.

ಸಹಮತ ಹೊಂದಿಲ್ಲ ಎಂದ ನಿರ್ದೇಶಕ
ಆದರೆ ಅಭಿಮಾನಿಗೆ ಪ್ರತಿಕ್ರಿಯೆ ನೀಡಿರುವ ಹರೀಶ್ ಶಂಕರ್, 'ನಿಮಗೆ ಬೇಸರ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು ನಿಮ್ಮೊಂದಿಗೆ ಸಹಮತ ಹೊಂದಿಲ್ಲ'' ಎಂದಿದ್ದಾರೆ. ಪವನ್ ಕಲ್ಯಾಣ್ರ ಸೂಪರ್ ಹಿಟ್ ಸಿನಿಮಾ 'ಗಬ್ಬರ್ ಸಿಂಗ್' ಅನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದರು. ಅದನ್ನು ಮಾಮೂಲಿ ಮಸಾಲಾ ಸಿನಿಮಾ ಎಂದಿರುವುದು ಬಹುಷಃ ಹರೀಶ್ ಶಂಕರ್ಗೆ ಬೇಸರ ಮೂಡಿಸಿರಬಹುದಾದ್ದರಿಂದ ಹರೀಶ್ ಹೀಗೆ ಪ್ರತಿಕ್ರಿಯೆ ನೀಡಿರುವ ಸಾಧ್ಯತೆ ಇದೆ.

ತಾಂತ್ರಿಕವಾಗಿ ರಿಚ್ ಆಗಿದ್ದ 'ಕೆಜಿಎಫ್ 2'
'ಕೆಜಿಎಫ್ 2' ಸಿನಿಮಾದಲ್ಲಿ ನಿರ್ದೇಶಕ ಪ್ರಶಾಂತ್ ನಿಲ್ ಕೆಲವು ಅತಿ ವೇಗದ ಜಂಪ್ ಕಟ್ಸ್ಗಳನ್ನು ಮಾಡಿದ್ದರು ಇದು ಹಲವರಿಗೆ ಇಷ್ಟವಾಗಿತ್ತು. ಕೆಲವರಿಗೆ ಇಷ್ಟವಾಗಿರಲಿಲ್ಲ. ಕಾರ್ ಚೇಸ್ ಸೀನ್ನಲ್ಲಿನ ಜಂಪ್ ಕಟ್ಸ್ ಪ್ರೇಕ್ಷಕರಿಗೆ ಗೊಂದಲವನ್ನೂ ಉಂಟು ಮಾಡಿತ್ತು. ಆದರೆ ಇನ್ನುಳಿದಂತೆ ಸಿನಿಮಾದ ಎಡಿಟಿಂಗ್ ಹಾಗೂ ಸಿನಿಮಾಟೊಗ್ರಫಿ ಅತ್ಯುತ್ತಮ ಗುಣಮಟ್ಟದ್ದಾಗಿತ್ತು. ತಂತ್ರಜ್ಞಾನವನ್ನು ಅದ್ಭುತವಾಗಿ ದುಡಿಸಿಕೊಂಡಿದ್ದರು ಪ್ರಶಾಂತ್ ನೀಲ್.

ಪವನ್ ಕಲ್ಯಾಣ್ ಸಿನಿಮಾ ನಿರ್ದೇಶಿಸಲಿರುವ ಹರೀಶ್
ಇದೀಗ ಪವನ್ ಕಲ್ಯಾಣ್ ಸಿನಿಮಾವನ್ನು ನಿರ್ದೇಶನ ಮಾಡುವ ಮತ್ತೊಂದು ಅವಕಾಶ ಹರೀಶ್ ಶಂಕರ್ಗೆ ದೊರತಿದೆ. ಹಾಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಹರೀಶ್ ಶಂಕರ್ ಮುಂದೆ ತಮ್ಮ ಬೇಡಿಕೆಗಳನ್ನು ಇಡುತ್ತಿದ್ದಾರೆ. ನಮ್ಮ ಮೆಚ್ಚಿನ ನಟನ ಸಿನಿಮಾವನ್ನು ಹೀಗೆ ಮಾಡಿ, ಹಾಗೆ ಮಾಡಿ ಎಂದು ಮನವಿಗಳನ್ನು ಇಟ್ಟಿದ್ದಾರೆ. ಪವನ್ ಕಲ್ಯಾಣ್ ಪ್ರಸ್ತುತ 'ಹರಿ ಹರ ವೀರ ಮಲ್ಲು' ಹೆಸರಿನ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ 'ಭವತೀಯಡು ಭಗತ್ಸಿಂಗ್' ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











