ರಶ್ಮಿಕಾ ಮಂದಣ್ಣ ಸಿನಿಮಾ ನೋಡಿ ಅದ್ಭುತ ಎಂದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ರಾಜಕಾರಣಕ್ಕೂ ಸಿನಿಮಾಕ್ಕೂ ಹತ್ತಿರದ ಸಂಬಂಧವಿದೆಯಾದರೂ ದೇಶದ ಉಚ್ಛ ಸಾಂವಿಧಾನಿಕ ಪದವಿಗಳಲ್ಲಿರುವವರು ಸಿನಿಮಾದಿಂದ ಅಂತರ ಕಾಯ್ದುಕೊಂಡಿರುತ್ತಾರೆ.
ರಾಷ್ಟ್ರಪತಿ, ಉಪರಾಷ್ಟ್ರಪತಿಗಳಂಥಹಾ ಅತ್ಯಂತ ಗೌರವಾನ್ವಿತ ಹುದ್ದೆಯಲ್ಲಿರುವವರು ಶಿಸ್ತಿನ ಡೆಕೋರಮ್ ಕಾಪಾಡಿಕೊಳ್ಳಬೇಕಾದ ಕಾರಣಕ್ಕೋ ಏನೋ ಸಿನಿಮಾ ಹಾಗೂ ಇತರೆ ಕೆಲವು ಮನೊರಂಜನಾ ರಂಗಗಳಿಂದ ಕೊಂಚ ದೂರವೇ ಉಳಿದಿರುತ್ತಾರೆ.
ಕಳೆದ ಅವಧಿಯಲ್ಲಿ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ವೆಂಕಯ್ಯ ನಾಯ್ಡು ಅವರು ಸಿನಿಮಾ ಪ್ರಿಯ ತೆಲುಗು ರಾಜ್ಯಗಳಿಗೆ ಸೇರಿದವರು. ತಮ್ಮ ಜನರಂತೆ ಅವರಿಗೂ ಸಿನಿಮಾಗಳ ಬಗ್ಗೆ ಆಸಕ್ತಿ. ಹಲವು ಗೌರವಾನ್ವಿತ ಹುದ್ದೆಗಳನ್ನು ನಿಭಾಯಿಸಿರುವ ವೆಂಕಯ್ಯ ನಾಯ್ಡು ತೆಲುಗು ಚಿತ್ರರಂಗದ ಕೆಲವು ಪ್ರಮುಖರೊಟ್ಟಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾರೆ. ಉಪರಾಷ್ಟ್ರಪತಿಯಾಗಿ ಅವರ ಸೇವಾ ಅವಧಿ ಮುಗಿದ ಬಳಿಕ ಇದೀಗ ತುಸು ಬಿಡುವು ಮಾಡಿಕೊಂಡಿರುವ ವೆಂಕಯ್ಯ ನಾಯ್ಡು, ಇತ್ತೀಚೆಗಷ್ಟೆ ಹೊಸದೊಂದು ತೆಲುಗು ಸಿನಿಮಾ ನೋಡಿ ವಿಪರೀತ ಮೆಚ್ಚಿಕೊಂಡಿದ್ದಾರೆ.

'ಸೀತಾ ರಾಮಂ' ಸಿನಿಮಾ ನೋಡಿದ ವೆಂಕಯ್ಯ ನಾಯ್ಡು
ಇತ್ತೀಚೆಗೆ ಬಿಡುಗಡೆ ಆದ ರಶ್ಮಿಕಾ ಮಂದಣ್ಣ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ 'ಸೀತಾ ರಾಮಮ್' ಸಿನಿಮಾವನ್ನು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವೀಕ್ಷಿಸಿದ್ದಾರೆ. ಬಹಳ ವರ್ಷಗಳ ನಂತರ ಸಿನಿಮಾ ಒಂದನ್ನು ವೀಕ್ಷಿಸಿರುವುದಾಗಿ ಹೇಳಿರುವ ವೆಂಕಯ್ಯ ನಾಯ್ಡು, ಭಿನ್ನ ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಟ್ವೀಟ್ಗಳನ್ನು ಮಾಡಿದ್ದಾರೆ.

ಹಲವು ಭಾವ ಹೊಮ್ಮುವಂತೆ ಮಾಡುವ ಸಿನಿಮಾ: ವೆಂಕಯ್ಯ ನಾಯ್ಡು
''ಸೀತಾರಾಮಂ' ಸಿನಿಮಾ ನೋಡಿದೆ. ನಟ-ನಟಿಯರ ಅಭಿನಯ, ತಂತ್ರಜ್ಞರ ಕ್ರಿಯಾಶೀಲ ಕಾರ್ಯ ಜೊತೆಯಾಗಿ ಸುಂದರ ದೃಶ್ಯಕಾವ್ಯ ನಿರ್ಮಾಣವಾಗಿದೆ. ಸಾಧಾರಣ ಪ್ರೇಮಕತೆಗಳ ಮಾದರಿಯಲ್ಲಲ್ಲದೆ, ಪ್ರೇಮಕತೆಗೆ ವೀರ ಸೈನಿಕನ ಭಾವನೆಗಳನ್ನು ಜೋಡಿಸಿ ಅನೇಕ ಭಾವೋದ್ವೇಗಗಳು ಹೊಮ್ಮುವಂತೆ ಮಾಡಿದ ಈ ಸಿನಿಮಾ ಎಲ್ಲರೂ ನೋಡಬೇಕಾದ ಸಿನಿಮಾ'' ಎಂದು ಹೊಗಳಿದ್ದಾರೆ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.

ಒಳ್ಳೆಯ ಸಿನಿಮಾ ನೋಡಿದ ಅನುಭವವ ನನ್ನದಾಯಿತು: ವೆಂಕಯ್ಯ ನಾಯ್ಡು
''ಬಹುಕಾಲದ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವವನ್ನು 'ಸೀತಾರಾಮಂ' ನೀಡಿತು. ಅಬ್ಬರದ ಹಿಂಸಾತ್ಮಕ ದೃಶ್ಯಗಳಿಲ್ಲದೆ ಕಣ್ಣಿಗೆ ಹಾಯೆನಿಸುವಂಥಹಾ ಪ್ರಕೃತಿ ಸೌಂದರ್ಯವನ್ನು ಕಟ್ಟಿಕೊಟ್ಟ ಈ ಸಿನಿಮಾದ ನಿರ್ದೇಶಕ ಹನು ರಾಘವಪುಡಿ, ನಿರ್ಮಾಪಕ ಅಶ್ವಿನಿ ದತ್ತ, ಸ್ವಪ್ನ ಮೂವಿ ಮೇಕರ್ಸ್ ಸಮೇತ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ'' ಎಂದಿದ್ದಾರೆ ವೆಂಕಯ್ಯ ನಾಯ್ಡು.

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು ಕಳೆದ ಅವಧಿಯಲ್ಲಿ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಬಿಜೆಪಿ ಸರ್ಕಾರದಲ್ಲಿ ಹಲವು ಇಲಾಖೆಗಳ ಮಂತ್ರಿಯಾಗಿ ಸೇವೆ ಸಹ ಸಲ್ಲಿಸಿದ್ದಾರೆ. ತೆಲುಗು ಚಿತ್ರರಂಗದ ಪ್ರಮುಖರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುವ ವೆಂಕಯ್ಯ ನಾಯ್ಡು, ಚಿರಂಜೀವಿ ಅವರೊಟ್ಟಿಗೆ ಆಪ್ತ ಸ್ನೇಹ ಹೊಂದಿದ್ದಾರೆ.


Click it and Unblock the Notifications











