"ನೀವು ಹೆಮ್ಮೆ ಪಡುವಂತೆ ಸಾಧಿಸಿ ತೋರಿಸುತ್ತೇನೆ": ತಾತನನ್ನು ನೆನೆದು ಮಹೇಶ್ ಬಾಬು ಪುತ್ರಿ ಸಿತಾರ ಭಾವುಕ
ಟಾಲಿವುಡ್ ಸೂಪರ್ ಸ್ಟಾರ್ ಘಟ್ಟನಮನೇನಿ ಕೃಷ್ಣ ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ(ನವೆಂಬರ್ 15) ನಿಧನರಾಗಿದ್ದರು. ಮಹೇಶ್ ಬಾಬು ತಂದೆ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಗಣ್ಯರು, ಅಭಿಮಾನಿಗಳು ಕೃಷ್ಣ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೀತಿದೆ.
ನಿನ್ನೆಯಿಂದಲೂ ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಕೃಷ್ಣ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರದ ದರ್ಶನ ಪಡೆದು ಬರುತ್ತಿದ್ದಾರೆ. ಇದೀಗ ಅವರ ಪಾರ್ಥೀವ ಶರೀರವನ್ನು ಪದ್ಮಾಲಯ ಸ್ಟುಡಿಯೋಗೆ ರವಾನಿಸಲಾಗಿದ್ದು, ಅಲ್ಲಿ ಅಭಿಮಾನಿಗಳ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲವೇ ತಿಂಗಳ ಅಂತರದಲ್ಲಿ ಮಹೇಶ್ ಬಾಬು ಸಹೋದರ, ತಾಯಿ ಹಾಗೂ ತಂದೆಯನ್ನು ಕಳೆದುಕೊಂಡು ಕುಗ್ಗಿ ಹೋಗಿದ್ದಾರೆ. ತಾತನನ್ನು ಕಳೆದುಕೊಂಡು ಮಹೇಶ್ ಬಾಬು ಪುತ್ರಿ ಸಿತಾರ ಕಂಬನಿ ಮಿಡಿದಿದ್ದಾಳೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾಳೆ.
ಮಹೇಶ್ ಬಾಬು ಮನೆಯಲ್ಲಿ ಕೃಷ್ಣ ಹೆಚ್ಚು ಇರುತ್ತಿರಲಿಲ್ಲ. ಹೆಣ್ಣು ಮಕ್ಕಳ ಮನೆಗಳಲ್ಲಿ ಅಥವಾ ಪುತ್ರ ನರೇಶ್ ಅವರ ಫಾರ್ಮ್ ಹೌಸ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ ಆಗಿಂದಾಗ್ಗೆ ಮಹೇಶ್ ಬಾಬು ಮಕ್ಕಳನ್ನು ಕರೆದುಕೊಂಡು ತಂದೆಯವರನ್ನು ನೋಡಲು ಹೋಗುತ್ತಿದ್ದರು. ಮಹೇಶ್ ಬಾಬು ಮಕ್ಕಳಾದ ಗೌತಮ್ ಹಾಗೂ ಸಿತಾರ ಜೊತೆ ಕೃಷ್ಣ ಬಹಳ ಸಮಯ ಕಳೆಯುತ್ತಿದ್ದರು. ಹಾಗಾಗಿ ಇಬ್ಬರಿಗೂ ತಾತನ ಜೊತೆ ಆತ್ಮೀಯ ಅನುಬಂಧ ಇತ್ತು.

ತಾತನ ಬಗ್ಗೆ ಸಿತಾರ ಭಾವುಕ ಪೋಸ್ಟ್
ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುವ ಸಿತಾರ, ತಾತನ ಅಗಲಿಕೆಯ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾಳೆ. '' ವಾರದ ಮಧ್ಯಾಹ್ನದ ಊಟ ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ. ನೀವು ಸಾಕಷ್ಟು ಅಮೂಲ್ಯವಾದ ವಿಷಯಗಳನ್ನು ನನಗೆ ಕಲಿಸಿದ್ದೀರಿ. ನನ್ನನ್ನು ಬಹಳ ನಗಿಸಿದ್ದೀರಿ. ಈಗ ಅದೆಲ್ಲಾ ನಿಮ್ಮ ನೆನಪಾಗಿ ಉಳಿಯುತ್ತದೆ. ನೀವು ನನ್ನ ಹೀರೊ. ಮುಂದೊಂದು ದಿನ ನೀವು ಹೆಮ್ಮೆ ಪಡುವಂತೆ ನಾನು ಸಾಧಿಸಿ ತೋರಿಸುತ್ತೇನೆ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಾತ" ಎಂದು ಬರೆದುಕೊಂಡಿದ್ದಾಳೆ. ಆಕೆಯ ಪೋಸ್ಟ್ ವೈರಲ್ ಆಗಿದೆ.

ತಾತನಿಗೆ ಸಿತಾರ, ಗೌತಮ್ ಶ್ರದ್ಧಾಂಜಲಿ
ಮಹೇಶ್ ಬಾಬು ಮಕ್ಕಳಾದ ಗೌತಮ್ ಹಾಗೂ ಸಿತಾರ ಪದ್ಮಾಲಯ ಸ್ಟುಡಿಯೋದಲ್ಲಿ ತಾತನ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ತಾತನನ್ನು ನೆನೆದು ಕಣ್ಣೀರಾಗಿದ್ದಾರೆ. ಅವರ ಜೊತೆ ಮಹೇಶ್ ಬಾಬು ಹಾಗೂ ಪತ್ನಿ ನಮ್ರತಾ ಕೂಡ ಇದ್ದರು. ಸೂಪರ್ ಸ್ಟಾರ್ ಕೃಷ್ಣ ಪಾರ್ಥೀವ ಶರೀದ ಅಂತಿಮ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಪದ್ಮಾಲಯ ಸ್ಟುಡಿಯೋದತ್ತ ಧಾವಿಸಿ ಬರುತ್ತಿದ್ದಾರೆ.

ಕೃಷ್ಣ ಅಗಲಿಕೆಗೆ ಟಾಲಿವುಡ್ ದಿಗ್ಭ್ರಮೆ
ಘಟ್ಟಮನೇನಿ ಕೃಷ್ಣ ಅಗಲಿಕೆ ಟಾಲಿವುಡ್ ಚಿತ್ರರಂಗಕ್ಕೆ ದಿಗ್ಭ್ರಮೆ ಉಂಟು ಮಾಡಿದೆ. ಇತ್ತೀಚೆಗೆ ಮತ್ತೊಬ್ಬ ಸೂಪರ್ ಸ್ಟಾರ್ ಕೃಷ್ಣಂರಾಜು ನಿಧನರಾಗಿದ್ದರು. ಇದೀಗ ನಟಶೇಖರ ಕೃಷ್ಣ ಕೂಡ ಕೊನೆಯುಸಿರೆಳೆದು ಟಾಲಿವುಡ್ ಸೂಪರ್ ಸ್ಟಾರ್ಗಳ ಸುವರ್ಣಯುಗ ಮುಗಿದಂತಾಗಿದೆ. ನಿನ್ನೆಯಿಂದಲೇ ಚಿರಂಜೀವಿ, ರಾಮ್ಚರಣ್, ಜ್ಯೂ. ಎನ್ಟಿಆರ್, ಪ್ರಭಾಸ್ ಸೇರಿದಂತೆ ಚಿತ್ರರಂಗ ಗಣ್ಯರು ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣ ನಿಧನ
ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದವರು ಘಟ್ಟಮನೇನಿ ಕೃಷ್ಣ. 340 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಸಿನಿಮಾಗಳನ್ನು ನಿರ್ಮಿಸಿದ್ದರು. ಸೋಮವಾರ ಸಂಜೆ ಕಾರ್ಡಿಯಾಟಿಕ್ ಅರೆಸ್ಟ್ನಿಂದ ಹೈದರಾಬಾದ್ನಲ್ಲಿ ಕಾಂಟಿನೆಂಟಲ್ ಆಸ್ಪತ್ರೆಗೆ ಕೃಷ್ಣ ಅವರನ್ನು ದಾಖಲಿಸಲಾಗಿತ್ತು. ಐಸಿಯುನಲ್ಲಿ ವೆಂಟಿಲೇಟರ್ನಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಬಹು ಅಂಗಾಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ 4 ಗಂಟೆ ಸುಮಾರಿಗೆ ಕೃಷ್ಣ ಕೊನೆಯುಸಿರೆಳೆದಿದ್ದರು.


Click it and Unblock the Notifications











