'ಈ' ಸಿನಿಮಾ ಮಾಡಿ ಎಂದು ರಾಜಮೌಳಿಗೆ ಅಭಿಮಾನಿಗಳ ಒತ್ತಾಯ
ಎಸ್.ಎಸ್ ರಾಜಮೌಳಿ, ಬಾಹುಬಲಿ ಸಿನಿಮಾ ಮೂಲಕ ಜಗತ್ತನ್ನೇ ಸೆಳೆದ ನಿರ್ದೇಶಕ. ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿ ಇರುವ ರಾಜಮೌಳಿಗೆ ಅಭಿಮಾನಿಗಳು ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಹೌದು, ರಾಮಾಯಣ ಸಿನಿಮಾ ಮಾಡಿ ಎಂದು ಅಭಿಮಾನಿಗಳು ರಾಜಮೌಳಿಗೆ ಒತ್ತಾಯ ಮಾಡುತ್ತಿದ್ದಾರೆ.
ಸದ್ಯ ದೂರದರ್ಶನದಲ್ಲಿ ರಾಮಾಯಣ ಮರುಪ್ರಸಾರವಾಗುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ರಾಮಾಯಣ ಧಾರಾವಾಹಿಯನ್ನು ಮರು ಪ್ರಸಾರ ಮಾಡಲಾಗುತ್ತಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ದೊಡ್ಡವರಿಂದ, ಚಿಕ್ಕವರವರೆಗೂ ರಾಮಾಯಣವನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದಂತೆ, ದೊಡ್ಡ ಪರದೆ ಮೇಲೆ ಸಿನಿಮಾ ವೀಕ್ಷಿಸುವ ಕನಸು ಕಂಡಿರುವ ಅಭಿಮಾನಿಗಳು ರಾಜಮೌಳಿ ಬಳಿ ಬೇಡಿಕೆ ಇಡುತ್ತಿದ್ದಾರೆ.

ಅಭಿಮಾನಿಗಳ ಟ್ರೆಂಡ್
ರಾಜಮೌಳಿ ರಾಮಾಯಣ ಸಿನಿಮಾ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುತ್ತಿರುವ ಅಭಿಮಾನಿಗಳು "ರಾಜಮೌಳಿ ಮೇಕ್ ರಾಮಾಯಣ" ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ. "ಶ್ರೀ ರಾಮ್ ನಿಮಗಾಗಿ ಕಾಯುತ್ತಿದ್ದಾರೆ. ದಯವಿಟ್ಟು ರಾಮಾಯಣ ನಿರ್ದೇಶನ ಮಾಡಿ" ಎಂದು ಕೇಳಿಕೊಳ್ಳುತ್ತಿದ್ದಾರೆ.

ರಾಮಾನಂದ್ ಸಾಗರ್ ನಿರ್ದೇಶನ
ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ರಾಮಾನಂದ್ ಸಾಗರ್ ಅವರು ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸ್ ಅವರ ರಾಮಚರಿತ್ಮನಸ್ ಆಧರಿಸಿ ಮಾಡಲಾಗಿದೆ. ಒಟ್ಟು 78 ಸಂಚಿಕೆಗಳನ್ನು ರಾಮಾನಂದ್ ಸಾಗರ್ ನಿರ್ದೇಶನ ಮಾಡಿದ್ದಾರೆ.

ಹೆಚ್ಚು ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದ ಧಾರಾವಾಹಿ
ದೇಶದಲ್ಲಿಯೆ ಮೊದಲ ಬಾರಿಗೆ ಧಾರಾವಾಹಿ 1987ರಲ್ಲಿ ಜನವರಿ 25 ರಿಂದ 1988 ಜುಲೈ 31ರ ವರೆಗೆ ಪ್ರಸಾರವಾಯಿತು. ವಿಶ್ವದಲ್ಲಿಯೆ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಧಾರಾವಾಹಿ ಎನ್ನುವ ಖ್ಯಾತಿಗಳಿಸಿತ್ತು. ಅಲ್ಲದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವದಲ್ಲಿಯೆ ಅತೀ ಹೆಚ್ಚು ವೀಕ್ಷಿಸಿದ ಪೌರಾಣಿಕ ಧಾರಾವಾಹಿ ಎಂದು ದಾಖಲಿಸಲ್ಪಟ್ಟಿದೆ.

ರಾಜಮೌಳಿ ನಿರ್ದೇಶನ ಮಾಡುತ್ತಾರಾ?
ಭಾರತೀಯ ಕಿರುತೆರೆ ಲೋಕದಲ್ಲಿ ದಾಖಲೆ ನಿರ್ಮಿಸಿದ ರಾಮಾಯಣವನ್ನು ದೊಡ್ಡ ಪರದೆ ಮೇಲೆ ನೋಡಲು ಭಾರತೀಯರು ಕಾತರರಾಗಿದ್ದಾರೆ. ಅದರಲ್ಲೂ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರಲಿ ಎನ್ನುವುದು ಸಿನಿಮಾ ಅಭಿಮಾನಿಗಳ ಹೆಬ್ಬಯಕೆ. ಅಭಿಮಾನಿಗಳ ಆಸೆಯಂತೆ ರಾಜಮೌಳಿ ರಾಮಾಯಣ ಸಿನಿಮಾ ಮಾಡುತ್ತಾರಾ ಎನ್ನುವುದು ಕಾದು ನೋಡಬೇಕು.


Click it and Unblock the Notifications











