ಅಧೀರನಿಗಿಂತ ಭಯಾನಕನಾ ಈ 'ರಾಜಮನಾರ್'?, 'ಸಲಾರ್' ಖಳನಟನನ್ನು ಪರಿಚಯಿಸಿದ ಪ್ರಶಾಂತ್ ನೀಲ್
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ 'ಸಲಾರ್' ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಅಪ್ ಡೇಟ್ ಹೊರಬಿದ್ದಿದೆ. ಚಿತ್ರದ ಪ್ರಮುಖ ಪಾತ್ರ ರಿವೀಲ್ ಮಾಡುವುದಾಗಿ ಸಿನಿಮಾತಂಡ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಇದೀಗ ಸಲಾರ್ ಸಿನಿಮಾದಿಂದ ಭರ್ಜರಿ ಸುದ್ದಿ ಹೊರಬಿದ್ದಿದೆ. ಚಿತ್ರದ ಭಯಾನಕ ಖಳನಟನನ್ನು ಪರಿಚಯಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.
ಸಲಾರ್ ಸಿನಿಮಾದ ರಾಜಮನಾರ್ ಪಾತ್ರವನ್ನು ಅಭಿಮಾನಿಗಳಿಗೆ ಪರಿಚಯಿಸುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ ಸಿನಿಮಾತಂಡ. ಅಂದಹಾಗೆ ರಾಜಮನಾರ್ ಪಾತ್ರದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ. ರಾಜಮನಾರ್ ಆಗಿ ಜಗಪತಿ ಬಾಬು, ಪ್ರಭಾಸ್ ಎದುರು ತೊಡೆತಟ್ಟಿ ನಿಲ್ಲಲಿದ್ದಾರೆ. ಹೆಸರಿನ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ರಾಜಮನಾರ್ ಪಾತ್ರ ಹೇಗಿರಲಿದೆ ಎನ್ನುವ ಒಂದು ಝಲಕ್ ಅನ್ನು ಸಹ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ತೋರಿಸಿದೆ ಸಿನಿಮಾತಂಡ. ಮುಂದೆ ಓದಿ...

ಜನಗಪತಿ ಬಾಬು 'ರಾಜಮನಾರ್' ಭಯಾನಕ ಲುಕ್
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಜಗಪತಿ ಬಾಬು 'ಸಲಾರ್' ಸಿನಿಮಾದ ಭಯಾನಕ ರಾಜಮಾನರ್ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ಪ್ರಿಯರ ನಿದ್ದೆ ಗೆಡಿಸಿದ್ದಾರೆ. ರಾಕ್ಷಸ ಮುಖ, ಬಾಯಲ್ಲಿ ಸಿಗರೇಟ್, ಹಣ್ಣು ಹಣ್ಣಾದ ದಾಡಿ, ಸೇಡು ತುಂಬಿರುವ ಭಯ ಹುಟ್ಟಿಸುವ ಲುಕ್ ರಾಜಮನಾರ್ ಪಾತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲವನ್ನು ಹೆಚ್ಚಿಸಿದೆ.

ಅಧೀರಗಿಂತ ಭಯಾನಕನಾ ಈ ರಾಜಮನಾರ್?
ಈ ಲುಕ್ ನೋಡಿತ್ತಿದ್ರೆ ಕೆಜಿಎಫ್-2 ಚಿತ್ರದ ಅಧೀರನಿಗಿಂತ ಭಯಾನಕವಾಗಿದೆಯಾ ಎನ್ನುವ ಅನುಮಾನ ಕಾಡುವಂತಿದೆ. ಅಂದಹಾಗೆ ಜಗಪತಿ ಬಾಬು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಈ ಹಿಂದೆ ಅರವಿಂದ ಸಮೇತ ಸಿನಿಮಾದಲ್ಲೂ ಭಯಾನಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಪಾತ್ರಕ್ಕಿಂತ ರಾಜಮನಾರ್ ಪಾತ್ರ ಮತ್ತಷ್ಟು ಭಯ ಹುಟ್ಟಿಸುವಂತಿದೆ.

ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಚಿತ್ರೀಕರಣಕ್ಕೆ ತಯಾರಿ
ಅಂದಹಾಗೆ ಈಗಾಗಲೇ ಸಲಾರ್ ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡಲು ಸಿನಿಮಾತಂಡ ಸಜ್ಜಾಗಿದ್ದು, ಬೃಹತ್ ಸೆಟ್ ಕೂಡ ನಿರ್ಮಾಣವಾಗಿದೆಯಂತೆ. ಈ ಆಕ್ಷನ್ ದೃಶ್ಯ 'ಕೆಜಿಎಫ್'ಗಿಂತ ಎರಡು ಪಟ್ಟು ದೊಡ್ಡದಾಗಿರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಕ್ಷನ್ ದೃಶ್ಯಕ್ಕೆ ಖ್ಯಾತ ಸಾಹಸ ಕಲಾವಿದರಾದ ಅನ್ಬು-ಅರಿವ್ ಆಕ್ಷನ್ ಡೈರೆಕ್ಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ದೃಶ್ಯದಲ್ಲಿ ಜಗಪತಿ ಬಾಬು ಕೂಡ ಇರಲಿದ್ದಾರೆ.

ಶ್ರುತಿ ಹಾಸನ್ ನಾಯಕಿ
ಸಲಾರ್ ಸಿನಿಮಾವನ್ನು ತೆಲುಗು ಜೊತೆಗೆ ಕನ್ನಡದಲ್ಲೂ ಚಿತ್ರೀಕರಣ ಮಾಡಲಾಗಿತ್ತಿದೆ. ಚಿತ್ರದಲ್ಲಿ ಬಹುತೇಕ ಕೆಜಿಎಫ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ ನಟ ಮಧು ಗುರುಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಶ್ರುತಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಮೊದಲ ಬಾರಿಗೆ ಶ್ರುತಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ.

ಏಪ್ರಿಲ್ 14ಕ್ಕೆ ತೆರೆಗೆ ಬರಬೇಕಿತ್ತು ಸಲಾರ್
ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಲಾರ್ ಮುಂದಿನ ವರ್ಷ ಏಪ್ರಿಲ್ 14ರಂದು ತೆರೆಗೆ ಬರಬೇಕಿತ್ತು. ಆದರೀ ಅದೇ ದಿನ ಕೆಜಿಎಫ್-2 ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗ ಮಡಲಾಗಿದೆ. ಹಾಗಾಗಿ ಸಲಾರ್ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಪ್ರಭಾಸ್ ಬಳಿ ಇರುವ ಸಿನಿಮಾಗಳು
ಅಂದಹಾಗೆ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಜೊತೆಗೆ 'ರಾಧೆ ಶ್ಯಾಮ್' ಸಿನಿಮಾ ಬಿಡುಗಡೆ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ರಾಧೆ ಶ್ಯಾಮ್ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ಆದಿಪುರುಷ್ ಸಿನಿಮಾದ ಚಿತ್ರೀಕರಣದಲ್ಲೂ ಪ್ರಭಾಸ್ ನಿರತರಾಗಿದ್ದಾರೆ. ಈ ಸಿನಿಮಾ ಬಳಿಕ ಪ್ರಭಾಸ್, ಮಹಾನಟಿ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.


Click it and Unblock the Notifications











