ಕಿಚ್ಚನ ಮತ್ತೊಂದು ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್: ಸೆನ್ಸಾರ್ ಸರ್ಟಿಫಿಕೇಟ್ ಕೂಡ ಸಿಕ್ತು!
'ವಿಕ್ರಾಂತ್ ರೋಣ' ನಂತರ ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಒಂದಷ್ಟು ಕಥೆಗಳು ಮಾತುಕತೆಯಲ್ಲಿ ಇದ್ದರೂ ಯಾವುದು ಫೈನಲ್ ಆಗಿಲ್ಲ. ಆದರೆ ಕಿಚ್ಚನ ಹಿಟ್ ಸಿನಿಮಾವೊಂದು ತೆಲುಗಿಗೆ ಡಬ್ ಆಗಿ ರಿಲೀಸ್ ಆಗ್ತಿದೆ.
ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಅದಾಗಲೇ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಕಿಚ್ಚನಿಗೆ 'ವಿಕ್ರಾಂತ್ ರೋಣ' ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಬಾಕ್ಸಾಫೀಸ್ನಲ್ಲಿ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ತೆಲುಗಿಗೂ ಡಬ್ ಆಗಿದ್ದ ಸಿನಿಮಾ ಆಂಧ್ರ, ತೆಲಂಗಾಣದಲ್ಲೂ ಪ್ರೇಕ್ಷಕರ ಮನಗೆದ್ದಿತ್ತು. 'ಈಗ' ನಂತರ 'ರೋಣ'ನಾಗಿ ಕಿಚ್ಚನ ಅಭಿನಯಕ್ಕೆ ಮತ್ತೊಮ್ಮೆ ಬಹುಪರಾಕ್ ಸಿಕ್ಕಿತ್ತು.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳು ಬಹಳ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿವೆ. ಬಾಲಿವುಡ್ ಮಂದಿ ಕೂಡ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತಾಗಿದೆ. ಯಶ್, ಸುದೀಪ್ ನಟನೆಯ ಸಿನಿಮಾಗಳು ತೆಲುಗಿಗೆ ಡಬ್ ಆಗಿ ಪ್ರದರ್ಶನ ಕಾಣ್ತಿದೆ.

'ಹೆಬ್ಬುಲಿ' ತೆಲುಗಿಗೆ ಡಬ್
5 ವರ್ಷಗಳ ಹಿಂದೆ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ 'ಹೆಬ್ಬುಲಿ' ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಿ ರಿಲೀಸ್ ಆಗ್ತಿದೆ. ಕೃಷ್ಣ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿ ಮಿಂಚಿದ್ದರು. ರಘುನಾಥ್ ಹಾಗೂ ಉಮಾಪತಿ ಶ್ರೀನಿವಾಸ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದರು. ಸುದೀಪ್ ಪ್ಯಾರಾ ಕಮಾಂಡೋ ಆಫೀಸರ್ ರಾಮ್ ಪಾತ್ರದಲ್ಲಿ ಅಬ್ಬರಿಸಿದ್ದರು. ಅರ್ಜುನ್ ಜನ್ಯಾ ಮ್ಯೂಸಿಕ್ನಲ್ಲಿ ಸಾಂಗ್ಸ್ ಹಿಟ್ ಆಗಿತ್ತು.

ಸೆನ್ಸಾರ್ ಕೆಲಸ ಕಂಪ್ಲೀಟ್
ಫ್ಯಾಮಿಲಿ ಎಮೋಷನ್ಸ್, ಆಕ್ಷನ್ಸ್, ರೊಮ್ಯಾನ್ಸ್ ಎಲ್ಲವನ್ನು ಹದವಾಗಿ ಬೆರಸಿ ನಿರ್ದೇಶಕ ಕೃಷ್ಣ 'ಹೆಬ್ಬುಲಿ' ಸಿನಿಮಾ ಕಟ್ಟಿಕೊಟ್ಟಿದ್ದರು. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಕಲ್ಯಾಣಿ, ಅವಿನಾಶ್, ಚಿಕ್ಕಣ್ಣ ಚಿತ್ರದ ತಾರಾಗಣದಲ್ಲಿದ್ದರು. ಆರ್ಮುಗ ರವಿಶಂಕರ್, ಕಬೀರ್ ದುಹಾನ್ ಸಿಂಗ್, ರವಿ ಕಿಶನ್ ನೆಗೆಟಿವ್ ರೋಲ್ಗಳಲ್ಲಿ ಅಬ್ಬರಿಸಿದ್ದರು. ಸದ್ಯ ಚಿತ್ರದ ಡಬ್ಬಿಂಗ್, ಸೆನ್ಸಾರ್ ಕೆಲಸ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೇ ತೆಲುಗು ರಾಜ್ಯಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

3 ಚಿತ್ರಗಳಲ್ಲಿ ಅತಿಥಿ ಪಾತ್ರ
ಕಿಚ್ಚ ಸುದೀಪ್ ಸದ್ಯ ಯಾವುದೇ ಸಿನಿಮಾದಲ್ಲಿ ಹೀರೊ ಆಗಿ ನಟಿಸ್ತಿಲ್ಲ. ಆದರೆ ಎರಡು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಆರ್. ಚಂದ್ರು ನಿರ್ದೇಶನ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಚಿತ್ರ ವಿಶೇಷ ಪಾತ್ರದಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ಭಾರ್ಗವ್ ಭಕ್ಷಿ ಪಾತ್ರದಲ್ಲಿ ಉಪೇಂದ್ರ ಎದುರು ಕಿಚ್ಚಿನ ಆರ್ಭಟ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಪ್ರದೀಪ್ ನಟನೆಯ 'ಉಸಿರೇ ಉಸಿರೇ' ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹೊಸ ವರ್ಷದಲ್ಲಿ ಹೊಸ ಸಿನಿಮಾ
ಹೀರೊ ಆಗಿ ಸುದೀಪ್ ನಟನೆಯ ಹೊಸ ಸಿನಿಮಾ ಹೊಸ ವರ್ಷದಲ್ಲಿ ಘೋಷಣೆ ಆಗಲಿದೆ. ಸಾಮಾನ್ಯವಾಗಿ ಸ್ಟಾರ್ ಹೀರೊಗಳು ಒಂದು ಸಿನಿಮಾ ಮುಗಿಯುವ ಮುನ್ನ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟುಬಿಡುತ್ತಾರೆ. ಆದರೆ 'ವಿಕ್ರಾಂತ್ ರೋಣ' ರಿಲೀಸ್ ಆಗಿ 5 ತಿಂಗಳು ಕಳೆದರೂ ಸುದೀಪ್ ಹೊಸ ಸಿನಿಮಾ ಯಾವುದು ಎನ್ನುವುದು ಮಾತ್ರ ಗೊತ್ತಾಗಿಲ್ಲ. ಅನೂಪ್ ಭಂಡಾರಿ ಕಿಚ್ಚನಿಗಾಗಿ ಕಥೆ ಮಾಡುತ್ತಿದ್ದಾರೆ. ತಮಿಳಿನ ವೆಂಕಟ್ ಪ್ರಭು ನಿರ್ದೇಶನದಲ್ಲೂ ಸುದೀಪ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಆದರೆ ಯಾವುದು ಮೊದಲು ಶುರುವಾಗುತ್ತೋ ಕಾದು ನೋಡಬೇಕು.


Click it and Unblock the Notifications











