ಹೊಸ ಪ್ರಯೋಗಗಳ ಸರದಾರ.. ದಾಖಲೆಗಳ ವೀರ.. ಹಲವು ಮೊದಲುಗಳ ಹರಿಕಾರ ನಟಶೇಖರ ಕೃಷ್ಣ
ತೆಲುಗಿನ ಖ್ಯಾತ ನಟ ಘಟ್ಟಮನೇನಿ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ ಸಾಕಷ್ಟು ಪ್ರಯೋಗಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಹೊಸ ಹುರುಪು ತಂದು ಕೊಟ್ಟವರು ಕೃಷ್ಣ. ಎನ್ಟಿಆರ್, ಎಎನ್ಆರ್ ನಂತರ ಅವರ ಸಾಲಿನಲ್ಲೇ ನಿಲ್ಲುವಂತಹ ಮತ್ತೊಬ್ಬೆ ದಿಗ್ಗಜ ನಟ.
ತೆಲುಗು ಚಿತ್ರರಂಗ ಇಂದು ಈ ಮಟ್ಟದಲ್ಲಿ ಇದೆ ಅಂದರೆ ಅದಕ್ಕೆ ಘಟ್ಟಮನೇನಿ ಕೃಷ್ಣ ಕೊಡುಗೆಯೂ ಇದೆ. ಸೂಪರ್ ಸ್ಟಾರ್ ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವರಾಮಕೃಷ್ಣಮೂರ್ತಿ. 1942 ಮೇ 31 ರಂದು ಘಟ್ಟಮನೇನಿ ರಾಘಯ್ಯ ಚೌದರಿ, ನಾಗರತ್ನಮ್ಮ ಮಗನಾಗಿ ಬುರ್ರಿಪಾಳ್ಯದಲ್ಲಿ ಜನಿಸಿದರು. ನಟ ಮುರಳಿ ಮೋಹನ್, ನಿರ್ದೇಶಕ ಕ್ರಾಂತಿಕುಮಾರ್ ಡಿಗ್ರಿ ಟೈಂನಲ್ಲಿ ಕೃಷ್ಣ ಅವರು ರೂಮ್ಮೇಟ್ಸ್ ಆಗಿದ್ದರು. ನಂತರ ನಾಟಕಗಳ ಮೂಲಕ ಶೋಭನ್ ಬಾಬು ಪರಿಚಯವಾಯಿತು. ಚಿತ್ರರಂಗಕ್ಕೆ ಬಂದಮೇಲೆ ಮುರಳೀಮೋಹನ್, ಶೋಭನ್ಬಾಬು ಆತ್ಮೀಯ ಸ್ನೇಹಿರಾಗಿದ್ದರು. ಕೃಷ್ಣ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೊದಲೇ ತಮ್ಮ 19ನೇ ವಯಸ್ಸಿನಲ್ಲಿ ಇಂದಿರಾದೇವಿಯೊಂದಿಗೆ ಮದುವೆ ನಡೆಯಿತು. ಈ ದಂಪತಿಗೆ ರಮೇಶ್ಬಾಬು, ಮಹೇಶ್ಬಾಬು, ಪದ್ಮಾವತಿ, ಮಂಜುಳ, ಪ್ರಿಯದರ್ಶಿನಿ ಸೇರಿ 5 ಜನ ಮಕ್ಕಳು.
ತಂದೆ ಜೊತೆ ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಮಹೇಶ್ ಬಾಬು ಇವತ್ತಿಗೂ ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿದ್ದಾರೆ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಜಾನಪದ, ಕೌಬಾಯ್, ಜೇಮ್ಸ್ ಬಾಂಡ್ ಹೀಗೆ ಎಲ್ಲಾ ಜಾನರ್ ಸಿನಿಮಾಗಳಲ್ಲೂ ಕೃಷ್ಣ ನಟಿಸಿದ್ದಾರೆ. 1969ರಲ್ಲಿ 'ಸಾಕ್ಷಿ' ಚಿತ್ರದ ಮೂಲಕ ಪರಿಚಿತರಾದ ನಟಿ ವಿಜಯ ನಿರ್ಮಲಾ ಅವರನ್ನು ಮೊದಲ ಮಡದಿ ಒಪ್ಪಿಗೆ ಪಡೆದು ಕೃಷ್ಣ ವಿವಾಹವಾಗಿದ್ದರು.

NTR, ANR ನೋಡಿ ಚಿತ್ರರಂಗಕ್ಕೆ ಎಂಟ್ರಿ
ನಟ ಕೃಷ್ಣ ಥಿಯೇಟರ್ನಲ್ಲರಿ ನೋಡಿದ ಮೊದಲ ಚಿತ್ರ 'ಪಾತಾಳಭೈರವಿ'. ಸಿನಿಮಾ ನೋಡಿ NTR ಅವರಿಗೆ ದೊಡ್ಡ ಅಭಿಮಾನಿ ಆಗಿಬಿಟ್ಟಿದ್ದರು. 'ದೇವದಾಸು' ಸಿನಿಮಾ ನೂರು ದಿನಗಳು ಪೂರೈಸಿದ ಸಂದರ್ಭದಲ್ಲಿ ತೆನಾಲಿಗೆ ANR ಹಾಗೂ ಸಾವಿತ್ರಿ ಹೋಗಿದ್ದರು. ಅವರನ್ನು ನೋಡಲು ಸಾವಿರಾರು ಜನ ಜಮಾಯಿಸಿದ್ದರು. ಅಂದು ಅವರನ್ನೆಲ್ಲಾ ನೋಡಿ ಒಬ್ಬ ಸಿನಿಮಾ ನಟನನ್ನು ಇಷ್ಟು ಜನ ಅಭಿಮಾನಿಸುತ್ತಾರಾ ? ಎಂದು ಅಚ್ಚರಿಗೊಂಡಿದ್ದರು. ಅಂದೇ ಸಿನಿಮಾ ನಟನಾಗುವ ಕನಸು ಕಂಡರು. ಚಿತ್ರರಂಗಕ್ಕೆ ಬರಲು ನಾಟಕಗಳಲ್ಲಿ ನಟಿಸಬೇಕು ಎಂದು ಅರಿತು ಮೊದಲಿಗೆ ನಾಟಕಗಳಲ್ಲಿ ನಟಿಸಲು ಆರಂಭಿಸಿದರು.

ಪ್ರಯೋಗಾತ್ಮಕ ಸಿನಿಮಾಗಳ ಸರದಾರ
ಘಟ್ಟಮನೇನಿ ಕೃಷ್ಣ ತಾಂತ್ರಿಕವಾಗಿ ಸಿನಿಮಾಗಳಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು. ತಮ್ಮದೇ ಪದ್ಮಾಲಯ ಸ್ಟುಡಿಯೋಸ್ ಸಂಸ್ಥೆ ಕಟ್ಟಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು. ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡರು. ಮೊದಲ ತೆಲುಗು ಡಿಟಿಎಸ್ ಸಿನಿಮಾ(ವೀರ ಲೇವರ), ಮೊದಲ ಈಸ್ಟ್ಮನ್ ಕಲರ್ ಸಿನಿಮಾ(ಈನಾಡು), ಮೊದಲ ಸಿನಿಮಾ ಸ್ಕೋಪ್ ಕೌಬಾಯ್ ಸಿನಿಮಾ (ದೊಂಗಲ ದೋಪಿಡಿ), ಮೊದಲ ಸಿನಿಮಾ ಸ್ಕೋಪ್ ಸಾಮಾಜಿಕ ಸಿನಿಮಾ (ದೇವದಾಸು), ಮೊದಲ ಸಿನಿಮಾ ಸ್ಕೋಪ್ ಪೌರಾಣಿಕ ಸಿನಿಮಾ (ಕುರುಕ್ಷೇತ್ರಂ), ಮೊದಲ ಸಿನಿಮಾ ಸ್ಕೋಪ್ ಜೇಮ್ಸ್ ಬಾಂಡ್ ಸಿನಿಮಾ (ಏಜೆಂಟ್ ಗೋಪಿ), ಮೊದಲ 70 ಎಂಎಂ ಸಿನಿಮಾ (ಸಿಂಹಾಸನಂ) ಮೊದಲ ಸಿನಿಮಾ ಸ್ಕೋಪ್ ಸಿನಿಮಾ(ಅಲ್ಲೂರಿ ಸೀತಾರಾಮರಾಜು) ಹೀಗೆ ಟಾಲಿವುಡ್ನಲ್ಲಿ ಹಲವು ಮೊದಲಗಳ ಹರಿಕಾರಗಾಗಿ ಕೃಷ್ಣ ಸದ್ದು ಮಾಡಿದ್ದರು.

70ರ ದಶಕದಲ್ಲೇ ಪ್ಯಾನ್ ಇಂಡಿಯಾ ಚಿತ್ರ
ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಆದರೆ 70ರ ದಶಕದಲ್ಲೇ ಈ ಪ್ರಯತ್ನ ಮಾಡಿ ಘಟ್ಟಮನೇನಿ ಕೃಷ್ಣ ಸಕ್ಸಸ್ ಕಂಡಿದ್ದರು. ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡು ಕೌಬಾಯ್ ಜಾನರ್ನ ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದರು. 'ಮೋಸಗಾಳ್ಲಕು ಮೋಸಗಾಡು' ಚಿತ್ರ 1971ರಲ್ಲಿ ಐದಾರು ಭಾಷೆಗಳಿಗೆ ಡಬ್ ಆಗಿ ಸೂಪರ್ ಹಿಟ್ ಆಗಿತ್ತು. 'ಗೂಢಾಚಾರಿ 116', 'ಜೇಮ್ಸ್ ಬ್ಯಾಂಡ್ 777', 'ಏಜೆಂಟ್ ಗೋಪಿ', 'ರಹಸ್ಯ ಗೂಢಚಾರಿ', 'ಗೂಢಚಾರಿ 117' ಸೇರಿದಂತೆ ಹಲವು ಸ್ಪೈ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು.

ವರ್ಷಕ್ಕೆ 10 ಸಿನಿಮಾಗಳು
ಘಟ್ಟಮನೇನಿ ಕೃಷ್ಣ ವರ್ಷಕ್ಕೆ 10 ಸಿನಿಮಾಗಳಲ್ಲಿ ನಟಿಸಿದ ಉದಾಹರಣೆಯಿದೆ. ವರ್ಷ ಪೂರ್ತಿ ಯಾವುದಾದರೂ ಥಿಯೇಟರ್ನಲ್ಲಿ ಕೃಷ್ಣ ಸಿನಿಮಾಗಳು ಪ್ರದರ್ಶನವಾಗುತ್ತಿದ್ದ ಕಾಲವೊಂದಿತ್ತು. ದಿನಕ್ಕೆ 3 ಶಿಫ್ಟ್ಗಳಂತೆ ಒಟ್ಟೊಟ್ಟಿಗೆ 3 ಸಿನಿಮಾಗಳಲ್ಲಿ ನಟಿಸುತ್ತಿದ್ದರು. 1964ರಿಂದ 1995ರ ವರೆಗೆ 31 ವರ್ಷಗಳ ಕರಿಯರ್ನಲ್ಲಿ ಬರೋಬ್ಬರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಾಖಲೆ ಬರೆದಿದ್ದರು. 1972ರಲ್ಲಿ 17 ಸಿನಿಮಾಗಳು ಬಿಡುಗಡೆಯಾಗಿ ದಾಖಲೆ ನಿರ್ಮಾಣವಾಗಿತ್ತು. 90ರ ದಶಕದ ನಂತರ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. 2016ರಲ್ಲಿ 'ಶ್ರೀ ಶ್ರೀ' ಕೃಷ್ಣ ಬಣ್ಣ ಹಚ್ಚಿದ ಕೊನೆಯ ಸಿನಿಮಾ.

ಸಾಕಷ್ಟು ಪ್ರಶಸ್ತಿ ಪುರಸ್ಕಾರ
2008ರಲ್ಲಿ ಆಂಧ್ರ ವಿಶ್ವವಿದ್ಯಾಲಯ ಘಟ್ಟಮನೇನಿ ಕೃಷ್ಣ ಅವರಿಗೆ 'ಗೌರವ ಡಾಕ್ಟರೇಟ್' ನೀಡಿ ಗೌರವಿಸಿತ್ತು. ಇನ್ನು ಚಿತ್ರರಂಗಕ್ಕೆ ನೀಡಿದ ಕೊಡುಗೆ ಪುರಸ್ಕರಿಸಿ ಕೇಂದ್ರ ಸರ್ಕಾರ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿತ್ತು. 2003ರಲ್ಲಿ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಜೀವಮಾನ ಶ್ರೇಷ್ಟ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ದಕ್ಕಿತ್ತು. ಕೃಷ್ಣ ವೃತ್ತಿಜೀವನದ ಆರಂಭದಲ್ಲಿ ನಟಿಸಿದ 'ಸಾಕ್ಷಿ' ಸಿನಿಮಾ 1968 ರಲ್ಲಿ ತಾಷ್ಕೆಂಟ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡಿತ್ತು. 1972 ರಲ್ಲಿ ನಟಿಸಿದ 'ಪಂಡಂಟಿ ಕಾಪುರಂ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಇನ್ನು ಕಾಂಗ್ರೆಸ್ ಪಕ್ಷ ಸೇರಿ ಲೋಕಸಭಾ ಸದಸ್ಯರಾಗಿಯೂ ಕೃಷ್ಣ ಸೇವೆ ಸಲ್ಲಿಸಿದ್ದರು.


Click it and Unblock the Notifications











