"ನಾನು ಕತೆ ಬರೆಯುವುದಿಲ್ಲ.. ಕದಿಯುತ್ತೇನೆ": ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೇಳಿಕೆ ವೈರಲ್
ಸೋಲಿಲ್ಲದ ಸರದಾರ ಎಸ್. ಎಸ್ ರಾಜಮೌಳಿ ಅದ್ಭುತ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಮೌಳಿ ನಿರ್ದೇಶನದ ಸಿನಿಮಾಗಳಿಗೆ ಕಥೆ ಒದಗಿಸುವುದು ತಂದೆ ವಿಜಯೇಂದ್ರ ಪ್ರಸಾದ್ ಎನ್ನುವುದು ಗೊತ್ತೇಯಿದೆ. ಇಂತಹ ಅದ್ಭುತ ಕಥೆಗಳ ಹಿಂದಿನ ಸೀಕ್ರೆಟ್ ಏನು ಎನ್ನುವುದನ್ನು ಸ್ವತಃ ವಿಜಯೇಂದ್ರ ಪ್ರಸಾದ್ ಈಗ ರಿವೀಲ್ ಮಾಡಿದ್ದಾರೆ.
'ಸಿಂಹಾದ್ರಿ', 'ಯಮದೊಂಗ', 'ಮಗಧೀರ', 'ಭಜರಂಗಿ ಭಾಯಿಜಾನ್', 'ಬಾಹುಬಲಿ', 'RRR' ಹೀಗೆ ಹಲವು ಹಿಟ್ ಸಿನಿಮಾಗಳಿಗೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಸದ್ಯ ಮೌಳಿ ಹಾಗೂ ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ಕಥೆ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 'RRR' ಸೀಕ್ವೆಲ್ ಬಗ್ಗೆಯೂ ಆಲೋಚಿಸುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದೆ. ಗೋವಾದಲ್ಲಿ ನಡೆಯುವ 53ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಹಿನ್ನಲೆಯಲ್ಲಿ ಫಿಲ್ಮ್ ರೈಟಿಂಗ್ ಬಗ್ಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಸುಳ್ಳು ಹೇಳುವವರೇ ಕಥೆಗಾರರು ಎಂದು ಇಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಏನು ಇಲ್ಲದೇ ಇರುವುದರಲ್ಲೇ ಹೊಸತನ್ನು ಸೃಷ್ಟಿಸಿ ಆಸಕ್ತಿಕರ ಅಂಶಗಳನ್ನು ಹೇಳುವುದೇ ಬರಹಗಾರನಿಗೆ ಇರಬೇಕಾದ ಮುಖ್ಯ ಲಕ್ಷಣ ಎಂದಿದ್ದಾರೆ.

ಸುಳ್ಳನ್ನು ಸುಂದರವಾಗಿ ತೋರಿಸುವುದೇ ಕಥೆ
ವಿಜಯೇಂದ್ರ ಪ್ರಸಾದ್ ಮಾತಾನಾಡುತ್ತಾ ನಾವು ಬರೀ ಪ್ರೇಕ್ಷಕರನ್ನು ಮೆಚ್ಚಿಸಲು ಕಥೆ ಬರೆಯಬಾರದು. ಹೀರೊ, ಡೈರೆಕ್ಟರ್, ಪ್ರೊಡ್ಯೂಸರ್ ಹೀಗೆ ಎಲ್ಲರ ಜೊತೆಗೆ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಬರೆಯಬೇಕು. ಆದರೆ ಈ ವಿಚಾರದಲ್ಲಿ ನಾವು ಇನ್ನು ಹಿಂದೆ ಉಳಿದಿದ್ದೇವೆ. ಒಂದು ಸುಳ್ಳನ್ನು ಸುಂದರವಾಗಿ ತೋರಿಸುವುದೇ ಸಿನಿಮಾ ಕಥೆ. ಅದು ಗೊತ್ತಿದ್ದರೆ ಬರಹಗಾರರಾಗಿ ಗೆಲ್ಲಬಹುದು" ಎಂದಿದ್ದಾರೆ.

ನಾನು ಕಥೆ ಕದಿಯುತ್ತೇನೆ
"ನಾನು ಕಥೆ ಬರೆಯುವುದಿಲ್ಲ. ಕದಿಯುತ್ತೇನೆ. ನಮ್ಮ ಸುತ್ತಾ ಸಾಕಷ್ಟು ಕಥೆಗಳು ಇರುತ್ತವೆ. ರಾಮಾಯಣ, ಮಹಾಭಾರತ, ನಮ್ಮ ಇತಿಹಾಸ ಇದರಿಂದಲೇ ಕಥೆಗಳು ಸಿಗುತ್ತವೆ. ನಾನು ಕೂಡ ಅಲ್ಲಿಂದಲೇ ಕಥೆಗಳನ್ನು ತೆಗೆದುಕೊಳ್ಳುತ್ತೇನೆ. ಆ ಕಥೆಯನ್ನು ನಮ್ಮದೇ ಶೈಲಿಯಲ್ಲಿ ಬರೆಯಬೇಕು, ಇದೇ ನನ್ನ ಸಕ್ಸಸ್ ಸೀಕ್ರೆಟ್" ಎಂದು ವಿವರಿಸಿದ್ದಾರೆ.

ಕನ್ನಡ ಚಿತ್ರಗಳಿಗೂ ಕೆಲಸ
ಬರೀ ಮಗನ ಸಿನಿಮಾಗಳಿಗೆ ಮಾತ್ರವಲ್ಲ, ವಿಜಯೇಂದ್ರ ಪ್ರಸಾದ್ ಹಿಂದಿ, ಕನ್ನಡ, ತಮಿಳು ಸಿನಿಮಾಗಳಿಗೂ ಕತೆ ಒದಗಿಸಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ 'ಅಪ್ಪಾಜಿ', ಶಿವಣ್ಣನ 'ಕುರುಬನ ರಾಣಿ', ರವಿಚಂದ್ರನ್ ನಟನೆಯ 'ಪಾಂಡುರಂಗ ವಿಠಲ', ನಿಖಿಲ್ ನಟನೆಯ 'ಜಾಗ್ವಾರ್' ಚಿತ್ರಕ್ಕೂ ರಾಜಮೌಳಿ ತಂದೆ ಕಥೆ ಬರೆದಿದ್ದರು.

ಮೌಳಿ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ
ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಜೊತೆಗೆ ಇನ್ನು ಕೆಲವು ಸಿನಿಮಾಗಳಿಗೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದಾರೆ. ಬಾಲಿವುಡ್ನ 'ಸೀತಾ', 'ಅಪರಾಜಿತ ಅಯೋಧ್ಯ', 'ಪವನ್ ಪುತ್ರ ಭಾಯಿಜಾನ್' ಹೀಗೆ ಸಾಲು ಸಾಲು ಸಿನಿಮಾಗಳಿಗೆ ಕತೆ ಸಿದ್ಧವಾಗುತ್ತಿದೆ. 'ಭಜರಂಗಿ ಭಾಯಿಜಾನ್' ಸೀಕ್ವೆಲ್ನಲ್ಲಿ ಮತ್ತೆ ಸಲ್ಮಾನ್ ಖಾನ್ ನಟಿಸ್ತಿದ್ದು, 'ಪವನ್ ಪುತ್ರ ಭಾಯಿಜಾನ್' ಹೆಸರಿನಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











