ಈಗ ನಂತರ ಯಾವುದೇ ಆಫರ್ ಬಂದಿಲ್ಲ: ಸುದೀಪ್
ಕನ್ನಡ ನಟ ಕಿಚ್ಚ ಸುದೀಪ್ ತೆಲುಗು 'ಈಗ' ಚಿತ್ರದ ಮೂಲಕ ಇಡೀ ಇಂಡಿಯಾದಲ್ಲೇ ಹವಾ ಎಬ್ಬಿಸಿರುವುದು ಹೊಸ ವಿಷಯವೇನಲ್ಲ. ಈಗ ಚಿತ್ರದ ಬಿಡುಗಡೆ ನಂತರ ಸುದೀಪ್ ಅವರಿಗೆ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ ಎಂಬುದು ಎಲ್ಲಾ ಕಡೆ ಹಬ್ಬಿರುವ ಸುದ್ದಿ. ಅಷ್ಟೇ ಅಲ್ಲ, ಸುದೀಪ್ ಈಗ ಹೊಸ 'ಸೌತ್ ಇಂಡಿಯಾ ಸ್ಟಾರ್' ಎಂಬುದು ಬರೆಯದೆಯೂ ಬಂದ ಬಿರುದು.
ಈಗ ಚಿತ್ರದ ನೋಡಿದ ಪ್ರತಿಯೊಬ್ಬರೂ ಸುದೀಪ್ ನಟನೆ ಹಾಗೂ ಆಂಗ್ರಿ ಯಂಗ್ ಮ್ಯಾನ್ ಲುಕ್ ನೋಡಿ ಸುದೀಪ್ ಅವರನ್ನು ಕೊಂಡಾಡಿದ್ದಾರೆ. ಸುದೀಪ್ ನಟನೆಯನ್ನು ಹೊಗಳಿ ಭಾರತೀಯ ಚಿತ್ರರಂಗದ ಅತಿರಥಮಹಾರಥರು ಎಸ್ ಎಂ ಎಸ್, ಟ್ವಿಟ್ಟರ್, ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ಸುದೀಪ್ ರನ್ನು ಹಾಡಿ ಹೊಗಳಿದ್ದಾರೆ. ಕರೆ ಮಾಡಿ ನೇರವಾಗಿ ಮಾತನಾಡಿದವರೂ ಕಡಿಮೆಯೇನಲ್ಲ.
ಅಂದಮೇಲೆ, ಸುದೀಪ್ ಅವರಿಗೆ ಆಫರ್ ಬಹಳಷ್ಟು ಬಂದಿರಲೇಬೇಕು ಎಂಬುದು ಎಲ್ಲರ ಊಹೆ. ಆದರೆ ಅದು ಕೇವಲ ಊಹೆ ಅಷ್ಟೇ. "ನನಗೆ ನೇರವಾಗಿ ಯಾವುದೇ ಆಫರ್ ಬಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ ಸುದೀಪ್. ಹಾಗೆ ಕರೆ ಬಂದರೂ ಇದ್ದಕ್ಕಿದ್ದಂತೆ ಹೋಗಿ ಬಿಡುವ ವ್ಯಕ್ತಿ ನಾನಲ್ಲ. ರಾಜಮೌಳಿಯವರು ಕರೆದರು, ಹೋಗಿ ಬಂದೆ. ಸಿಕ್ಕ ಅವಕಾಶವನ್ನೆಲ್ಲಾ ಬಾಚಿಕೊಂಡು ಅಲ್ಲಿಯೇ ಇರಲು ಬಯಸುವ ಜಾಯಮಾನ ನನ್ನದಲ್ಲ" ಎಂದಿದ್ದಾರೆ.
"ಚಿತ್ರವೊಂದು ಯಶಸ್ವಿಯಾದ ತಕ್ಷಣವೇ ಭಾರೀ ಆಫರ್ ಗಳು ಬರುತ್ತವೆ ಎಂಬುದನ್ನು ನಾನು ನಂಬಲಾರೆ. ತೆಲುಗು, ತಮಿಳಿನಿಂದ ನನಗೆ ಯಾವುದೇ ಆಫರ್ ನೇರವಾಗಿ ಬಂದಿಲ್ಲ. ನನಗೆ ಸಂಬಂಧಪಟ್ಟವರಲ್ಲಿ ವಿಚಾರಿಸುವುದು, ಡೇಟ್ಸ್ ಕೇಳುವುದ ಬಿಟ್ಟರೆ ಇದುವರೆಗೂ ನನಗೆ ಯಾವುದೇ ಆಫರ್ ನೇರವಾಗಿ ಬಂದಿಲ್ಲ. ನನ್ನ ಜತೆ ಈ ಬಗ್ಗೆ ಯಾರೂ ಮಾತನಾಡಿಲ್ಲ" ಎಂದಿದ್ದಾರೆ ಕಿಚ್ಚ.
ಪ್ರಕಾಶ್ ರೈ, ರಜನಿಕಾಂತ್, ಅರ್ಜುನ್ ಸರ್ಜಾ ಮುಂತಾದವರು ಕನ್ನಡದಿಂದ ನೆರೆಭಾಷೆ ಚಿತ್ರರಂಗಗಳಿಗೆ ಜಂಪ್ ಮಾಡಿದವರು. ನೀವು ಅವರ ಹಾದಿಯಲ್ಲೇ ಸಾಗುತ್ತೀರಾ ಎಂಬ ಪ್ರಶ್ನೆಗೆ, "ನನಗೂ ಅವರಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಅವರು ನಿರೀಕ್ಷೆಗಳ ಬೆನ್ನು ಹತ್ತಿ ಬೇರೆಡೆಗೆ ಹೋದವರು. ಆದರೆ ನಾನು ಇಲ್ಲೇ ಸಾಕಷ್ಟು ಸಾಧಿಸಿ ಅವಕಾಶ ಬಂದಾಗ ಒಂದು ಚಿತ್ರದಲ್ಲಿ ನಟಿಸಿದ್ದೇನೆ ಅಷ್ಟೇ. ಹೋಲಿಕೆ ಸರಿಯಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











