ಸಕಲ ಸರ್ಕಾರಿ ಗೌರವಗಳೊಂದಿಗೆ ಸೂಪರ್ ಸ್ಟಾರ್ ಕೃಷ್ಣ ಅಂತ್ಯಕ್ರಿಯೆ: ನಟಶೇಖರನಿಗೆ ಅಶ್ರುತರ್ಪಣದ ವಿದಾಯ
ನಿನ್ನೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದ ತೆಲುಗು ನಟ ಸೂಪರ್ ಸ್ಟಾರ್ ಕೃಷ್ಣ(79) ಅಂತ್ಯಕ್ರಿಯೆ ಕೆಲವೇ ನಿಮಿಷಗಳ ಹಿಂದೆ ನೆರವೇರಿದೆ. ಎರಡು ದಿನಗಳ ಕಾಲ ನಟಶೇಖರನ ಪಾರ್ಥೀವ ಶರೀರವನ್ನು ಗಣ್ಯರು, ಆಪ್ತರು ಹಾಗೂ ಅಭಿಮಾನಿಗಳ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಹೈದರಾಬಾದ್ ಜೂಬ್ಲಿ ಹಿಲ್ಸ್ನ ಮಹಾಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಸೂಪರ್ ಸ್ಟಾರ್ ಕೃಷ್ಣ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಲಾಗಿತ್ತು. ಅಂತ್ಯ ಸಂಸ್ಕಾರದ ಸ್ಥಳದಲ್ಲಿ ಕೇವಲ 200 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ತೆಲಂಗಾಣ ಸರ್ಕಾರದ ಪರ ತಲಸಾನಿ ಶ್ರೀನಿವಾಸ್ ಯಾದವ್ ಅಂತ್ಯಕ್ರಿಯೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಪೊಲೀಸ್ ಇಲಾಖೆ ಕುಶಾಲ ತೋಪು ಆರಿಸಿ ಗೌರವ ಸಮರ್ಪಿಸಿದ ನಂತರ ಮಹೇಶ್ ಬಾಬು ತಮ್ಮ ತಂದೆ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಸೂಪರ್ ಸ್ಟಾರ್ ಕೃಷ್ಣ ಅಗಲಿಕೆಗೆ ಸಂತಾಪ ಸೂಚಿಸಲು ತೆಲುಗು ನಿರ್ಮಾಪಕರ ಮಂಡಲಿ ಹಾಗೂ ಫಿಲ್ಮ್ ಚೇಂಬರ್ ಟಾಲಿವುಡ್ ಬಂದ್ ಘೋಷಿಸಿದ್ದರು.
ಆಸ್ಪತ್ರೆಗೆ ದಾಖಲಿಸಿ ಹಿರಿಯ ನಟ ಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ಬೆಳಗಿನ ಜಾವ ದಿಗ್ಗಜ ನಟ ಕೊನೆಯುಸಿರೆಳೆದಿದ್ದರು. ನಿನ್ನೆ ಇಡೀ ದಿನ ಕೃಷ್ಣ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಂದು ಪಾರ್ಥೀವ ಶರೀರವನ್ನು ಕೃಷ್ಣ ಅವರ ಪದ್ಮಾಲಯ ಸ್ಟುಡಿಯೋಗೆ ತರಲಾಗಿತ್ತು.

ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳು ಭಾಗಿ
ಬೆಳಗ್ಗೆಯಿಂದ ಪದ್ಮಾಲಯ ಸ್ಟುಡಿಯೋದಲ್ಲಿ ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ಅಲ್ಲಿಂದ ಪಾರ್ಥೀವ ಶರೀರವನ್ನು ಫಿಲ್ಮ್ ನಗರ್ನಲ್ಲಿರುವ ಮಹಾಪ್ರಸ್ಧಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಈ ಅಂತಿಮ ಯಾತ್ರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿ ಆಗಿದ್ದರು. ಸಂಜೆ 4 ಗಂಟೆ ವೇಳೆ ಮಹಾಪ್ರಸ್ಥಾನದಲ್ಲಿ ಅಂತ್ಯ ಸಂಸ್ಕಾರದ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಕೃಷ್ಣ ಅವರಿಗೆ ಕುಟುಂಬಸ್ಥರು, ಅಭಿಮಾನಿಗಳು, ಆಪ್ತರು ಅಶ್ರುತರ್ಪಣದ ಮೂಲಕ ಅಂತಿಮ ವಿದಾಯ ಹೇಳಿದರು.

ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಸ್ನೇಹಿತರು
ಸೂಪರ್ ಸ್ಟಾರ್ ಕೃಷ್ಣ ಹಾಗೂ ನಟ ಮುರಳಿ ಮೋಹನ್ ಚಿತ್ರರಂಗಕ್ಕೆ ಬರುವುದಕ್ಕೆ ಮೊದಲಿನಿಂದಲೂ ಸ್ನೇಹಿತರಾಗಿದ್ದರು. ಕಾಲೇಜಿನಲ್ಲಿ ಇಬ್ಬರು ಕ್ಲಾಸ್ಮೇಟ್ಸ್ ಆಗಿದ್ದರು. ಹಾಗಾಗಿ ಕೃಷ್ಣ ಅವರ ಅಂತಿಮ ಯಾತ್ರೆಗೆ ಮುರಳಿ ಮೋಹನ್ ಹೆಗಲು ಕೊಟ್ಟರು. ಟಿಡಿಪಿ ನಾಯಕ ಬದ್ದಾ ವೆಂಕನ್ನ ಕೂಡ ನಟ ಕೃಷ್ಣ ಅವರೊಟ್ಟಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಅವರು ಕೂಡ ಸ್ನೇಹಿತನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟರು.

ಚಿಕಿತ್ಸೆ ಫಲಕಾರಿ ಆಗದೇ ಕೃಷ್ಣ ಕೊನೆಯುಸಿರು
ಸೋಮವಾರ ಕಾರ್ಡಿಯಾಟಿಕ್ ಅರೆಸ್ಟ್ನಿಂದ ಸೂಪರ್ ಸ್ಟಾರ್ ಕೃಷ್ಣ ಅವರನ್ನು ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣಕ್ಕೆ ಐಸಿಯುನಲ್ಲಿ ವೆಂಟಿಲೇಟರ್ನಲ್ಲಿ ಇಟ್ಟು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಬಹುಅಂಗಾಗ ವೈಫಲ್ಯದಿಂದ ಕೃಷ್ಣ ಅವರು ವೈದ್ಯರ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಮಂಗಳವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಟಾಲಿವುಡ್ ನಟಶೇಖರ ಇಹಲೋಕ ತ್ಯಜಿಸಿದ್ದರು.

ಚಿತ್ರರಂಗಕ್ಕೆ ಕೃಷ್ಣ ಕೊಡುಗೆ ಅಪಾರ
ತೆಲುಗು ಚಿತ್ರರಂಗದ ಬೆಳವಣಿಗೆಗೆ ಆಧಾರ ಸ್ತಂಭವಾಗಿದ್ದ ನಟ ಕೃಷ್ಣ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಿಸಿ, ನಿರ್ಮಿಸಿ ಸಕ್ಸಸ್ ಕಂಡಿದ್ದರು. ತಾಂತ್ರಿಕವಾಗಿ ಹಲವು ಪ್ರಯೋಗಗಳನ್ನು ಮಾಡಿ ಕೃಷ್ಣ ತೆಲುಗು ಚಿತ್ರರಂಗದ ಏಳಿಗೆಗೆ ಬೆಂಬಲವಾಗಿ ನಿಂತಿದ್ದರು. 340ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಪದ್ಮಾಲಯ ಸ್ಟುಡಿಯೋ ಸ್ಥಾಪಿಸಿದ್ದರು. ತಮ್ಮದೇ ಸಂಸ್ಥೆಯಿಂದ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದರು. ಕಾಂಗ್ರೆಸ್ ಪಕ್ಷ ಸೇರಿ ಲೋಕ ಸಭಾ ಸದಸ್ಯರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದರು.


Click it and Unblock the Notifications











